ADVERTISEMENT

‘ಉಳಿದವರು ಕಂಡಂತೆ’

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2013, 19:59 IST
Last Updated 19 ಸೆಪ್ಟೆಂಬರ್ 2013, 19:59 IST

‘ಉಳಿದವರು ಕಂಡಂತೆ’ ಮೊದಲ ಹಂತ ಪೂರ್ಣ
‘ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ’ ನಿರ್ದೇಶಕ ಸುನೀಲ್‌ ನಿರ್ಮಿಸುತ್ತಿರುವ ‘ಉಳಿದವರು ಕಂಡಂತೆ’ ಚಿತ್ರದ ಚಿತ್ರೀಕರಣ ಶೇ ೭೫ರಷ್ಟು ಪೂರ್ಣವಾಗಿದೆ. ನಟ ರಕ್ಷಿತ್ ಶೆಟ್ಟಿ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿದ್ದಾರೆ. ರಕ್ಷಿತ್ ಶೆಟ್ಟಿ, ಕಿಶೋರ್, ಯಜ್ಞಾ ಶೆಟ್ಟಿ, ಶೀತಲ್ ಶೆಟ್ಟಿ, ತಾರಾ, ಚಿತ್ರಾ, ರಿಷಬ್ ಶೆಟ್ಟಿ ಇತರರು ಚಿತ್ರದ ತಾರಾ ಬಳಗದಲ್ಲಿದ್ದಾರೆ. ಉಡುಪಿ, ಕುಂದಾಪುರ, ಬ್ರಹ್ಮಾವರ ಸುತ್ತಮುತ್ತ  ಚಿತ್ರೀಕರಣ ನಡೆದಿದೆ.

ಮಾತಿನಮನೆಯಲ್ಲಿ ‘ಐಸ್‌ಪೈಸ್’
ಸುರೇಶ್‌ ಮುತ್ತಪ್ಪ ನಿರ್ಮಿಸುತ್ತಿರುವ ‘ಐಸ್‌ಪೈಸ್’ ಚಿತ್ರದ ಮಾತಿನ ಜೋಡಣೆ ಕಾರ್ಯ ನಡೆಯುತ್ತಿದೆ. ರಂಗಾಯಣ ರಘು ಪ್ರಧಾನ ಪಾತ್ರದಲ್ಲಿ ಅಭಿನಯಿಸುತ್ತಿರುವ ಈ ಚಿತ್ರದ ತಾರಾಬಳಗದಲ್ಲಿ ನೀತು, ಸಿಂಧೂರಾವ್, ಮೇಘನಾ, ಚಂದ್ರಕಲಾ ಮೋಹನ್, ಬ್ಯಾಂಕ್‌ ಜನಾರ್ದನ್ ಇತರರು ಇದ್ದಾರೆ.

ಶಿವಸಾಯಿಕೃಷ್ಣ ಚಿತ್ರದ ನಿರ್ದೇಶಕ. ಗೌರಿ ವೆಂಕಟೇಶ್ ಛಾಯಾಗ್ರಹಣ, ಸಾಗರ್‌ ನಾಗಭೂಷಣ್ ಸಂಗೀತವಿದೆ. ರಾಜೇಶ್, ವಿ.ಸಿ.ಎನ್. ಮಂಜುನಾಥ್, ಶಿವಸಾಯಿಕೃಷ್ಣ ಹಾಗೂ ಎಚ್.ಎಸ್. ವೆಂಕಟೇಶಮೂರ್ತಿ ಸಾಹಿತ್ಯ ಬರೆದಿದ್ದಾರೆ. ವಿ.ಸಿ.ಎನ್. ಮಂಜುನಾಥ್ ಚಿತ್ರದ ನಿರ್ಮಾಪಕರು.

