‘ನನ್ನ ನಿರ್ದೇಶನದ ಮೊದಲ ಸಿನಿಮಾ ಇದು, ಮೊದಲ ಆಡಿಯೊ ರಿಲೀಸ್ ಫಂಕ್ಷನ್ನಲ್ಲಿ ಮಾತಾಡಲಿಕ್ಕೆ ಭಯ ಆಗ್ತಿದೆ’. ಪ್ರಶಾಂತ್ ಮಾತಿನಲ್ಲಿ ಆಯಾಸವೋ ಆತಂಕವೋ... ಒಟ್ಟಿನಲ್ಲಿ ಅವರು ಸುಸ್ತಾಗಿದ್ದು ಮಾತ್ರ ಢಾಳಾಗಿ ಕಾಣಿಸುತ್ತಿತ್ತು. ‘ನಿರ್ದೇಶಕನಾಗಿದ್ದು, ಅದೂ ಸುದೀಪ್ ಇರುವ ಚಿತ್ರ ನಿರ್ದೇಶನ ಮಾಡಿದ್ದು ನನ್ನ ಪುಣ್ಯ’ ಎಂದು ಕೃತಾರ್ಥರಾದರು!
ನಿರ್ದೇಶಕ ಎಂ.ಡಿ. ಶ್ರೀಧರ್ ಬಳಿ ಸಹಾಯಕನಾಗಿ ಕೆಲಸ ಮಾಡಿದ ಅನುಭವವಿರುವ ಎಸ್. ಪ್ರಶಾಂತ್ ಮೊದಲ ಬಾರಿಗೆ ‘ರಂಗನ್ ಸ್ಟೈಲ್’ಗೆ ಆಕ್ಷನ್–ಕಟ್ ಹೇಳಿದ್ದಾರೆ. ಈ ಚಿತ್ರದ ಗೀತೆಗಳ ದನಿಸುರುಳಿ ಬಿಡುಗಡೆಯ ರಂಗುರಂಗಿನ ಸಮಾರಂಭಕ್ಕೆ ಸುದೀಪ್ ಹಾಜರಿ ಮತ್ತಷ್ಟು ರಂಗೇರಿಸಿತ್ತು. ಎಲ್ಲರೂ ತಮ್ಮ ಮಾತಿನಲ್ಲಿ ಅರ್ಧ ಭಾಗವನ್ನು ಸುದೀಪ್ ಗುಣಗಾನಕ್ಕೆ ಮೀಸಲಿಟ್ಟರು!
ತಮ್ಮ ಒಂದು ಮನವಿಗೆ ಸ್ಪಂದಿಸಿ ಅಭಿನಯಿಸಿದ ಸುದೀಪ್ ಬಗ್ಗೆ ಪ್ರಶಾಂತ್ ಒಂದಷ್ಟು ಹೆಚ್ಚು ಹೊಗಳಿದರು. ‘ಅವರ ಅಭಿಮಾನಿ ನಾನು. ನನ್ನ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ನಾನು ಋಣಿ’ ಎಂದು ಒಂದೇ ಉಸುರಿನಲ್ಲಿ ಹೇಳಿದರು ಪ್ರಶಾಂತ್. ‘ಜಾಲಿಡೇಸ್’ ಸಿನಿಮಾದ ಚಿತ್ರೀಕರಣ ಸಮಯದಲ್ಲಿ ಸಹಾಯಕ ನಿರ್ದೇಶಕನಾಗಿದ್ದ ಪ್ರಶಾಂತ್, ನಟ ಪ್ರದೀಪ್ಗೆ ಹೇಳಿದ್ದರಂತೆ: ‘ನನ್ನ ಮೊದಲ ಸಿನಿಮಾಕ್ಕೆ ನೀನೇ ಹೀರೊ’.
ಆ ಮಾತನ್ನು ಪ್ರಶಾಂತ್ ಉಳಿಸಿಕೊಂಡರು ಎಂದು ಸ್ಮರಿಸಿದರು ಪ್ರದೀಪ್. ಸಿ.ಡಿ. ಅಂಗಡಿ ಇಟ್ಟುಕೊಂಡ ಅನಾಥ ಹುಡುಗ ರಂಗ, ಪ್ರೀತಿ- ಪ್ರೇಮ ಎಂದರೆ ಉರಿದುಬೀಳುವಂಥವನು. ಸಿ.ಡಿ. ಅಂಗಡಿಗೆ ಬರುವ ಹುಡುಗಿ, ಆತನ ಬದುಕಿನಲ್ಲೂ ಪ್ರವೇಶಿಸುತ್ತಾಳೆ. ಆಗ ನಡೆಯುವ ಘಟನೆಗಳೇ ಸಿನಿಮಾದ ಹೂರಣ ಎಂದು ಕಥೆ ತೆರೆದಿಟ್ಟರು.
