ADVERTISEMENT

ಸಿನಿಮಾ ಮೋಹಿಗಳ ‘ಅದ್ವೈತ’

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2013, 19:30 IST
Last Updated 5 ಡಿಸೆಂಬರ್ 2013, 19:30 IST

ನಾಯಕ ಅಜಯ್ ಸ್ವೀಡನ್‌ನಲ್ಲಿ, ನಾಯಕಿ ಹರ್ಷಿಕಾ ಹೈದರಾಬಾದಿನಲ್ಲಿ. ಇನ್ನೊಬ್ಬ ಪ್ರಮುಖ ಪಾತ್ರಧಾರಿ ಅಚ್ಯುತಕುಮಾರ್ ಮಾಗಡಿಯಲ್ಲಿ. ಅವರೆಲ್ಲ ಬೇರಾವುದೋ ಚಿತ್ರೀಕರಣದಲ್ಲಿ ‘ಬಿಜಿ’ಯಾಗಿದ್ದರೆ, ತೆರೆ ಹಿಂದೆ ಇದ್ದವರೆಲ್ಲ ‘ಅದ್ವೈತ’ ಚಿತ್ರ ಬಿಡುಗಡೆಯಾಗುತ್ತಿರುವ ಖುಷಿಯಲ್ಲಿದ್ದರು. ಮುಹೂರ್ತವಾದ ಎರಡು ವರ್ಷಗಳ ಬಳಿಕ ಡಿ. 6ರಂದು ತೆರೆ ಮೇಲೆ ಬರಲು ಸಿದ್ಧವಾಗಿದೆ ‘ಅದ್ವೈತ’.

‘ಜಟ್ಟ’ದ ಮೂಲಕ ಚಿತ್ರರಂಗದ ಗಮನ ಸೆಳೆದ ನಿರ್ದೇಶಕ ಬಿ.ಎಂ. ಗಿರಿರಾಜ್, ಅದಕ್ಕಿಂತ ಮೊದಲೇ ‘ಅದ್ವೈತ’ಕ್ಕೆ ಆಕ್ಷನ್– ಕಟ್ ಹೇಳಿದ್ದರು. ಆದರೆ ಬಿಡುಗಡೆಗೆ ಹತ್ತಾರು ವಿಘ್ನಗಳು ಎದುರಾದವು. ‘ಯಾಕೋ ಸ್ವಲ್ಪ ತಡ ಆಯ್ತು. ಈಗ ಎಲ್ಲಾ ಅಡ್ಡಿ ನಿವಾರಣೆಯಾಗಿವೆ’ ಎಂದ ನಿರ್ಮಾಪಕ ಎನ್.ಎಂ. ಸುರೇಶ ಮುಖದಲ್ಲಿ ನಿರಾಳಭಾವ ತುಳುಕಾಡುತ್ತಿತ್ತು. ಸಿನಿಮಾ ಬಿಡುಗಡೆಯಾಗುತ್ತದೋ ಇಲ್ಲವೋ ಎಂಬ ನಿರ್ದೇಶಕ ಗಿರಿರಾಜ ಆತಂಕಕ್ಕೂ ಈಗ ಪರಿಹಾರ ಸಿಕ್ಕಿದೆ ಎಂದರು.

ಗುಣಮಟ್ಟದೊಂದಿಗೆ ಸುರೇಶ ಯಾವತ್ತೂ ರಾಜಿ ಮಾಡಿಕೊಂಡಿಲ್ಲವಂತೆ. ಹಾಡೊಂದನ್ನು ಚಿಕ್ಕಮಗಳೂರಿನಲ್ಲಿ ಮೂರು ದಿನಗಳ ಕಾಲ ಚಿತ್ರೀಕರಿಸಲಾಗಿತ್ತು. ಅದನ್ನು ನೋಡಿದ ಸುರೇಶ್‌ ತೃಪ್ತರಾಗದೇ ಭಟ್ಕಳದಲ್ಲಿ ಐದು ದಿನ ಮತ್ತೆ ಚಿತ್ರೀಕರಿಸಲು ಸೂಚಿಸಿದರಂತೆ. ‘ಸಿನಿಮಾನ ನಾನು ಪ್ರೀತಿಯಿಂದ ಮಾಡ್ತೀನಿ’ ಎಂಬ ತಮ್ಮ ಮಾತಿಗೆ ನಿದರ್ಶನ ಕೊಟ್ಟು ವಿವರಿಸಿದ್ದು ಸುರೇಶ್.

ಭಾವನಾತ್ಮಕ ಪಾತ್ರಗಳಲ್ಲಿ ಗಮನ ಸೆಳೆದಿರುವ ಅಜಯ್‌ಗೆ ಈ ಚಿತ್ರದಲ್ಲಿ ವಿಭಿನ್ನ ಪಾತ್ರ ಇದೆಯಂತೆ. ಅಚ್ಯುತ ಅವರದೂ ತೀರಾ ಭಿನ್ನ ಅಭಿನಯ. ‘ಪ್ರತಿ ಪಾತ್ರಕ್ಕೂ ಎರಡು– ಮೂರು ಆಯಾಮಗಳಿದ್ದು, ವೀಕ್ಷಕರು ಕಲಾವಿದರಿಬ್ಬರ ಅಭಿನಯದ ಪೈಪೋಟಿ ಕಾಣಲಿದ್ದಾರೆ’ ಎಂದು ನಿರ್ದೇಶಕ ಗಿರಿರಾಜ್ ಬಣ್ಣಿಸಿದರು.

ಚಿತ್ರಕ್ಕೆ ಕ್ಯಾಮೆರಾ ಹಿಡಿದ ಕಿರಣ್‌ಗೆ ಇದು ಮೊದಲ ಚಿತ್ರ. ನಿರ್ಮಾಪಕರ ಉತ್ತೇಜನ ಹಾಗೂ ಯಾವುದಕ್ಕೂ ಕೊರತೆಯಾಗದಂತೆ ನೋಡಿಕೊಂಡ ಬಗೆಯನ್ನು ಸ್ಮರಿಸಿದರು. ನಟ ನೀನಾಸಂ ಅಶ್ವತ್ಥ, ಸಾಹಸ ದೃಶ್ಯ ಸಂಯೋಜಿಸಿದ ಡಿಫೆರೆಂಟ್ ಡ್ಯಾನಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.