ಹತ್ತಿರ ಹತ್ತಿರ ಒಂದು ದಶಕದ ಹಿಂದೆ (2011–12) ವೀಕ್ಷಕರ ಮನಸ್ಸು ಗೆದ್ದಿದ್ದ ಧಾರಾವಾಹಿ ‘ರಾಧಾಕಲ್ಯಾಣ’. ಅದೇ ಹೆಸರಿನಲ್ಲಿ ಮತ್ತೊಮ್ಮೆ ತೆರೆಯ ಮೇಲೆ ಬಂದಿದೆ. ಮುಗ್ಧ ಮನಸ್ಸಿನ ಹುಡುಗಿಯಾಗಿ ನಟಿಸುತ್ತಿರುವ ರಾಧಾ ಪಾತ್ರಧಾರಿ ರಾಧಿಕಾ ರಾವ್ ಸ್ನಿಗ್ಧ ಸೌಂದರ್ಯದಿಂದ ಗಮನ ಸೆಳೆಯುತ್ತಾರೆ. ಅವರೊಂದಿಗಿನ ಮಾತುಕತೆ ಇಂತಿದೆ.
ಈಗಾಗಲೇ ಈ ಹೆಸರಿನಲ್ಲಿ ಧಾರಾವಾಹಿ ಬಂದಿದ್ದರಿಂದ ರಾಧಾ ಪಾತ್ರದ ಬಗ್ಗೆ ಜನರಿಗೆ ತುಂಬಾ ನಿರೀಕ್ಷೆಗಳಿವೆ. ಹಾಗಾಗಿ ಜವಾಬ್ದಾರಿಯೂ ಸ್ವಲ್ಪ ಹೆಚ್ಚಿದೆ. ಅವರ ನಿರೀಕ್ಷೆಯ ಅರ್ಧವನ್ನಾದರೂ ಮುಟ್ಟುವ ಆತ್ಮವಿಶ್ವಾಸವನ್ನು ಅವರು ಮಾತಲ್ಲಿ ತುಳುಕಿಸುತ್ತಾರೆ.
ರಾಧಾ ಎಂಬ ಪಾತ್ರಕ್ಕೆ ಅಮ್ಮ, ತಂಗಿ, ಅಜ್ಜಿ ಹೀಗೆ ಕುಟುಂಬವೇ ಪ್ರಪಂಚ. ಭರತನಾಟ್ಯ ಪ್ರವೀಣೆಯೂ ಹೌದು. ಪುಟ್ಟ ಮಕ್ಕಳಿಗೆ ಭರತನಾಟ್ಯ ಕಲಿಸುವ ಅವಳು ಶ್ರೀರಾಮನ ಭಕ್ತೆ. ರಾಮನನ್ನು ಭಕ್ತಿಯಿಂದ ಪೂಜಿಸುವ ಅವಳಿಗೆ ರಾಮನಂಥ ಗಂಡನೇ ಬೇಕು. ಆದರೆ, ಮದುವೆಯಾಗುವುದು ಕೃಷ್ಣನ ಗುಣಗಳಿರುವ ಹುಡುಗನನ್ನು ಎನ್ನುತ್ತ ಕಥೆಯ ಹೂರಣವನ್ನು ತೆರೆದಿಟ್ಟರು.
