ಧರ್ಮದುರ್ಗದ ದೇವಿ ಅನುಷ್ಕಳ ಕಥೆ ಶುಕ್ರವಾರ (ಮೇ 10) ತೆರೆಗೆ ಬರಲು ಸಜ್ಜಾಗಿದೆ. ಚಿತ್ರವು 130 ಸಿನಿಮಾ ಮಂದಿರಗಳಲ್ಲಿ ತೆರೆಗೆ ಬರಲಿದೆಯಂತೆ. ಥ್ರಿಲ್ಲರ್ ಫ್ಯಾಂಟಸಿ ಕಥೆಯನ್ನು ಹೊಂದಿರುವ ಈ ಚಿತ್ರದ ಬಿಡುಗಡೆಗೆ ಇದು ಸರಿಯಾದ ಸಮಯ ಎನ್ನುತ್ತಿದ್ದಾರೆ ನಿರ್ದೇಶಕ ದೇವರಾಜ್ ಕುಮಾರ್.
‘ಚಿತ್ರ ಸರಿಸುಮಾರು ಎರಡೂಮುಕ್ಕಾಲು ಗಂಟೆ ಅವಧಿಯದ್ದು. ಈ ಚಿತ್ರ ಹೊಸ ಎತ್ತರವನ್ನು ತಲುಪಲಿದೆ ಎಂಬುದು ನನ್ನಲ್ಲಿರುವ ಭರವಸೆ’ ಎಂದರು ದೇವರಾಜ್ ಕುಮಾರ್. ಚಿತ್ರದ ಬಗ್ಗೆ ಮಾಹಿತಿ ನೀಡಿ, ಇದು ತೆರೆಗೆ ಬರುತ್ತಿರುವ ಸುದ್ದಿ ನೀಡಲು ಅವರು ಸುದ್ದಿಗೋಷ್ಠಿ ಕರೆದಿದ್ದರು. ಮಾತನಾಡುವ ಮೊದಲು ಸಿನಿಮಾದ ಒಂದೆರಡು ಹಾಡುಗಳನ್ನು ತೋರಿಸಿದರು. ಈ ಚಿತ್ರದ ಬಜೆಟ್ ಅಂದಾಜು ₹ 3 ಕೋಟಿ ಎಂಬ ಮಾಹಿತಿ ನೀಡಿದರು.
ಚಿತ್ರದ ನಾಯಕ ರೂಪೇಶ್ ಶೆಟ್ಟಿ. ‘ಈ ಚಿತ್ರ ದೇವರಾಜ್ ಕುಮಾರ್ ಅವರ ಕನಸು. ಇದರಲ್ಲಿ ಅಭಿನಯಿಸಲು ನಾನು ಹೇಗೆ ಆಯ್ಕೆಯಾದೆನೋ ಗೊತ್ತಿಲ್ಲ. ಒಬ್ಬ ವೀಕ್ಷಕನಾಗಿ ಸಿನಿಮಾ ನೋಡಲು ನಾನು ಕಾತರನಾಗಿದ್ದೇನೆ’ ಎಂದರು ರೂಪೇಶ್. ಚಿತ್ರದ ಕೆಲವು ಭಾಗಗಳ ಚಿತ್ರೀಕರಣ ಬ್ಯಾಂಕಾಕ್ನಲ್ಲಿ ನಡೆದಿದೆ.
ಚಿತ್ರದ ಕಾರ್ಯಕಾರಿ ನಿರ್ಮಾಪಕ ನವೀನ್ ರೆಡ್ಡಿ. ‘ಸಣ್ಣ ಬಜೆಟ್ ಸಿನಿಮಾ ಎಂದು ಆರಂಭಿಸಿದೆವು. ಅದು ಈ ಮಟ್ಟಕ್ಕೆ ಬಂದಿದೆ’ ಎಂದರು. ರಾಣಿಯೊಬ್ಬಳ ಕಥೆ ಚಿತ್ರದ ಕಥೆಯೊಳಗೆ ಸೇರಿದೆ. ಇದರಲ್ಲಿ ಮಾಸ್ ಅಂಶಗಳೂ ಇವೆ ಎಂದು ಸಿನಿಮಾ ತಂಡ ಹೇಳಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.