ಜಯಂತ ಕಾಯ್ಕಿಣಿ, ಕವಿರಾಜ್, ವಿಘ್ನೇಶ್ವರ ವಿಶ್ವ, ರವಿ ಅವರೊಂದಿಗೆ ಹಾಡೊಂದನ್ನು ಬರೆದು ಚಿತ್ರಕ್ಕೆ ಸಂಗೀತ ನೀಡಿದ್ದಾರೆ ಗುರುಕಿರಣ್. ‘ನಿಮ್ದೆಲ್ಲ ಹೊಸ ಹುಡುಗ್ರ ತಂಡ. ಟೆನ್ಶನ್ ಇರೋದು ಸಹಜ. ಚಿಂತೆ ಬೇಡ. ಸಿನಿಮಾ ಚೆನ್ನಾಗಿ ಬಂದಿದೆ’ ಎಂಬ ವಿಶ್ವಾಸವನ್ನು ಚಿತ್ರತಂಡಕ್ಕೆ ಗುರುಕಿರಣ್ ತುಂಬಿದರು. ಸುದೀಪ್ ಹಾಗೂ ಸಾಧುಕೋಕಿಲ ತೆರೆ ಮೇಲೆ ಬಂದಾಗ ‘ಬ್ಲಾಸ್ಟ್’ ಆಗುವುದು ಖಚಿತ ಎಂದು ಭವಿಷ್ಯ ನುಡಿದರು!
ಈ ಸಮಾರಂಭಕ್ಕೆಂದೇ ಮುಂಬೈನಿಂದ ಬಂದಿದ್ದರು ನಾಯಕಿ ಕನ್ನಿಕಾ ತಿವಾರಿ. ಕನ್ನಡ ಚಿತ್ರರಂಗಕ್ಕೆ ತಾನು ಹೊಸಬಳಾದರೂ ಗುರುಕಿರಣ್ ಹಾಗೂ ಸುದೀಪ್ ಜತೆ ಕೆಲಸ ಮಾಡಲು ಸಿಕ್ಕ ಅವಕಾಶ ಅದ್ಭುತ ಎಂದು ಇಂಗ್ಲಿಷ್ನಲ್ಲಿ ಹೇಳಿ ರೋಮಾಂಚನಪಟ್ಟರು. ವಿಭಿನ್ನ ಪ್ರೇಮಕಥೆ, ವಿಭಿನ್ನ ಕ್ಲೈಮ್ಯಾಕ್ಸ್ನ ಈ ಚಿತ್ರದಲ್ಲಿ ತಮ್ಮದು ನೆಗೆಟಿವ್ ಪಾತ್ರ ಎಂದಿದ್ದು ಇನ್ನೊಬ್ಬ ನಾಯಕಿ ದೀಪಿಕಾ ದಾಸ್.
ಶಿಷ್ಯರನ್ನು ಅಭಿನಂದಿಸಲು ಬಂದಿದ್ದ ನಿರ್ದೇಶಕ ಎಂ.ಡಿ. ಶ್ರೀಧರ್, ಪ್ರಶಾಂತ್ ಕರ್ತವ್ಯಶ್ರದ್ಧೆ ಹಾಗೂ ಪ್ರದೀಪ್ ಅಭಿನಯವನ್ನು ಮೆಚ್ಚಿ ಶುಭ ಕೋರಿದರು. ಎಲ್ಲರ ಹೊಗಳಿಕೆಗೆ ಪ್ರತಿಕ್ರಿಯಿಸಿದ ಸುದೀಪ್– ‘ಸ್ನೇಹಿತ ಕರೆದ. ನಾನು ಬಂದು ಅಭಿನಯಿಸಿದೆ. ನಿಮ್ಮೆಲ್ಲರ ಪ್ರೀತಿಗೆ ಥ್ಯಾಂಕ್ಸ್’ ಎಂದರು. ‘ಪ್ರದೀಪ್ಗೆ ಹುಡುಗಿಯರನ್ನು ಕಂಡ್ರೆ ಈ ಸಿನಿಮಾದಲ್ಲಿ ಮಾತ್ರ ಆಗೋದಿಲ್ಲ. ಯಾಕೆಂದ್ರೆ ಮುಂದಿನ ತಿಂಗಳು ಅವನ ಮದುವೆ’ ಎಂದು ಸುದೀಪ್ ಪ್ರಕಟಿಸಿದಾಗ ಪ್ರದೀಪ್ ತುಸು ನಾಚಿಕೆಯಿಂದಲೇ ಮುಗುಳ್ನಕ್ಕರು.
ಇದಕ್ಕೂ ಮುನ್ನ ಎಸ್.ಎಸ್.ಕೆ. ತಂಡದ ಕಲಾವಿದರು ಇದೇ ಚಿತ್ರದ ‘ಗಂಗ್ನಮ್ ಸ್ಟೈಲ್’ ಹಾಡಿಗೆ ಕುಣಿದು ಕುಪ್ಪಳಿಸಿದರು. ನಿರ್ಮಾಪಕರಾದ ರಜನೀಶ ಹಾಗೂ ಶ್ರೀನಿವಾಸ ಕಾಮತ್, ಸಂಭಾಷಣೆಕಾರ ಮಂಜು, ಅನಂದ್ ಆಡಿಯೊದ ಶ್ಯಾಮ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.