ಚರಿತ್ರೆಯನ್ನು ಆಧರಿಸಿದ ಸಿನಿಮಾಗಳು, ಎಷ್ಟೋ ವರ್ಷಗಳ ಹಿಂದಿನ ಘಟನೆಯನ್ನು ಇಟ್ಟುಕೊಂಡು ಕಟ್ಟಿದ ಸಿನಿಮಾಗಳು ತೆರೆಯ ಮೇಲೆ ಭೋರ್ಗರೆಯುತ್ತಿರುವ ಸಮಯ ಇದು. ಎಲ್ಲರೂ ಹಿಂದಿನ ಕಾಲದಲ್ಲಿಯೇ ಕಣ್ಣುನೆಟ್ಟಿರುವಾಗ ಅನೂಪ್ ಭಂಡಾರಿ ಮಾತ್ರ ಇನ್ನೂರು ವರ್ಷ ಮುಂದಿನ ಭವಿಷ್ಯದಲ್ಲಿ ದೃಷ್ಟಿನೆಟ್ಟಿದ್ದಾರೆ. ಅವರ ಈ ಭವಿಷತ್ ಕನಸಿಗೆ ಕಿಚ್ಚ ಸುದೀಪ್ ಕೈಜೋಡಿಸಿದ್ದಾರೆ. ಏನಿದು ಕನಸು? ‘ಬಿಲ್ಲ ರಂಗ ಬಾಷ’ ಇದು ಕನಸಿನ ಹೆಸರು.
ಹೌದು, ‘ರಾಜರಥ’ದಲ್ಲಿ ಸೋತಿದ್ದ ಅನೂಪ್ ಮತ್ತು ‘ದಿ ವಿಲನ್’ನಲ್ಲಿ ಟುಸ್ ಪಟಾಕಿಯಾದ ಸುದೀಪ್ ಇಬ್ಬರೂ ಈಗ ಜೊತೆಯಾಗಿ ಸಿನಿಮಾ ಮಾಡುತ್ತಿದ್ದಾರೆ. ಅದು 2209ರಲ್ಲಿ ನಡೆಯುವ ಕಥೆಯಂತೆ. ಇತ್ತೀಚೆಗೆ ಬಿಡುಗಡೆ ಮಾಡಿದ ಪೋಸ್ಟರ್ನಲ್ಲಿಯೂ ಆ ಕಾಲವನ್ನು ಉಲ್ಲೇಖಿಸಲಾಗಿದೆ. ಸ್ವತಃ ಅನೂಪ್ ಕೂಡ ತಮ್ಮ ಟ್ವಿಟರ್ ಖಾತೆಯಲ್ಲಿ ಆ ಕುರಿತು ಹೇಳಿಕೊಂಡಿದ್ದಾರೆ.
ಇದು ಹದಿನೆಂಟು ವರ್ಷದ ಹಿಂದೆಯೇ ಬರೆದಿಟ್ಟುಕೊಂಡ ಕಥೆಯಂತೆ. ಆಗಲೂ ಅನೂಪ್ ಮನಸಲ್ಲಿ ಇದ್ದಿದ್ದು ಸುದೀಪ್. ಅವರ ಕನಸಿಗೀಗ ಹದಿಹರೆಯ. ತೆರೆಯ ಮೇಲೆ ವ್ಯಕ್ತಗೊಳ್ಳಲು ಸೂಕ್ತ ಸಮಯ ಎಂದು ಅನಿಸಿದೆ. ಕಥೆಯನ್ನು ಕೇಳಿದ ಕಿಚ್ಚ ಕೂಡ ಖುಷಿಯಿಂದಲೇ ಒಪ್ಪಿದ್ದಾರೆ. ಸುದೀಪ್ ಅವರೇ ಈ ಸಿನಿಮಾಗೆ ಹಣ ಹೂಡುತ್ತಿದ್ದಾರೆ. ಸದ್ಯಕ್ಕೆ ‘ಪೈಲ್ವಾನ್’ ಚಿತ್ರದ ಅಖಾಡದಲ್ಲಿ ಮೈದಣಿಸುತ್ತಿರುವ ಸುದೀಪ್, ಆ ಚಿತ್ರದ ನಂತರ ಬಿಲ್ಲ ರಂಗ ಬಾಷದಲ್ಲಿ ತೊಡಗಿಕೊಳ್ಳಬಹುದು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.