ಐದು ವರ್ಷಗಳ ಹಿಂದೆ ಮುಹೂರ್ತ ಕಂಡಿದ್ದ `ಸೈಲೆನ್ಸ್~ ಚಿತ್ರ ಇದೀಗ ಬಿಡುಗಡೆಗೆ ಸಜ್ಜಾಗಿದೆ. ಚಿತ್ರೀಕರಣವನ್ನೂ ಮುಗಿಸಿ ನಂತರದ ಪ್ರಕ್ರಿಯೆಗಳಲ್ಲಿ ತೊಡಗಬೇಕು ಎಂದುಕೊಳ್ಳುವಾಗ ನಿರ್ಮಾಪಕರಲ್ಲಿ ಒಬ್ಬರು ಮೃತಪಟ್ಟರು.
ಅದಾದ ಐದು ವರ್ಷಗಳ ನಂತರ ಮತ್ತೊಬ್ಬ ನಿರ್ಮಾಪಕರು ದೊರಕಿ ಇದೀಗ ಚಿತ್ರ ಸಂಪೂರ್ಣ ಸಿದ್ಧವಾಗಿದೆ.
`ಹಂತಕರ ಪ್ರತೀಕಾರದ ಕತೆ ಇದಾಗಿದ್ದು. ಅವರು ಕೊಲೆ ಮಾಡುವ ರೀತಿ ಕಂಡು ಸೆನ್ಸಾರ್ ಮಂಡಳಿ ಎ ಪ್ರಮಾಣಪತ್ರ ನೀಡಿದೆ ಅಷ್ಟೇ. ಹಂತಕರ ಕತೆಯ ಜೊತೆಗೆಕಾಲ್ಪನಿಕ ಅಂಶಗಳನ್ನೂ ಸೇರಿಸಿ ಸಿನಿಮಾ ಮಾಡಿದ್ದೇವೆ.
ಮೊದಲ ಭಾಗದಷ್ಟೇ ಕುತೂಹಲ ಎರಡನೇ ಭಾಗದಲ್ಲೂ ಉಳಿದಿರುತ್ತದೆ. ಪತ್ರಿಕೆಗಳ ಸುದ್ದಿ ಆಧರಿಸಿ ಕತೆ ರೂಪಿಸಿದ್ದೇವೆ~ ಎಂದು ನಿರ್ದೇಶಕ ವೇಣುಗೋಪಾಲ್ ಹೇಳಿದರು.
ದಂಡುಪಾಳ್ಯದ ಹಂತಕರ ಗುಂಪಿನ ಸೈಕೋ ಕೃಷ್ಣ ಮತ್ತು ಲಕ್ಷ್ಮಿ ಎಂಬ ವ್ಯಕ್ತಿಗಳ ಕತೆಯನ್ನು `ಸೈಲೆನ್ಸ್~ ಆಧರಿಸಿದೆ ಎಂದು ನಿರ್ದೇಶಕರು ಹೇಳಿದರು.
`ಐದು ವರ್ಷದ ಹಿಂದೆ ಚಿತ್ರೀಕರಿಸಿದ ಸಿನಿಮಾ ಇದು~ ಎಂದ ನಾಯಕ ಕುಮಾರ್, ಚಿತ್ರದಲ್ಲಿ ಡ್ಯೂಪ್ ಇಲ್ಲದೇ ಆಕ್ಷನ್ ದೃಶ್ಯಗಳನ್ನು ನಿಭಾಯಿಸಿದ್ದಾರಂತೆ. `ಹಂತಕರ ಗುಂಪಿನಲ್ಲಿಯೇ ಇರುವ ವ್ಯಕ್ತಿ ಕಳ್ಳನಾ? ನಾಯಕನಾ? ಎಂಬ ಕುತೂಹಲವನ್ನು ಕಾಯ್ದುಕೊಳ್ಳುವ ಪಾತ್ರ ನನ್ನದು. ಮೊದಲ ಅರ್ಧ ಸಸ್ಪೆನ್ಸ್. ಎರಡನೇ ಭಾಗದಲ್ಲಿ ಫ್ಲ್ಯಾಶ್ಬ್ಯಾಕ್ ತೆರೆದುಕೊಳ್ಳುತ್ತದೆ~ ಎಂದು ಪಾತ್ರದ ವಿವರಣೆ ನೀಡಿದರು.
ಎರಡನೇ ನಾಯಕಿ ಸುರೇಖಾ ಪಲ್ಲವಿಗೆ ಚಿತ್ರದಲ್ಲಿ ನೆಗೆಟಿವ್ ಶೇಡ್ ಇರುವ ಪಾತ್ರ. `ನಾನು ಬೀದರ್ ಹುಡುಗಿ. ಮುಂಬೈನಲ್ಲಿ ನೆಲೆಸಿದ್ದೇನೆ. ನನಗೆ ಕನ್ನಡ ಚೆನ್ನಾಗಿ ಬರುತ್ತದೆ. ಚಿತ್ರದಲ್ಲಿ ಪಾನ್ ತಿನ್ನೋದು ಉಗಿಯೋದು ನನ್ನ ಕೆಲಸ.
ಅದನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದೇನೆ~ ಎಂದು ನಗೆ ಅರಳಿಸಿದರು. ಹಾಗೆಯೇ ಸದ್ಯದಲ್ಲೇ ಪ್ರೊಡಕ್ಷನ್ ಹೌಸ್ ಆರಂಭಿಸಿ ಸಿನಿಮಾ ನಿರ್ಮಾಪಕಿಯಾಗುವ ಹಂಬಲವನ್ನೂ ವ್ಯಕ್ತಪಡಿಸಿದರು.
ಹಿರಿಯ ನಟ ಸುಧೀರ್ ಸಹೋದರ ಕೃಷ್ಣಮೂರ್ತಿ ಈ ಚಿತ್ರದ ನಿರ್ಮಾಪಕರಲ್ಲಿ ಒಬ್ಬರು. ಅವರು ಕತೆಯ ಬಗ್ಗೆ ಭರವಸೆ ವ್ಯಕ್ತಪಡಿಸಿ, ತಮ್ಮಂದಿಗೆ ಮೊದಲು ಇದ್ದ ಪಾಲುದಾರ ನಾಯಕ್ ಮೃತಪಟ್ಟ ನಂತರ ಜಯರಾಂ ತಮ್ಮ ಬೆಂಬಲಕ್ಕೆ ನಿಂತಿದ್ದನ್ನು ಸ್ಮರಿಸಿದರು.
ಸಂಗೀತ ನಿರ್ದೇಶಕ ವಿಜಯಭಾರತಿ ಅವರಿಗೆ ಇದು 19 ಸಿನಿಮಾ.
`ಮನ್ಮಥ~, `ಸಿಐಡಿ ಈಶ~, `ಎಲ್ಲೆಲ್ಲೂ ನೀನೆ ನನ್ನಲ್ಲೂ ನೀನೆ~ ಸಿನಿಮಾಗಳಿಗೆ ರಾಗ ಸಂಯೋಜಿಸಿರುವ ವಿಜಯ ಭಾರತಿ ಅವರು ಜನಪದ ಮತ್ತು ಪಾಶ್ಚಾತ್ಯ ಸಂಗೀತದ ಸುಂದರ ಮಿಶ್ರಣ `ಸೈಲೆನ್ಸ್~ ಹಾಡುಗಳಲ್ಲಿವೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.