ಕ್ಯಾಮೆರಾ ಮುಂದೆ ನಿಂತು ನಟಿಸೊಕೆ ತುಂಬ ಭಯ ಇತ್ತು. ಸಿನಿಮಾ ಉದ್ಯಮದ ಬಗ್ಗೆ ಇರುವ ಊಹಾಪೋಹಗಳು ಇದಕ್ಕೆ ಜತೆಯಾಗಿದ್ದವು. ಆದರೆ, ಪಿಯುನಲ್ಲಿ ಇದ್ದಾಗ ಧಾರಾವಾಹಿಯೊಂದಕ್ಕೆ ಫ್ರೆಂಡ್ ಒಬ್ಬರು ಆಡಿಷನ್ಗೆ ಹೋಗಿದ್ದರು. ಅವರ ಜತೆ ಕಂಪನಿ ಕೊಡೊಕೆ ಅಂತ ಹೋಗಿದ್ದೆ. ಆದರೆ, ಆ ನಿರ್ದೇಶಕರು ನನ್ನನ್ನೇ ಆಯ್ಕೆ ಮಾಡಿಬಿಟ್ಟರು. ಓದು ಅರ್ಧಕ್ಕೆ ನಿಲ್ಲಿಸಿ, ಧಾರಾವಾಹಿ ಮಾಡುವುದುಅಮ್ಮನಿಗೆ ಇಷ್ಟವಿರಲಿಲ್ಲ. ನಂಗೂ ಬಣ್ಣದ ಬದುಕಿನ ಬಗ್ಗೆ ಒಲವಿರಲಿಲ್ಲ. ಹಾಗಾಗಿ ಆ ಅವಕಾಶದ ಬಗ್ಗೆ ಅಷ್ಟಾಗಿ ತಲೆ ಕೆಡಿಸಿಕೊಳ್ಳಲಿಲ್ಲ.ಪಿಯು ಮುಗಿತು. ವೈದ್ಯೆಯಾಗಬೇಕೆಂಬ ಕನಸು ಹೊತ್ತಿದ್ದೆ. ಆಮೇಲೆ ಕುಟುಂಬದ ಗೆಳೆಯರೊಬ್ಬರ ಒತ್ತಾಯಕ್ಕೆ ತುಳು ಸಿನಿಮಾದಲ್ಲಿ ಕಾಣಿಸಿಕೊಂಡೆ. ಅದಾದ ಮೇಲೆ ಒಂದೊಂದೇ ಅವಕಾಶಗಳು ಬರಲಾರಂಭಿಸಿದವು. ಆದರೆ, ಅಳುಕು ಮಾತ್ರ ಹಾಗೇ ಇತ್ತು. ಅಮ್ಮನ ಪ್ರೋತ್ಸಾಹದ ನುಡಿಗಳು ಸಂಪೂರ್ಣವಾಗಿ ನಟನೆಯಲ್ಲಿ ತೊಡಗಿಸಿಕೊಳ್ಳುವಂತೆ ಮಾಡಿದ್ದನ್ನು ಅವರು ಖುಷಿಯಿಂದ ನೆನಪಿಸಿಕೊಳ್ಳುತ್ತಾರೆ.
ಏಸಾ ಎನ್ನುವ ತುಳು ಸಿನಿಮಾದಲ್ಲಿ ನಟಿಸಿದೆ. ಅದಾದ ಮೇಲೆ ಅವಕಾಶಗಳ ದಿಡ್ಡಿ ಬಾಗಿಲು ತೆರೆಯಲು ಆರಂಭಿಸಿದವು. ಆದರೆ, ನಾನಂತೂ ಸಿಕ್ಕಾಪಟ್ಟೆ ಚೂಸಿಯಾಗಿಬಿಟ್ಟೆ. ನಟಿ ರಾಧಿಕಾ ಮಿಂಚು ಅವರು ' ಮಂಗಳೂರು ಹುಡುಗಿ ಹುಬ್ಬಳ್ಳಿ ಹುಡುಗ' ತಂಡಕ್ಕೆ ನನ್ನ ಫೋಟೋ ನೀಡಿದ್ರು. ಆಫರ್ ಬಂತು.ತುಳು ಸಿನಿಮಾ ಮಾಡುವಾಗ ಅಷ್ಟಾಗಿ ತಲೆ ಕೆಡಿಸಿಕೊಂಡಿರಲಿಲ್ಲ. ಮಂಗಳೂರು ಹುಡುಗಿ ಮಾಡುವಾಗ ಹಿರಿಯ ಕಲಾವಿದರ ನಟನೆ ನೋಡಿ, ಚೆನ್ನಾಗಿ ನಟಿಸಬೇಕು ಎನ್ನುವ ಹಠ ಬಂತು. ಹೇಗೋ ಸಿನಿಮಾ ಕ್ಷೇತ್ರಕ್ಕೆಬಂದಿದ್ದೀನಿ. ಹಾಗೇ ಹೋದ್ರೆ ಚೆನಾಗಿರಲ್ಲ. ಏನಾದ್ರೂ ಸಾಧಿಸಿಯೇ ಹೋಗೊದು ಎನ್ನುವ ಅವರು ಸಿನಿಮಾ ಕ್ಷೇತ್ರದಲ್ಲಿ ನೆಲೆಯೂರಲು ಮನಸ್ಸು ಮಾಡಿದ್ದನ್ನು ಹೇಳಿಕೊಂಡರು.