ಮಾತು ಮುಗಿಸಿದ ‘ಮೈಸೂರು ಮಲ್ಲಿಗೆ’
‘ಮೈಸೂರು ಮಲ್ಲಿಗೆ’ ಚಿತ್ರದ ಮಾತಿನ ಭಾಗದ ಚಿತ್ರೀಕರಣ ಪೂರ್ಣಗೊಂಡಿದೆ. ಚಿತ್ರದಲ್ಲಿ ಉಳಿದ ಎರಡು ಹಾಡುಗಳ ಚಿತ್ರೀಕರಣ ಸೆಪ್ಟೆಂಬರ್ ೨೫ ರಿಂದ ಮೈಸೂರು, ಮಡಿಕೇರಿ ಹಾಗೂ ಬೆಂಗಳೂರು ಸುತ್ತಮುತ್ತ ನಡೆಯಲಿದೆ. ಆಸ್ಕರ್ ಕೃಷ್ಣ, ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಎಸ್. ನಾಗು ಸಂಗೀತ, ಸೂರ್ಯಕಾಂತ ಛಾಯಾಗ್ರಹಣ, ರಘು ನೃತ್ಯ ನಿರ್ದೇಶನ ಚಿತ್ರಕ್ಕಿದೆ. ರಂಜನ್ ಶೆಟ್ಟಿ, ರೂಪಾ ನಟರಾಜ್, ಶ್ವೇತ, ವಿಕ್ಟರಿ ವಾಸು, ದಶಾವ ಚಂದ್ರು, ಮಾ. ರಾಕಿನ್ ತಾರಾಬಳಗದಲ್ಲಿದ್ದಾರೆ.

ದಾವಣಗೆರೆಯಲ್ಲಿ ‘ಎಂದೆಂದೂ ನಿನಗಾಗಿ’
ಎ. ನರಸಿಂಹನ್ ಹಾಗೂ ವಿಜಯ ನಿರ್ಮಿಸುತ್ತಿರುವ ‘ಎಂದೆಂದೂ ನಿನಗಾಗಿ‘ ಚಿತ್ರದ ಚಿತ್ರೀಕರಣ ದಾವಣಗೆರೆ ಸುತ್ತಮುತ್ತ ನಡೆದಿದೆ. ವಿವೇಕ್ ಹಾಗೂ ದೀಪಾಸನ್ನಿಧಿ ಚಿತ್ರೀಕರಣದಲ್ಲಿ ಭಾಗವಹಿಸಿದ್ದರು.  ಬೆಂಗಳೂರಿನಲ್ಲಿ ಅನೀಶ್ ಹಾಗೂ ಸಿಂಧುಲೋಕನಾಥ್ ಅಭಿನಯಿಸಿದ ಕೆಲವು ಸನ್ನಿವೇಶಗಳ ಚಿತ್ರೀಕರಣ ೧೦ ದಿನಗಳ ಕಾಲ ನಡೆದಿದೆ. ದಾವಣಗೆರೆ ಹಾಗೂ ಬೆಂಗಳೂರು ಎರಡು ಭಾಗದ ಚಿತ್ರೀಕರಣ ರಸ್ತೆಗಳಲ್ಲೇ ನಡೆದಿರುವುದು ವಿಶೇಷ.   ಮಹೇಶ್‌ರಾವ್ ನಿರ್ದೇಶನದ ಈ ಚಿತ್ರಕ್ಕೆ ವಿ. ಹರಿಕೃಷ್ಣ ಸಂಗೀತ ನೀಡುತ್ತಿದ್ದಾರೆ.

ನ್ಯೂಯಾರ್ಕ್‌ನತ್ತ ‘ನಿನ್ನಿಂದಲೇ’ ತಂಡ
ನ್ಯೂಯಾರ್ಕ್‌ನಲ್ಲಿ ೪೦ ದಿವಸಗಳ ಕಾಲ ಚಿತ್ರೀಕರಣ ನಡೆಸಲು ‘ನಿನ್ನಿಂದಲೇ’ ಚಿತ್ರ ತಂಡ ಸೆ. ೨೪ರಂದು ನ್ಯೂಯಾರ್ಕ್‌ನತ್ತ ಪ್ರಯಾಣಿಸಲು ಸಿದ್ಧವಾಗಿದೆ. ಪುನೀತ್ ರಾಜ್‌ಕುಮಾರ್, ಏರಿಕಾ ಫರ್ನಾಂಡೀಸ್, ವಿನಾಯಕ್ ಜೋಷಿ, ಆಲೋಕ್ ಬಾಬು, ಸಾನಿಯಾ ದೀಪ್ತಿ, ಸಾಧು ಕೋಕಿಲ, ರಂಗಾಯಣ ರಘು ಇತರರು ಪ್ರಯಾಣದ ತಂಡದಲ್ಲಿದ್ದಾರೆ. ಜಯಂತ್ ಪರಾಂಜಿ ಚಿತ್ರವನ್ನು  ನಿರ್ದೇಶಿಸುತ್ತಿದ್ದು ವಿಜಯ್ ಕಿರಗಂದುರ್ ಬಂಡವಾಳ ಹೂಡಿದ್ದಾರೆ. ನ್ಯೂಯಾರ್ಕ್‌ನಲ್ಲಿ ಮೂರು ಮುಖ್ಯ ದೃಶ್ಯಗಳ ಚಿತ್ರೀಕರಣಕ್ಕೆ ಅಪಾರ ವೆಚ್ಚವಾಗಲಿದೆಯಂತೆ. ಡಿಸೆಂಬರ್‌ನಲ್ಲಿ ಚಿತ್ರ ತೆರೆಗೆ ಬರಲಿದೆಯಂತೆ. 

