ADVERTISEMENT

ಚಲನಚಿತ್ರೋದ್ಯಮದ ಕಾರ್ಮಿಕರಿಗೂ ವಿಶೇಷ ಪ್ಯಾಕೆಜ್‌ಗೆ ಮನವಿ

​ಪ್ರಜಾವಾಣಿ ವಾರ್ತೆ
Published 19 ಮೇ 2021, 15:16 IST
Last Updated 19 ಮೇ 2021, 15:16 IST
ಸುನೀಲ್‌ ಪುರಾಣಿಕ್‌
ಸುನೀಲ್‌ ಪುರಾಣಿಕ್‌   

ಬೆಂಗಳೂರು: ಕೋವಿಡ್‌ ಎರಡನೇ ಅಲೆಯನ್ನು ನಿಯಂತ್ರಿಸುವ ಸಲುವಾಗಿ ಜಾರಿಗೊಳಿಸಲಾಗಿರುವ ಲಾಕ್‌ಡೌನ್‌ನಿಂದ ಚಿತ್ರೋದ್ಯಮ ಹಾಗೂ ಕಿರುತೆರೆ ಸ್ತಬ್ಧವಾಗಿದೆ. ಇದರಿಂದಾಗಿ ಸಂಕಷ್ಟಕ್ಕೆ ಒಳಗಾಗಿರುವ ಚಲನಚಿತ್ರೋದ್ಯಮದ ಕಾರ್ಮಿಕರು, ಕಲಾವಿದರುಗಳಿಗೆ ವಿಶೇಷ ಪ್ಯಾಕೆಜ್‌ ಘೋಷಿಸಲು ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನೀಲ್‌ ಪುರಾಣಿಕ್‌ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ.

‘ಕಳೆದ ವರ್ಷ ಲಾಕ್‌ಡೌನ್‌ ಘೋಷಿಸಿದ ಸಂದರ್ಭದಲ್ಲಿ ತೀವ್ರ ಸಂಕಷ್ಟದಲ್ಲಿದ್ದ ಚಲನಚಿತ್ರೋದ್ಯಮದ ಹಾಗೂ ಕಿರುತೆರೆಯ ಕಾರ್ಮಿಕರು, ಕಲಾವಿದರು, ತಂತ್ರಜ್ಞರ ಸಂಕಷ್ಟಕ್ಕೆ ಸ್ಪಂದಿಸಿ ದಿನಸಿ ಪದಾರ್ಥಗಳ ಕಿಟ್‌ ಪಡೆಯಲು ₹3,000 ಮೌಲ್ಯದ 6,000 ರಿಲಯನ್ಸ್‌ ಕೂಪನ್‌ಗಳನ್ನು ನೀಡಿ ನೆರವಾಗಿದ್ದೀರಿ. ಸದ್ಯದ ಪರಿಸ್ಥಿತಿಯಲ್ಲಿ ಎರಡನೇ ಅಲೆಯಿಂದಾಗಿ ಇಡೀ ರಾಜ್ಯದ ಜನತೆ ಸಂಕಷ್ಟಕ್ಕೆ ಒಳಗಾಗಿರುತ್ತಾರೆ. ಪ್ರತಿ ದಿನದ ಸಂಭಾವನೆಗಾಗಿ ದುಡಿಯುವ ಕನ್ನಡ ಚಲನಚಿತ್ರೋದ್ಯಮ ಹಾಗೂ ಕಿರುತೆರೆಯ ಹಲವು ಕಾರ್ಮಿಕರು, ಕಲಾವಿದರು ಕೋವಿಡ್‌ನಿಂದ ನಿಧನರಾಗಿದ್ದಾರೆ. ಇನ್ನೂ ಹಲವರು ಸೋಂಕಿನಿಂದ ಬಳಲುತ್ತಿದ್ದಾರೆ. ಹೀಗಾಗಿ ಅವರ ಕುಟುಂಬದ ನಿತ್ಯದ ಜೀವನ ನಿರ್ವಹಣೆ ದುಸ್ತರವಾಗಿದೆ. ಸರ್ಕಾರವು, ಕಳೆದ ಬಾರಿಯಂತೆ ಈ ಬಾರಿಯೂ ಚಲನಚಿತ್ರೋದ್ಯಮದ ಹಾಗೂ ಕಿರುತೆರೆಯ ಕಾರ್ಮಿಕರು, ಕಲಾವಿದರು, ತಂತ್ರಜ್ಞರುಗಳಿಗೆ ದಿನಸಿ ಪದಾರ್ಥಗಳನ್ನು ಖರೀದಿಸಲು ₹5 ಸಾವಿರ ಮೌಲ್ಯದ 6 ಸಾವಿರ ಕೂಪನ್‌ಗಳನ್ನು ವಿತರಿಸುವ ಯೋಜನೆ ಘೋಷಿಸಬೇಕು’ ಎಂದು ಪತ್ರದಲ್ಲಿ ಸುನೀಲ್‌ ಪುರಾಣಿಕ್‌ ಉಲ್ಲೇಖಿಸಿದ್ದಾರೆ.

‘ವಿಶೇಷ ಪ್ಯಾಕೆಜ್‌ನಲ್ಲಿ ನೆರವು ನೀಡಿ’: ಲಾಕ್‌ಡೌನ್‌ನಿಂದಾಗಿ ಜನಜೀವನ ದುಸ್ತರವಾಗಿದ್ದು, ಚಲನಚಿತ್ರರಂಗದ ವಿವಿಧ ವಿಭಾಗಗಳಲ್ಲಿ ಸೇವೆ ಸಲ್ಲಿಸುತ್ತಿರುವ ಎಲ್ಲ ಕಾರ್ಮಿಕರಿಗೂ ವಿಶೇಷ ಪ್ಯಾಕೆಜ್‌ನಲ್ಲಿ ನೆರವು ನೀಡಿ ಕನ್ನಡ ಚಿತ್ರರಂಗದ ಸದಸ್ಯರ ಕುಟುಂಬಕ್ಕೆ ಆಸರೆಯಾಗಬೇಕು’ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಕಾರ್ಯದರ್ಶಿ ಭಾ.ಮ.ಹರೀಶ್‌ ಅವರೂ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.