‘ರಾಜ್ಕುಮಾರ್ ನಮ್ಮ ಊರಿನವರು. ವಿಷ್ಣುವರ್ಧನ್ ಒಳ್ಳೆಯ ಸ್ನೇಹಿತರಾಗಿದ್ದರು. ಅಂಬರೀಶ್ ಸಹ ಒಳ್ಳೆಯ ದೋಸ್ತ್’ ಕೆಲ ಕ್ಷಣ ರಾಜಕಾರಣದ ಜಂಜಡಗಳಿಂದ ಹೊರಬಂದು ಚಿತ್ರರಂಗದ ಜೊತೆಗಿನ ತಮ್ಮ ಒಡನಾಟವನ್ನು ನೆನಪಿಸಿಕೊಂಡರು ಮುಖ್ಯಮಂತ್ರಿ ಸಿದ್ದರಾಮಯ್ಯ. ಅವರು ಮತ್ತು ಅವರ ಚಿತ್ರರಂಗದ ಸ್ನೇಹಿತರ ನೆನಪಿಗೆ ವೇದಿಕೆಯಾಗಿದ್ದು ‘ರೆಬೆಲ್’ ಚಿತ್ರದ ಧ್ವನಿಸುರುಳಿ ಬಿಡುಗಡೆ ಸಮಾರಂಭ.
ಚಿತ್ರತಾರೆಯರು ಮತ್ತು ರಾಜಕಾರಣಿಗಳ ಸಮ್ಮಿಲನಕ್ಕೆ ಸಾಕ್ಷಿಯಾದ ಈ ಕಾರ್ಯಕ್ರಮದಲ್ಲಿ ಚಿತ್ರೋದ್ಯಮ ಬೆಳವಣಿಯ ಬಗ್ಗೆ ಮುಖ್ಯಮಂತ್ರಿ ಮಾತನಾಡಿದರು. ಮೈಸೂರಿನಲ್ಲಿ ಫಿಲ್ಮ್ಸಿಟಿ ನಿರ್ಮಾಣ, ಸಾಹಿತ್ಯ ಕೃತಿ ಆಧಾರಿತ ಸಿನಿಮಾಗಳಿಗೆ 50 ಲಕ್ಷ ರೂಪಾಯಿ ಸಹಾಯಧನ ಸೇರಿದಂತೆ ಚಿತ್ರರಂಗದ ಅಭಿವೃದ್ಧಿಗೆ ಸಂಬಂಧಿಸಿದಂತೆ ನಿರ್ದೇಶಕ ಎಸ್.ವಿ. ರಾಜೇಂದ್ರ ಸಿಂಗ್ ಬಾಬು ಸಲ್ಲಿಸಿದ ಬೇಡಿಕೆಗಳನ್ನು ಸಕಾರಾತ್ಮಕವಾಗಿ ಸ್ವೀಕರಿಸಿ ಸಹಕಾರದ ಭರವಸೆ ನೀಡಿದರು.
ಸಚಿವರಾದ ಮಹದೇವ ಪ್ರಸಾದ್, ಆಂಜನೇಯ, ಅಂಬರೀಷ್, ಸಂತೋಷ್ ಲಾಡ್, ಶಾಸಕ ಅಶೋಕ್ ಖೇಣಿ ಮತ್ತಿತರ ರಾಜಕಾರಣಿಗಳ ಸಮೂಹ ಚಿತ್ರತಂಡಕ್ಕೆ ಶುಭ ಕೋರಿತು. ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಬಹಳ ದಿನಗಳ ನಂತರ ತಮ್ಮ ಪುತ್ರ ಆದಿತ್ಯ ನಟನೆಯ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿರುವ ಚಿತ್ರ ‘ರೆಬೆಲ್’. ಚಿತ್ರಕ್ಕೆ ಜೆಸ್ಸಿ ಗಿಫ್ಟ್ ಸಂಗೀತ ನಿರ್ದೇಶನವಿದೆ. ನಿರ್ಮಾಪಕ ಶೈಲೇಂದ್ರಬಾಬು, ನಟ ಜೈ ಜಗದೀಶ್, ನಟಿ ಸಂಜನಾ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.