ಬೆಂಗಳೂರು: ‘ನನ್ನ ಸಿನಿಮಾದಲ್ಲಿ ಅಪಾತ್ರರಿಗೆ ಪಾತ್ರ ನೀಡಿದೆ ಎನ್ನುವ ಕೊರಗು ಕಾಡುತ್ತಿದೆ.ಮುಂದಿನ ಚಿತ್ರಗಳಲ್ಲಿ ಇವರೊಟ್ಟಿಗೆ ಸಿನಿಮಾ ಮಾಡುವವರು ಖಂಡಿತಾ ಒಂದು ತುಂಡುಡಿಗೆ ನೃತ್ಯಕ್ಕೆ( ಐಟಂ ಡಾನ್ಸ್) ಮಾತ್ರ ಇವರ ಪ್ರತಿಭೆ ಬಳಸಿಕೊಳ್ಳಿ, ಆಗ ಅವರ ಅಭಿಮಾನಿಗಳು ತೃಪ್ತರಾಗುತ್ತಾರೆ’ ಎಂದು ‘ಸೂಜಿದಾರ’ ಸಿನಿಮಾದ ನಿರ್ದೇಶಕ ಮೌನೇಶ್ ಬಡಿಗೇರ್, ನಟಿ ಹರಿಪ್ರಿಯಾ ವಿರುದ್ಧ ಹರಿಹಾಯ್ದಿದ್ದಾರೆ.
ಹರಿಪ್ರಿಯಾ ಹೇಳಿಕೆಗೆ ಪ್ರತಿಕ್ರಿಯಿಸಿರುವ ಅವರು, ‘ಇಷ್ಟು ದಿನ ಈಕೆಯ ಸಣ್ಣತನಗಳನ್ನೆಲ್ಲ ಸಹಿಸಿಕೊಂಡು ಸುಮ್ಮನಿದ್ದೆವು; ಸಿನಿಮಾ ಪ್ರಚಾರಕ್ಕೆ ಈಕೆ ಎಳ್ಳಷ್ಟೂ ಸಹಕರಿಸಲಿಲ್ಲ, ಇರಲಿ ಎಂದು ಸುಮ್ಮನಿದ್ದೆವು; ಆದರೆ ಈಗ ಈಕೆಯೇ ಸಿನಿಮಾ ಬಗ್ಗೆ ಅಪಪ್ರಚಾರ ಮಾಡುತ್ತಿರುವುದು ನಮಗೆ ಮುಜುಗರ, ಬೇಸರ ಹಾಗೂ ಎಂಥ ಅಪಾತ್ರರಿಗೆ ಈ ಪಾತ್ರ ನೀಡಿದೆ ಎಂಬ ಕೊರಗು ಕಾಡುವಂತೆ ಮಾಡಿದೆ’ ಎಂದು ತಿಳಿಸಿದ್ದಾರೆ.
‘ಸಿನಿಮಾ ಬಿಡುಗಡೆಯಾಗಿ ಮೂರೇ ದಿನಕ್ಕೆ ಈಕೆ ತನ್ನ ಅಭಿಮಾನಿಗಳನ್ನು(ಭ್ರಾಮಕ) ಸಂಭೋದಿಸುತ್ತಾ ನನ್ನ ಮೇಲೆ ಆಪಾದನೆ ಮಾಡಿದ್ದಾರೆ. ಇವರ ಹಿಂದಿನ ಸಿನಿಮಾಗಳಲ್ಲಿ ಒಂದು ಸಣ್ಣ ದೃಶ್ಯಗಳಲ್ಲಿ ಬಂದು ಹೋದಾಗ ಅಭಿಮಾನಿಗಳು ಏನೂ ಹೇಳಲಿಲ್ಲವೇ? ಅಥವಾ ಮುಂದೆ ಬರಲಿರುವ ಕುರುಕ್ಷೇತ್ರ ಸಿನಿಮಾದಲ್ಲಿ ಬರಿ ಒಂದು ಹಾಡಿಗೆ ನೃತ್ಯ ಮಾಡಿದ್ದಾರೆ. ಇದೆಲ್ಲ ಪಾಪ ಅವರ ಅಭಿಮಾನಿಗಳಿಗೆ ನಿರಾಶೆ ಆಗುವುದಿಲ್ಲವೇ’ ಎಂದು ಮೌನೇಶ್ ಪ್ರಶ್ನಿಸಿದ್ದಾರೆ.
‘ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತೆ ಬಳಸಿಕೊಳ್ಳುವ ಪುರುಷ ಪ್ರಾಬಲ್ಯವಿರುವ ಚಿತ್ರೋದ್ಯಮದಲ್ಲಿ ಈಕೆಯನ್ನೇ ಮುಖ್ಯಪಾತ್ರವನ್ನಾಗಿ ಮಾಡಿ, ಈಕೆಯ ಅಭಿನಯ ಕೌಶಲವನ್ನು ಕೇಂದ್ರೀಕರಿಸಿ ಚಿತ್ರ ಮಾಡಿದ್ದು ಬಹುಶಃ ಅವರ ಅಭಿಮಾನಿಗಳಿಗೆ ಬೇಸರ ತರಿಸಿರಬಹುದು’ ಎಂದು ವ್ಯಂಗ್ಯವಾಡಿದ್ದಾರೆ.
‘ಇನ್ನು ಈಕೆ ರಂಗಭೂಮಿ ಹಿನ್ನೆಲೆಯವರು ಸಿನಿಮಾ ಮಾಡುತ್ತಿದ್ದಾರೆ ಹಾಗಾಗಿ ಅವರನ್ನು ಪ್ರೋತ್ಸಾಹಿಸಲು ಹಾಗೂ ಸಹಕಾರ ನೀಡಲು ಒಪ್ಪಿಕೊಂಡೆ ಎಂಬಂಥ ಮಾತುಗಳನ್ನಾಡಿದ್ದಾರೆ; ಅವರ ಧಾಟಿಯಲ್ಲಿ ಅಯ್ಯೋ ಪಾಪ ರಂಗಭೂಮಿಯವರು ಎಂಬಂತಿದೆಯೇ ಹೊರತು, ಆ ಸಿನಿಮಾ ಕುರಿತು ಅಭಿಮಾನವಾಗಲಿ, ಗೌರವವಾಗಲೀ ಇದ್ದಂತೆ ಕಾಣುತ್ತಿಲ್ಲ’ ಎಂದು ದೂರಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.