ADVERTISEMENT

ರಾಜನ ಜತೆಗೆ ರಾಧೆಯ ಪ್ರೇಮ

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2017, 19:30 IST
Last Updated 7 ಸೆಪ್ಟೆಂಬರ್ 2017, 19:30 IST
ರಾಧಿಕಾಪ್ರೀತಿ
ರಾಧಿಕಾಪ್ರೀತಿ   

‘ಪ್ರೀತಿಗೋಸ್ಕರ ಏನು ಬೇಕಾದರೂ ತ್ಯಾಗ ಮಾಡಿ, ಆದರೆ ಪ್ರೀತಿಯನ್ನು ಮಾತ್ರ ತ್ಯಾಗ ಮಾಡಬೇಡಿ’ ಸಭಿಕರನ್ನು ಉದ್ದೇಶಿಸಿ ಒಂದು ಸಂದೇಶವನ್ನು ಹೇಳಿದ ಹಾಗೂ ಆಗಬೇಕು, ತಮ್ಮ ಸಿನಿಮಾದ ಕಥೆಯ ಎಳೆಯನ್ನೂ ಬಿಟ್ಟುಕೊಡಬೇಕು, ಹೀಗೆ ಒಂದೇ ಸಾಲಿನಲ್ಲಿ ಎರಡು ಉದ್ದೇಶಗಳನ್ನು ಸಾಧಿಸುವ ರೀತಿಯಲ್ಲಿ ಹೀಗೆ ಹೇಳಿ ಸುಮ್ಮನಾದರು ನಿರ್ದೆಶಕ ಎಂ. ರಾಜಶೇಖರ್‌.

ಆ ಸಾಲಿನಲ್ಲಿ ಅವರ ನಿರ್ದೇಶನದ ‘ರಾಜು ಲವ್ಸ್‌ ರಾಧೆ’ ಚಿತ್ರದ ಸಾರಾಂಶವೇ ಇದೆಯಂತೆ. ಇತ್ತೀಚೆಗೆ ಚಿತ್ರದ ಧ್ವನಿಸುರಳಿ ಬಿಡುಗಡೆ ಕಾರ್ಯಕ್ರಮದಲ್ಲಿ ನಿರ್ದೇಶಕರು ಈ ಎಳೆಯನ್ನು ಬಿಟ್ಟುಕೊಟ್ಟರು.

ನಿರ್ಮಾಪಕ ಎಚ್‌. ಎಲ್‌.ಎನ್‌. ರಾಜ್‌ ಅವರು ತಮ್ಮ ಮಾತಿನ ಬಹುಪಾಲನ್ನು ನಾಯ ಕನಟ ವಿಜಯ ರಾಘವೇಂದ್ರ ಅವರನ್ನು ಹಾಡಿ ಹೊಗಳಲಿಕ್ಕಾಗಿಯೇ ಮೀಸಲಿಟ್ಟರು. ‘ಇಂಥ ನಟರು, ಮೊದಲನೇ ಶ್ರೇಣಿಗೆ ಬಂದಲ್ಲಿ ಚಿತ್ರರಂಗಕ್ಕೆ ಅನುಕೂಲ’ ಎನ್ನುವುದು ಅವರ ಅಭಿಮತ.

ADVERTISEMENT

(ವಿಜಯ ರಾಘವೇಂದ್ರ)

‘ಈ ಚಿತ್ರದಲ್ಲಿ ಮೆಕ್ಯಾನಿಕ್‌ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಸ್ಲಂ ಹುಡುಗನೊಬ್ಬ ಪ್ರೀತಿ ಮಾಡಿದಾಗ ಏನೆಲ್ಲಾ ಸಮಸ್ಯೆಗಳು ಎದುರಾಗುತ್ತವೆ ಎನ್ನುವುದನ್ನು ಈ ಚಿತ್ರದಲ್ಲಿ ಹೇಳಲಾಗಿದೆ. ಕಾಮಿಡಿ, ಆ್ಯಕ್ಷನ್‌, ಥ್ರಿಲ್ಲರ್‌ ಎಲ್ಲ ಅಂಶಗಳೂ ಇರುವ ಸಿನಿಮಾ ಇದು’ ಎಂದು ಹೇಳಿದರು ವಿಜಯ ರಾಘವೇಂದ್ರ. ರವಿಶಂಕರ್‌, ತಬಲಾ ನಾಣಿ, ಕುರಿ ಪ್ರತಾಪ್‌ ಮುಂತಾದವರು ಮುಖ್ಯ ಭೂಮಿಕೆಯಲ್ಲಿದ್ದಾರೆ. ಚಿತ್ರದಲ್ಲಿನ ಐದು ಹಾಡುಗಳಿಗೆ ವೀರಸಮರ್ಥ್‌ ಸಂಗೀತ ಸಂಯೋಜಿಸಿದ್ದಾರೆ. ನಾಯಕಿ ರುತೀಕ್ಷಾ ಈ ಚಿತ್ರದಲ್ಲಿ ಆರ್‌ಜೆ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ‘ನಾ ಪಂಟ ಕಣೋ’ ಸಿನಿಮಾದಲ್ಲಿ ನಟಿಸಿದ್ದ ಅವರಿಗಿದು ಎರಡನೇ ಸಿನಿಮಾ. ಅವರು ತಮ್ಮ ಹೆಸರನ್ನು ರಾಧಿಕಾ ಪ್ರೀತಿ ಎಂದು ಬದಲಾಯಿಸಿಕೊಂಡಿದ್ದಾರೆ.

ಚಿತ್ರಕ್ಕೆ ಸಂಭಾಷಣೆ ಬರೆದಿರುವುದರ ಜತೆಗೆ ಒಂದು ಹಾಡಿಗೆ ಸಾಹಿತ್ಯ ರಚಿಸಿರುವ ಪತ್ರಕರ್ತ ವಿಜಯ ಭರಮಸಾಗರ ‘ಸಿನಿಮಾ ಎನ್ನುವುದು ಒಬ್ಬ ವ್ಯಕ್ತಿಯ ಉತ್ಪನ್ನ ಅಲ್ಲ, ಅದು ಲೈಟ್‌ ಬಾಯ್‌ನಿಂದ ಹಿಡಿದು ನಿರ್ದೇಶಕನವರೆಗೆ ಎಲ್ಲರ ಶ್ರಮದ ಫಲವಾಗಿರುತ್ತದೆ. ಎಲ್ಲ ವರ್ಗದ ಜನರೂ ಇಷ್ಟಪಡುವ ಕಥೆ, ಹಾಡು, ಹಾಸ್ಯ, ಮನರಂಜನೆ ಎಲ್ಲವೂ ಇರುವ ಸಿನಿಮಾವೊಂದನ್ನು ಮಾಡಿದ್ದೇವೆ’ ಎಂದು ವಿವರಿಸಿದರು.

ಎಚ್‌.ಎಲ್‌.ಎನ್‌. ರಾಜ್‌ ಅವರ ಶಾಲೆಯಲ್ಲಿ ವ್ಯಾಸಾಂಗ ಮಾಡಿದ್ದ ನಿರ್ದೇಶಕ ಸುನಿ ಹಳೆಯ ನೆನಪುಗಳನ್ನು ಮೆಲುಕು ಹಾಕಿದರು. ಡ್ಯಾನಿ ಕುಟ್ಟಪ್ಪ, ಮಿತ್ರ, ಶಿವಕುಮಾರ್‌ ಧ್ವನಿಸುರಳಿ ಬಿಡುಗಡೆ ಕಾರ್ಯಕ್ರಮದಲ್ಲಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.