ನಟಿ ಚಾರ್ಮಿ ಕೌರ್ ಮತ್ತು ಸಂಗೀತ ನಿರ್ದೇಶಕ ಎಂ.ಎಂ.ಕೀರವಾಣಿ ಇಬ್ಬರೂ ಸಂಭಾವನೆ ಪಡೆಯದೇ ಚಿತ್ರವೊಂದಕ್ಕೆ ದುಡಿದಿದ್ದಾರೆ. ‘ಪ್ರತಿಘಟನ’ ಚಿತ್ರ ನಿರ್ಭಯಾ ಅತ್ಯಾಚಾರ ಪ್ರಕರಣವನ್ನು ಇಟ್ಟುಕೊಂಡು ತಯಾರಾಗುತ್ತಿರುವ ಸಿನಿಮಾ. ಈ ಚಿತ್ರದಲ್ಲಿನ ಪಾತ್ರ ಚಾರ್ಮಿಗೆ ತುಂಬ ಇಷ್ಟವಾಗಿದ್ದರಿಂದ ಆಕೆ ಯಾವುದೇ ಸಂಭಾವನೆ ಪಡೆಯದೇ ಈ ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡರಂತೆ.
‘‘ಪ್ರತಿಘಟನ’ ಚಿತ್ರ ಮಹಿಳಾ ಪ್ರಧಾನ ಚಿತ್ರ. ಈ ಚಿತ್ರದಲ್ಲಿನ ತಮ್ಮ ಪಾತ್ರದ ಬಗ್ಗೆ ತುಂಬ ಪ್ರೀತಿಯನ್ನು ಇರಿಸಿಕೊಂಡ ಚಾರ್ಮಿ, ಸಂಭಾವನೆ ತೆಗೆದುಕೊಳ್ಳದೇ ನಟಿಸುತ್ತೇನೆ ಎಂದರು. ಅದೇ ರೀತಿ ಎಂ.ಎಂ.ಕೀರವಾಣಿ ಅವರು ಈ ಚಿತ್ರಕ್ಕೆ ಉಚಿತವಾಗಿ ಸಂಗೀತ ಸಂಯೋಜನೆ ಮಾಡಿಕೊಡುತ್ತೇನೆ ಎಂದು ಮುಂದೆ ಬಂದರು. ನಿಜಕ್ಕೂ ಇದು ಖುಷಿ ಕೊಡುವ ಸಂಗತಿ. ಈ ಚಿತ್ರದ ಮೂಲಕ ನಾವು ನಿರ್ಭಯಾಳಿಗೆ ಗೌರವ ಸಮರ್ಪಣೆ ಮಾಡುತ್ತಿದ್ದೇವೆ’ ಎನ್ನುತ್ತಾರೆ ಚಿತ್ರದ ನಿರ್ದೇಶಕರಾದ ತಮ್ಮಾರೆಡ್ಡಿ ಭಾರದ್ವಾಜ್.
ಅಂದಹಾಗೆ, ಚಾರ್ಮಿ ಈ ಚಿತ್ರದಲ್ಲಿ ಪತ್ರಕರ್ತೆಯ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ‘ಈ ಚಿತ್ರದಲ್ಲಿ ಚಾರ್ಮಿ ನಿರ್ವಹಿಸುತ್ತಿರುವ ಪಾತ್ರ ಆಕೆಯ ಚಿತ್ರ ಜೀವನಕ್ಕೆ ಒಳ್ಳೆ ಬ್ರೇಕ್ ನೀಡಲಿದೆ. ಅತ್ಯಾಚಾರಕ್ಕೆ ಬಲಿಯಾದ ಹುಡುಗಿಗೆ ನ್ಯಾಯ ದಕ್ಕಿಸಿಕೊಡುವ ಪಾತ್ರವನ್ನು ಆಕೆ ಅಚ್ಚುಕಟ್ಟಾಗಿ ಮಾಡಿದ್ದಾರೆ. ಚಿತ್ರದಲ್ಲಿ ಆಕೆ ಹೇಳುವ ಸಂಭಾಷಣೆಗಳು ತುಂಬ ಪವರ್ಫುಲ್ ಆಗಿವೆ. ಈ ಚಿತ್ರದಲ್ಲಿನ ಚಾರ್ಮಿ ಅಭಿನಯವನ್ನು ಎಲ್ಲರೂ ಮೆಚ್ಚಿಕೊಳ್ಳಲಿದ್ದಾರೆ’ ಎಂಬ ವಿಶ್ವಾಸ ವ್ಯಕ್ತಪಡಿಸುತ್ತಾರೆ ನಿರ್ದೇಶಕರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.