ನಟಿ ರಾಧಿಕಾ ಕುಮಾರಸ್ವಾಮಿ ತೆರೆಯ ಮೇಲೆ ಕಾಣಿಸಿಕೊಂಡು ಐದು ವರ್ಷಗಳೇ ಸರಿದಿವೆ. ಹಾಗೆಂದು ಅವರು ಬಣ್ಣದ ಲೋಕದಿಂದ ದೂರ ಉಳಿದಿಲ್ಲ. ‘ಕಾಂಟ್ರಾಕ್ಟ್’, ‘ದಮಯಂತಿ’ ಮತ್ತು ‘ಬೈರಾದೇವಿ’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಕೆಲವು ತಿಂಗಳ ಹಿಂದೆ ಸ್ಮಶಾನದಲ್ಲಿ ‘ಬೈರಾದೇವಿ’ ಚಿತ್ರದ ಶೂಟಿಂಗ್ ವೇಳೆ ಕೆಳಗೆ ಬಿದ್ದು ಅವರು ಗಾಯಗೊಂಡಿದ್ದರು. ಈಗ ಅವರು ‘ದಮಯಂತಿ’ ಚಿತ್ರದ ಮೂಲಕ ಜನರಿಗೆ ರಂಜನೆ ನೀಡಲು ಸಜ್ಜಾಗಿದ್ದಾರೆ.
ಶ್ರೀಲಕ್ಷ್ಮಿ ವೃಷಾದ್ರಿ ಪ್ರೊಡಕ್ಷನ್ಸ್ ಲಾಂಛನದಡಿ ಈ ಸಿನಿಮಾ ನಿರ್ಮಿಸಲಾಗಿದೆ. ಚಿತ್ರದಲ್ಲಿ ರಾಧಿಕಾ ಕುಮಾರಸ್ವಾಮಿ ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನವರಸನ್ ಕಥೆ ಬರೆದು ನಿರ್ದೇಶಿಸಿರುವ ಈ ಸಿನಿಮಾ ಕನ್ನಡ ಸೇರಿದಂತೆ ಹಿಂದಿ, ತಮಿಳು, ತೆಲುಗು ಮತ್ತು ಮಲಯಾಳದಲ್ಲಿ ನಿರ್ಮಾಣವಾಗುತ್ತಿದೆ.
ತೆಲುಗಿನಲ್ಲಿ ಬಿಡುಗಡೆಗೊಂಡ ‘ಅರುಂಧತಿ’ ಮತ್ತು ‘ಭಾಗಮತಿ’ ಚಿತ್ರಗಳು ಸೂಪರ್ ಹಿಟ್ ಆಗಿದ್ದು ಎಲ್ಲರಿಗೂ ಗೊತ್ತು. ಇದೇ ಮಾದರಿಯಲ್ಲಿ ‘ದಮಯಂತಿ’ ಚಿತ್ರ ನಿರ್ಮಾಣವಾಗಿದೆಯಂತೆ. ಪ್ರಸಕ್ತ ಕಾಲಘಟ್ಟದ ಕಥೆಯ ಜೊತೆಗೆ ಐತಿಹಾಸಿಕ ಕಥಾಹಂದರವೂ ಇದರಲ್ಲಿ ಮಿಳಿತವಾಗಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ.
ಹಾರರ್, ಥ್ರಿಲ್ಲರ್ ಹಾಗೂ ಕಾಮಿಡಿ ಕಥಾಹಂದರ ಹೊಂದಿರುವ ಈ ಚಿತ್ರದ ಶೂಟಿಂಗ್ ಈಗಾಗಲೇ ಪೂರ್ಣಗೊಂಡಿದೆ. ಬೆಂಗಳೂರು, ಮೈಸೂರು, ಹೈದರಾಬಾದ್ನಲ್ಲಿ ಚಿತ್ರೀಕರಣ ನಡೆಸಲಾಗಿದೆ.
ಆರ್.ಎಸ್. ಗಣೇಶ್ ನಾರಾಯಣ್ ಸಂಗೀತ ಸಂಯೋಜಿಸಿದ್ದಾರೆ. ಛಾಯಾಗ್ರಹಣ ಪಿ.ಕೆ.ಎಚ್. ದಾಸ್ ಅವರದು. ‘ಭಜರಂಗಿ’ ಲೋಕಿ, ಸಾಧುಕೋಕಿಲ, ತಬಲನಾಣಿ, ಮಿತ್ರ, ನವೀನ್ ಕೃಷ್ಣ, ಹೊನ್ನವಳ್ಳಿ ಕೃಷ್ನ, ರವಿಗೌಡ, ಬಲರಾಜವಾಡಿ, ವೀಣಾ ಸುಂದರ್, ಕೆಂಪೇಗೌಡ ತಾರಾಗಣದಲ್ಲಿ ಇದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.