ADVERTISEMENT

ಶ್ರೀ ಅಸಾಮಾನ್ಯ!

​ಪ್ರಜಾವಾಣಿ ವಾರ್ತೆ
Published 3 ಮೇ 2018, 19:30 IST
Last Updated 3 ಮೇ 2018, 19:30 IST
ಶಕ್ತಿ
ಶಕ್ತಿ   

ಹೆಸರು ಶ್ರೀಸಾಮಾನ್ಯ. ಸಾಮಾನ್ಯನಿಗೆ ನಿಲುಕದಷ್ಟು ದೊಡ್ಡ ವೇದಿಕೆ. ವೇದಿಕೆಯ ಮುಂದೆ ಸಾಲಾಗಿ ನಿಲ್ಲಿಸಿದ ಹಸಿರು ಗಿಡಗಳು... ಬಂದವರಿಗೆ ಮಡಕೆಯಲ್ಲಿ ಪಾನಕ ವಿತರಣೆ. ಡುರ್‍ರನೇ ಹಾರಾಡುತ್ತಿರುವ ಡ್ರೋನ್‌ ಕ್ಯಾಮೆರಾ. ಇಕ್ಕೆಲಗಳಲ್ಲಿ ಫ್ಲೆಕ್ಸ್‌ಗಳು... ಅದು ‘ಶ್ರೀಸಾಮಾನ್ಯ’ ಸಿನಿಮಾ ಧ್ವನಿಸಾಂದ್ರಿಕೆ ಬಿಡುಗಡೆ ಕಾರ್ಯಕ್ರಮ. ಹಂಸಲೇಖ ಅವರ ಹಾಜರಿಯ ರುಜುವೂ ಇತ್ತು ಅದಕ್ಕೆ.

‘ಪ್ಲಾಸ್ಟಿಕ್ ಬಳಕೆ ನಿಲ್ಲಿಸಬೇಕು, ಪರಿಸರ ಉಳಿಸಬೇಕು’ ಎಂಬ ಸಂದೇಶವನ್ನು ಇಟ್ಟುಕೊಂಡು ಗುಣವಂತ ಮಂಜು ಅವರು ಕಟ್ಟಿದ ಕಥೆಗೆ ಭಾರತಿ ಎಂ. ಸುರೇಶ್ ಮತ್ತು ಕೆ. ಆರ್. ಸುರೇಶ್‌ ಹಣ ಹೂಡಿದ್ದಾರೆ. ಅವರ ಮಗಳು ಶಕ್ತಿಯೇ ಈ ಚಿತ್ರದ ನಾಯಕಿ. ‘ಇಷ್ಟು ಒಳ್ಳೆಯ ಸಿನಿಮಾ ಮೂಲಕ ಚಿತ್ರರಂಗಕ್ಕೆ ಅಡಿಯಿಡಲು ಅವಕಾಶ ಕಲ್ಪಿಸಿದ ಅಪ್ಪ–ಅಮ್ಮನಿಗೆ ಕೃತಜ್ಞಳಾಗಿದ್ದೇನೆ’ ಎಂದರು ಶಕ್ತಿ.

ಈ ಚಿತ್ರಕ್ಕೆ ಆ್ಯಕ್ಷನ್ ಕಟ್‌ ಹೇಳುವುದರ ಜತೆಗೆ ಮುಖ್ಯ ಪಾತ್ರವೊಂದರಲ್ಲಿ ನಟಿಸಿದ್ದಾರೆ ಗುಣವಂತ ಮಂಜು. ಐವತ್ತು ಜನ ರಂಗಭೂಮಿ ಕಲಾವಿದರಿಗೂ ‘ಶ್ರೀಸಾಮಾನ್ಯ’ ಚಿತ್ರದಲ್ಲಿ ಅವಕಾಶ ನೀಡಿದ್ದಾರೆ.

ADVERTISEMENT

‘ಶ್ರೀ ಸಾಮಾನ್ಯ ಹೆಸರು ಹೇಳಿದ ತಕ್ಷಣ ಈ ಚಿತ್ರಕ್ಕೆ ನಮ್ಮ ಮಗಳನ್ನೇ ನಾಯಕಿಯನ್ನಾಗಿ ಮಾಡಬೇಕು ಅನಿಸಿತು. ಹಲವು ಸಾಮಾಜಿಕ ಸಂದೇಶಗಳನ್ನು ಇಟ್ಟುಕೊಂಡು ಈ ಚಿತ್ರವನ್ನು ಮಾಡಿದ್ದೇವೆ’ ಎಂದರು ಭಾರತಿ. ‘ಗುಣವಂತ ಮಂಜು ಕಥೆ ಹೇಳಿದ ಮೂರೇ ದಿನದಲ್ಲಿ ಚಿತ್ರ ಮಾಡುವುದಾಗಿ ನಿರ್ಧರಿಸಿದೆವು. ಮುಂದಿನ ಹತ್ತು ದಿನಗಳಲ್ಲಿ ಚಿತ್ರೀಕರಣ ಆರಂಭಿಸಿದೆವು. ಇಂದು ಶ್ರೀಸಾಮಾನ್ಯರೆಲ್ಲ ಅಸಾಮಾನ್ಯರಾಗಬೇಕಾದ ಅಗತ್ಯವನ್ನು ಈ ಚಿತ್ರ ಹೇಳುತ್ತದೆ’ ಎಂದ ಸುರೇಶ್‌ ಪ್ಲಾಸ್ಟಿಕ್ ಬಳಕೆ ದುಷ್ಪರಿಣಾಮಗಳ ಬಗ್ಗೆ ಭಾಷಣವನ್ನೂ ಮಾಡಿದರು. ನಂತರ ತೋರಿಸಿದ ಚಿತ್ರದ ಮೂರು ಹಾಡುಗಳೂ ಆ ಭಾಷಣದ ಮುಂದುವರಿಕೆಯಂತೆಯೇ ಇದ್ದವು.

ಇಂದ್ರಸೇನ ಈ ಚಿತ್ರದ ಹಾಡುಗಳಿಗೆ ಸಂಗೀತ ಸಂಯೋಜಿಸಿದ್ದಾರೆ. ‘ಗುಣವಂತ ನಿರ್ದೇಶಕ ಮತ್ತು ಹೃದಯವಂತ ನಿರ್ಮಾಪಕಿ ಸೇರಿ ಶ್ರೀಮಂತ ಚಿತ್ರವಾಗಿದೆ’ ಎಂದು ಕಾವ್ಯಾತ್ಮಕವಾಗಿಯೇ ಅವರು ಚಿತ್ರದ ಕುರಿತು ಹೇಳಿದರು. ಲತಾ ಹಂಸಲೇಖ ತಮ್ಮ 501ನೇ ಹಾಡನ್ನು ಈ ಚಿತ್ರದಲ್ಲಿ ಹಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.