ಮನುಷ್ಯರ ನಡುವಿನ ಸಂಬಂಧಗಳ ಬೆಲೆಯನ್ನು ಹೇಳುವ ಸಿನಿಮಾ ‘ಏಪ್ರಿಲ್ನ ಹಿಮಬಿಂದು’. ಈ ಸಿನಿಮಾ ಶುಕ್ರವಾರ ತೆರೆಯ ಮೇಲೆ ಕಾಣಿಸಿಕೊಳ್ಳಲಿದೆ.
‘ನಾನು ನಮ್ಮ ಸುತ್ತ ಇರುವುದೆಲ್ಲವನ್ನೂ ಬಿಟ್ಟು, ಇರದುದರ ಬಗ್ಗೆ ಹುಡುಕಾಟ ನಡೆಸುತ್ತೇವೆ’ ಎಂದು ಕಾವ್ಯಾತ್ಮಕವಾಗಿ ಮಾತು ಆರಂಭಿಸಿದವರು ಜೋಡಿ ನಿರ್ದೇಶಕರಾದ ಶಿವು ಮತ್ತು ಜಗನ್. ಈ ಸಿನಿಮಾಕ್ಕೆ ಶೀರ್ಷಿಕೆ ಸೂಚಿಸಿದ್ದಕ್ಕಾಗಿ ದತ್ತಣ್ಣ ಅವರಿಗೆ ಧನ್ಯವಾದ ಸಮರ್ಪಿಸಿತು ಈ ಜೋಡಿ.
‘ನಿಜ ಜೀವನದಲ್ಲಿ ನಾನು ಸಂಸಾರಸ್ಥ. ಆದರೆ, ತೆರೆಯ ಮೇಲೆ ನಾನು ಬ್ರಹ್ಮಚಾರಿಯ ಪಾತ್ರ ನಿಭಾಯಿಸಿದ್ದೇನೆ. ಸಹನಟ ದತ್ತಣ್ಣ ಅವರು ತೆರೆಯ ಮೇಲಿನ ಬದುಕಿನಲ್ಲಿ ಕುಟುಂಬವನ್ನು ಹೊಂದಿದ್ದಾರೆ. ಆದರೆ ನಿಜ ಜೀವನದಲ್ಲಿ ಅವರು ಏಕಾಂಗಿ. ನಾನು ನನ್ನ ಪಾತ್ರ ನಿಭಾಯಿಸುವಾಗ ದತ್ತಣ್ಣ ಅವರಿಂದ ಸಲಹೆ ಪಡೆದಿದ್ದೇನೆ’ ಎಂದು ಹೇಳಿದರು ಬಾಬು ಹಿರಣ್ಣಯ್ಯ.
ಇದು ಮುದುಕರ ಚಿತ್ರ ಅಲ್ಲವಂತೆ. ಮೂವರು ಹುಡುಗರ ಕಥನ ಇದರಲ್ಲಿ ಇದೆಯಂತೆ. ‘ಎಲ್ಲವೂ ಇದ್ದೂ, ಏನೂ ಇಲ್ಲ ಎನ್ನುವ ಒಬ್ಬನ ತಾಕಲಾಟ, ಇರುವುದನ್ನು ಉಪಯೋಗಿಸಿಕೊಳ್ಳದೆ ಇಲ್ಲದ್ದನ್ನು ಹುಡುಕುವ ಮತ್ತೊಬ್ಬನ ಸಂಕಟ... ಇಂತಹ ಭಾವನೆಗಳನ್ನು ಹಾಸ್ಯದ ಲೇಪದ ಮೂಲಕ ಹೇಳುವ ಪ್ರಯುತ್ನ ಸಿನಿಮಾದಲ್ಲಿ ಇದೆ’ ಎಂದು ಹೇಳಿದರು ದತ್ತಣ್ಣ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.