ಭರತನಾಟ್ಯ, ಯಕ್ಷಗಾನ ಅಂದ್ರೆ ಇಷ್ಟ. ಅಮ್ಮ ವಿಜಯಲಕ್ಷ್ಮಿ, ಅಣ್ಣ ರಾಕೇಶ್ಪ್ರೋತ್ಸಾಹದಿಂದ ಈ ಹಾದಿಯಲ್ಲಿ ಸಾಗುವಂತೆ ಮಾಡಿತು. ಮಂಗಳೂರಿನಕರಾವಳಿ ಕಾಲೇಜಿನಲ್ಲಿ ಫ್ಯಾಷನ್ ಟೆಕ್ನಾಲಜಿಯಲ್ಲಿ ಪದವಿ ಪಡೆದಿದ್ದೇನೆ ಎನ್ನುವ ಅವರು, ಲುಂಗಿ. ಎಲ್ಲಿದ್ದೆ ಇಲ್ಲಿ ತನಕ ಸಿನಿಮಾಗಳಲ್ಲಿ ನಟಿಸ್ತಾ ಇದ್ದಾರೆ. ಪಂಚಭಾಷೆ ತಾರೆಯಾಗಬೇಕು ಎನ್ನುವ ಅವರಿಗೆ ತೆಲುಗು, ತಮಿಳು ಸಿನಿಮಾಗಳಲ್ಲಿಯೂ ಅವಕಾಶಗಳು ಬರುತ್ತಿವೆ. ನಟನೆಯ ಪಟ್ಟುಗಳನ್ನು ಕಲಿತಾ ಇದ್ದೀನಿ. ಯಾವುದೇ ಪಾತ್ರ ಸಿಕ್ಕಿದ್ರು, ಅಂಥಹುದೇ ಪಾತ್ರಗಳಿರುವ ಒಂದಷ್ಟು ಸಿನಿಮಾ, ಧಾರಾವಾಹಿಗಳನ್ನು ಪಟ್ಟು ಬಿಡದೇ ನೋಡ್ತೀನಿ. ಅದಕ್ಕಿಂತಲೂ ಚೆನ್ನಾಗಿ ಮಾಡಬೇಕೆಂದು ಶ್ರದ್ಧೆಯಿಂದ ಕ್ಯಾಮೆರಾ ಮುಂದೆ ನಿಲ್ಲುತ್ತೀನಿ ಎನ್ನುವ ಅವರಿಗೆ ನೆಗೆಟಿವ್ ಪಾತ್ರಗಳೆಂದರೆ ತುಂಬಾ ಇಷ್ಟ.
ಸ್ನಿಗ್ಧ ಸೌಂದರ್ಯಕ್ಕೆ ನೆಗೆಟಿವ್ ಪಾತ್ರ ಹೊಂದುತ್ತಾ? ಅಂದ್ರೆ, ಪಾತ್ರ ಅಂದ್ರೆ ಪಾತ್ರ. ಅದು ಪಾಸಿಟಿವ್ ಇರಲಿ, ನೆಗೆಟಿವ್ ಇರಲಿ. ಜನರ ಮನಸ್ಸೊಳಗೆ ಇಳೀತು ಅಂದ್ರೆ ಮುಗೀತು ಎನ್ನುತ್ತ ದೃಢ ವಿಶ್ವಾಸ ಪ್ರಕಟಿಸುತ್ತಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.