ಅವಿನಾಶ್ ಶೃಂಗೇರಿ, ಅವಿನಾಶ್, ಅಚ್ಯುತ್ ಕುಮಾರ್, ಶ್ರೀನಿವಾಸ್ ಪ್ರಭು, ಸಿಹಿಕಹಿ ಚಂದ್ರು ಇತರರು ಚಿತ್ರತಂಡದಲ್ಲಿ ಇದ್ದಾರೆ.

ತರ್ಲೆ ನನ್ ಮಕ್ಳು’ ಆರಂಭ
‘ತರ್ಲೆ ನನ್ ಮಕ್ಳು’ ಚಿತ್ರದ ಚಿತ್ರೀಕರಣಕ್ಕೆ ಚಾಲನೆ ನೀಡಲಾಗಿದೆ. ಜಗ್ಗೇಶ್ ಅವರ ಪುತ್ರ ಯತಿರಾಜ್, ನಾಗಶೇಖರ್, ಪ್ರಜ್ವಲ್ ಹಾಗೂ ಅಂಜನಾ ಮುಖ್ಯ ಪಾತ್ರಗಳಲ್ಲಿ ಇದ್ದಾರೆ.

ಉಪೇಂದ್ರ ಹಾಗೂ ಜಗ್ಗೇಶ್ ಚಿತ್ರ ತಲಾ ಒಂದು ಹಾಡಿಗೆ ದನಿಯಾಗಿದ್ದಾರೆ. ಚಿತ್ರದ ಮೂಲದ ರಾಕೇಶ್ ಸ್ವತಂತ್ರ ನಿರ್ದೇಶಕರಾಗಿ ಹೊರಹೊಮ್ಮುತ್ತಿದ್ದಾರೆ. ಸಚ್ಚಿದಾನಂದ್ ಮತ್ತು ಸುರೇಶ್ ಕುಮಾರ್  ನಿರ್ಮಾಪಕರು.  ಸೂರ್ಯವಂಶಿ ಸಂಗೀತ, ಜೇರಾಲ್ಡ್  ಛಾಯಾಗ್ರಹಣ ಚಿತ್ರಕ್ಕಿದೆ.

ಮೈಸೂರಿನಲ್ಲಿ ‘ಅದೃಷ್ಟ’ದ ಚಿತ್ರೀಕರಣ
ಕೆ. ನಾಗರಾಜ್ (ಮಲ್ಲಾಡಿಹಳ್ಳಿ) ನಿರ್ಮಿಸುತ್ತಿರುವ ‘ಅದೃಷ್ಟ’ ಚಿತ್ರದ ಚಿತ್ರೀಕರಣ ಅಕ್ಟೋಬರ್ ೫ರಿಂದ ಮೈಸೂರಿನಲ್ಲಿ ಆರಂಭವಾಗಲಿದೆ. ಈಗಾಗಲೇ ೩೫ದಿನಗಳ ಕಾಲ ಬೆಂಗಳೂರಿನಲ್ಲಿ ಚಿತ್ರೀಕರಣ ನಡೆಸಲಾಗಿದೆ. ಎಸ್. ಬದರಿನಾಥ್ ಚಿತ್ರಕ್ಕೆ ಚಿತ್ರಕಥೆ ಬರೆದು ನಿರ್ದೇಶಿಸುತ್ತಿದ್ದಾರೆ. ಚಿತ್ರದಲ್ಲಿ ಐದು ಹಾಡುಗಳಿದ್ದು ರಾಜೇಶ್‌ರಾಮನಾಥ್ ಸಂಗೀತ ನೀಡಿದ್ದಾರೆ. ಸತೀಶ್‌ಧರಣಿ ಛಾಯಾಗ್ರಹಣ, ಧ್ರುವ ಹಾಗೂ ಆನಂದಪ್ರಿಯ ಸಾಹಿತ್ಯ ಬರೆದಿದ್ದಾರೆ. ಅರುಣ್, ಪಾವನಿ ಹಾಗೂ ಪೂರ್ಣಿಮಾ ತಾರಾಬಳಗದಲ್ಲಿದ್ದಾರೆ.

