ದೇಶದಾದ್ಯಂತ ಚಿತ್ರತಾರೆಯರು ಪ್ರತಿದಿನ ಕೊರೊನಾ ಮಹಾಮಾರಿಯ ವಿರುದ್ಧ ಜಾಗೃತಿ ಮೂಡಿಸುತ್ತಿದ್ದಾರೆ. ಸಂತ್ರಸ್ತರಿಗೆ ಆಹಾರ ಪೂರೈಸುವ ಕೆಲಸ ಮಾಡುತ್ತಿದ್ದಾರೆ. ಕೇಂದ್ರ ಸರ್ಕಾರ ಸ್ಥಾಪಿಸಿರುವ ‘ಪಿಎಂ ಕೇರ್ಸ್’ ನಿಧಿಗೂ ಆರ್ಥಿಕ ನೆರವು ನೀಡಿದ್ದಾರೆ. ಈ ನಡುವೆಯೇ ಹಿರಿಯ ಹಿನ್ನೆಲೆ ಗಾಯಕಿ ಆಶಾ ಬೋಂಸ್ಲೆ ಅವರು ಕೊರೊನಾ ವಿರುದ್ಧ ಹೋರಾಟ ನಡೆಸಲು ಜನರು ಹೇಗೆಲ್ಲಾ ತೊಡಗಿಸಿಕೊಳ್ಳಬಹುದು ಎಂಬುದನ್ನು ಮನದಟ್ಟು ಮಾಡಿಕೊಡುವ ಪ್ರಯತ್ನ ಮಾಡಿದ್ದಾರೆ.
ಅವರು ₹ 100ರ ಹಿಂದಿರುವ ಮೌಲ್ಯದ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಮುಂದಾಗಿದ್ದಾರೆ. ‘₹ 100 ನಮಗೆ ಸಣ್ಣ ಮೊತ್ತವಾಗಿ ಕಾಣುತ್ತದೆ. ಆದರೆ, ಅದರ ಮೌಲ್ಯ ದೊಡ್ಡದು. ದೇಶದ ಜನಸಂಖ್ಯೆ ಈಗ 130 ಕೋಟಿ ದಾಟಿದೆ. ಪ್ರತಿಯೊಬ್ಬರು ಅಷ್ಟು ಮೊತ್ತವನ್ನು ‘ಪಿಎಂ ಕೇರ್ಸ್’ಗೆ ನೀಡಿದರೆ ₹ 13 ಸಾವಿರ ಕೋಟಿಯಾಗಲಿದೆ. ಈ ಮೊತ್ತವು ಕೊರೊನಾ ಮಹಾಮಾರಿಯ ವಿರುದ್ಧ ಜಾಗೃತಿ ಮೂಡಿಸಲು ಮತ್ತು ರೋಗದಿಂದ ಸಂತ್ರಸ್ತರಾದವರಿಗೆ ನೆರವಾಗಲಿದೆ. ಹಾಗಾಗಿ, ಪ್ರತಿಯೊಬ್ಬರು ಈ ನಿಟ್ಟಿನಲ್ಲಿ ಚಿಂತನೆ ನಡೆಸಿ ನೆರವು ನೀಡಲು ಮುಂದಾಗಬೇಕು’ ಎಂಬುದು ಅವರ ಮನವಿ.
‘ನಾವು ನೀಡುವ ಸಣ್ಣ ಮೊತ್ತವು ಬೇರೊಬ್ಬರ ಜೀವ ಉಳಿಸಲು ನೆರವಾಗಲಿದೆ ಎಂಬುದನ್ನು ಮರೆಯಬಾರದು’ ಎಂದಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಕೊರೊನಾ ವಿರುದ್ಧ ಹೋರಾಟ ನಡೆಸಲು ಆರ್ಥಿಕ ನೆರವಿಗಾಗಿ ‘ಪಿಎಂ ಕೇರ್ಸ್’ ಎಂಬ ವಿಪತ್ತು ಪರಿಹಾರ ನಿಧಿ ಸ್ಥಾಪಿಸಿದ್ದಾರೆ. ಹಣ ನೀಡುವಾಗ ಜನರು ಸೈಬರ್ ವಂಚಕರ ಜಾಲಕ್ಕೆ ಬೀಳದಂತೆ ಎಚ್ಚರಿಕೆವಹಿಸುವ ಅಗತ್ಯವಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.