ADVERTISEMENT

ಆದಿ ಲಕ್ಷ್ಮಿ ಹೇಳಿದ ಪುರಾಣ ಕಥೆ

​ಪ್ರಜಾವಾಣಿ ವಾರ್ತೆ
Published 15 ಜುಲೈ 2019, 9:05 IST
Last Updated 15 ಜುಲೈ 2019, 9:05 IST
‘ಆದಿ ಲಕ್ಷ್ಮಿ ಪುರಾಣ’ ಚಿತ್ರದಲ್ಲಿ ನಿರೂಪ್‌ ಭಂಡಾರಿ ಮತ್ತು ರಾಧಿಕಾ ಪಂಡಿತ್
‘ಆದಿ ಲಕ್ಷ್ಮಿ ಪುರಾಣ’ ಚಿತ್ರದಲ್ಲಿ ನಿರೂಪ್‌ ಭಂಡಾರಿ ಮತ್ತು ರಾಧಿಕಾ ಪಂಡಿತ್   

‘ಆದಿ ಲಕ್ಷ್ಮಿ ಪುರಾಣ’ ಸಿನಿಮಾದ ನಿರ್ದೇಶನ, ಛಾಯಾಗ್ರಹಣದ ಜವಾಬ್ದಾರಿ ಹೊತ್ತಿರುವುದು ಮಹಿಳೆಯರೇ. ನಟಿ ರಾಧಿಕಾ ಪಂಡಿತ್ ನಾಯಕಿಯಾಗಿರುವ ಈ ಚಿತ್ರ ಇದೇ ಶುಕ್ರವಾರ ತೆರೆ ಕಾಣುತ್ತಿದೆ. ಸಿನಿಮಾ ಬಗ್ಗೆ ಮಾಹಿತಿ ನೀಡಲು ಚಿತ್ರತಂಡ ಇತ್ತೀಚೆಗೆ ಸುದ್ದಿಗೋಷ್ಠಿ ಕರೆದಿತ್ತು.

ಟ್ರೇಲರ್‌ ಬಿಡುಗಡೆಗೊಳಿಸಿದ ನಟ ಯಶ್‌ ವೇದಿಕೆಯ ಮೇಲೆ ಮನದನ್ನೆಯನ್ನು ಹೊಗಳಿದರು. ‘ನಟನೆಯಲ್ಲಿ ಆಕೆ (ರಾಧಿಕಾ ಪಂಡಿತ್) ನನಗಿಂತ ಹಿರಿಯಳು. ಹಲವು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾಳೆ. ನಾನು ಆಕೆಯ ಅಭಿಮಾನಿ. ಮುಂದೆಯೂ ಅವಳ ಸಿನಿಮಾಗಳನ್ನು ನೋಡುತ್ತೇನೆ’ ಎನ್ನುವ ಮೂಲಕ ರಾಧಿಕಾ ಮತ್ತೆ ಸಿನಿಮಾಗಳಲ್ಲಿ ನಟಿಸುತ್ತಾರೆ ಎನ್ನುವ ಸುಳಿವು ನೀಡಿದರು.

‘ಸುಹಾಸಿನಿ ಮೇಡಂ ಅವರ ಶಿಫಾರಸು ಮೇರೆಗೆ ಕೇಳಿದ್ದ ಕಥೆ ಇಷ್ಟವಾಗಿತ್ತು. ರಾಕ್‍ಲೈನ್‍ ವೆಂಕಟೇಶ್ ಅವರಿಗೆ ಇದನ್ನು ತಿಳಿಸಿದಾಗ ನಿರ್ಮಾಣಕ್ಕೆ ಒಪ್ಪಿದರು. ಚಿತ್ರದ ಪಾತ್ರಕ್ಕೆ ರಾಧಿಕಾ ಪಂಡಿತ್ ಅವರೇ ಸೂಕ್ತ ಎಂದು ಹೇಳಿದ್ದರು’ ಎಂದು ನೆನಪುಗಳನ್ನು ಮೆಲುಕು ಹಾಕಿದರು.

ADVERTISEMENT

‘ಸುಚೇಂದ್ರ ಪ್ರಸಾದ್‌, ತಾರಾ, ರಾಧಿಕಾ ಮತ್ತು ನಿರೂಪ್‍ ಭಂಡಾರಿ ಅವರ ಪಾತ್ರಗಳ ನಡುವೆ ಗೊಂದಲಗಳಿವೆ. ನೋಡುಗರಿಗೆ ಮಜಾ ಕೊಡುತ್ತವೆ’ ಎಂದರು.

ನಾಯಕ ನಿರೂಪ್‌ ಭಂಡಾರಿ, ‘ಇದು ಪಕ್ಕಾ ಮನರಂಜನೆ ಇರುವ ಚಿತ್ರ. ಪ್ರೇಕ್ಷಕರಿಗೆ ಪ್ರತಿಯೊಂದು ಪಾತ್ರಗಳು ಕಾಡುತ್ತವೆ’ ಎಂದು ಹೇಳಿದರು.

‘ನಿರ್ದೇಶಕಿ ಪ್ರಿಯಾ ಪ್ರಾಯದಂತೆ ಪಾತ್ರ ಕಟ್ಟಿಕೊಟ್ಟಿದ್ದಾರೆ. ಕಥೆಯಲ್ಲಿ ಗಟ್ಟಿತನವಿದೆ. ಇಂದಿನ ಪುರಾಣವನ್ನು ಸಮಕಾಲೀನ ಪ್ರಜ್ಞೆಯಂತೆ ಅಚ್ಚುಕಟ್ಟಾಗಿ ನಿರೂಪಿಸಿದ್ದಾರೆ’ ಎಂದು ಮೆಚ್ಚುಗೆ ಸೂಚಿಸಿದರು ನಟ ಸುಚೇಂದ್ರಪ್ರಸಾದ್.

ನಿರ್ಮಾಪಕ ರಾಕ್‌ಲೈನ್‌ ವೆಂಕಟೇಶ್‌, ‘ಈ ಸಿನಿಮಾ ತೆರೆಯ ಮೇಲೆ ಬರಲು ಯಶ್‌ ಕಾರಣವಾಗಿದ್ದಾರೆ. ಸಿನಿಮಾ ಚೆನ್ನಾಗಿ ಮೂಡಿಬಂದಿದೆ’ ಎಂದರು.

ರಾಧಿಕಾ ಪಂಡಿತ್ ಪ್ರಕಾರ ಲಕ್ಷ್ಮಿಯ ಶೇಡ್‍ಗಳನ್ನು ನಿರ್ದೇಶಕಿಯಲ್ಲಿ ಕಾಣಬಹುದಂತೆ. ‘ನಾಯಕ- ನಾಯಕಿ ಸುಳ್ಳು ಹೇಳುವ ಸನ್ನಿವೇಶಗಳಿವೆ. ಇವು ಪ್ರೇಕ್ಷಕರಿಗೆ ಖುಷಿ ನೀಡುತ್ತವೆ’ ಎಂದರು ನಸು ನಕ್ಕರು.

ನಿರ್ದೇಶಕಿ ವಿ. ಪ್ರಿಯಾ ಎಲ್ಲರ ಪ್ರೋತ್ಸಾಹವನ್ನು ಸ್ಮರಿಸಿದರು. ಪ್ರೀತಾ ಜಯರಾಮನ್ ಅವರ ಛಾಯಾಗ್ರಹಣ ಚಿತ್ರಕ್ಕಿದೆ. ಅನೂಪ್‍ ಭಂಡಾರಿ ಸಂಗೀತ ಸಂಯೋಜಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.