ಅಂತಿಮ ಹಾದಿಯಲ್ಲಿ ‘ಶಿವಾಜಿನಗರ’ 
‘ಶಿವಾಜಿನಗರ’ ಚಿತ್ರದ ಚಿತ್ರೀಕರಣ ಅಂತಿಮ ಹಾದಿಯಲ್ಲಿದೆ. ಸಾಹಸ ಸನ್ನಿವೇಶ ಹಾಗೂ ಕೆಲವು ಹಾಡುಗಳನ್ನು ಮಾತ್ರ ಬಾಕಿ ಉಳಿದಿವೆ. ಪಿ.ಎನ್. ಸತ್ಯ ಚಿತ್ರದ ನಿರ್ದೇಶಕ. ಜೆಸ್ಸಿ ಗಿಫ್ಟ್ ಸಂಗೀತ, ಸೆಲ್ವಂ ಛಾಯಾಗ್ರಹಣ, ರವಿ ಶ್ರೀವತ್ಸ ಸಂಭಾಷಣೆ ಈ ಚಿತ್ರಕ್ಕಿದೆ. ನಾಯಕನಾಗಿ ವಿಜಯ್, ನಾಯಕಿಯಾಗಿ ಪರೂಲ್ ಯಾದವ್ ನಟಿಸುತ್ತಿದ್ದಾರೆ. ಪ್ರದೀಪ್ ರಾವತ್, ಆದಿತ್ಯ ಮೆನನ್, ಸುಮಿತ್ರಾ, ಅವಿನಾಶ್, ಸತ್ಯಜಿತ್, ಹುಲಿವಾನ್ ಗಂಗಾಧರ, ಶ್ರೀನಿವಾಸ್ ಪ್ರಭು ಇತರರು ಚಿತ್ರದ ತಾರಾಗಣದಲ್ಲಿ ಇದ್ದಾರೆ.

ಅಕ್ಟೋಬರ್‌ನಲ್ಲಿ‘ಸಕ್ಕರೆ’ ತೆರೆಗೆ
ಶೈಲಜಾನಾಗ್ ಹಾಗೂಬಿ. ಸುರೇಶ್ ನಿರ್ಮಿಸಿರುವ ‘ಸಕ್ಕರೆ’ ಚಿತ್ರಕ್ಕೆ ಸೆನ್ಸಾರ್ ಮಂಡಳಿ ‘ಯು’ ಅರ್ಹತಾಪತ್ರ ನೀಡಿದೆ. ಚಿತ್ರ ಅಕ್ಟೋಬರ್‌ನಲ್ಲಿ ಬಿಡುಗಡೆಯಾಗಲಿದೆ. ಅಭಯಸಿಂಹ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿರುವ ಈ ಚಿತ್ರದ ನಾಯಕ ಗಣೇಶ್. ದೀಪಾ ಸನ್ನಿಧಿ, ಅನಂತನಾಗ್, ವಿನಯಾಪ್ರಸಾದ್, ಅನುಪ್ರಭಾಕರ್, ರಾಜೇಶ್, ಅಚ್ಯುತಕುಮಾರ್ ಇತರರು ತಾರಾಬಳಗದಲ್ಲಿದ್ದಾರೆ.

ವಿ. ಹರಿಕೃಷ್ಣ ಸಂಗೀತ, ಡಾ. ವಿಕ್ರಂ ಶ್ರೀವಾಸ್ತವ್ ಛಾಯಾಗ್ರಹಣ, ಜೋನಿ ಹರ್ಷ ಸಂಕಲನ, ಹರ್ಷ, ಚಿನ್ನಿಪ್ರಕಾಶ್ ನೃತ್ಯ ನಿರ್ದೇಶನ ಚಿತ್ರಕ್ಕಿದೆ. ಮಾಸ್‌ಮಾದ ಸಾಹಸ ನಿರ್ದೇಶನ, ಶಶಿಧರ್‌ಅಡಪ ಕಲಾನಿರ್ದೇಶನ ಮಾಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.