ADVERTISEMENT

ಶೀಘ್ರದಲ್ಲೇ ‘ಡಿಯರ್‌ ಸತ್ಯ’ ತೆರೆಗೆ

ನಾಯಕ ಆರ್ಯನ್ ಸಂತೋಷ್ ಜನ್ಮದಿನದಂದು ಟ್ರೇಲರ್ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2021, 7:17 IST
Last Updated 30 ಆಗಸ್ಟ್ 2021, 7:17 IST
‘ಡಿಯರ್ ಸತ್ಯ ಚಿತ್ರದ ನಟ, ನಟಿ
‘ಡಿಯರ್ ಸತ್ಯ ಚಿತ್ರದ ನಟ, ನಟಿ    

ಆರ್ಯನ್ ಸಂತೋಷ್ ನಾಯಕನಾಗಿ ನಟಿಸಿರುವ ‘ಡಿಯರ್ ಸತ್ಯ’ ಚಿತ್ರ ಶೀಘ್ರದಲ್ಲೇ ತೆರೆಗೆ ಬರಲಿದೆ. ಆರ್ಯನ್ ಜನ್ಮದಿನದಂದೇ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ.

ಈ ಚಿತ್ರದಲ್ಲಿ ನಾಯಕ ಡೆಲಿವರಿ ಬಾಯ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹೀಗಾಗಿ ಚಿತ್ರದ ಟ್ರೇಲರ್ ಅನ್ನು ಬೆಂಗಳೂರಿನಲ್ಲಿ ಆಹಾರವನ್ನು ತಲುಪಿಸುವ ಡೆಲಿವರಿ ಬಾಯ್ಸ್ ಬಿಡುಗಡೆ ಮಾಡಿದ್ದು ವಿಶೇಷವಾಗಿತ್ತು.

ಚಿತ್ರದ ಕುರಿತು ವಿಕ್ಟರಿ ಸಿನಿಮಾಸ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆರ್ಯನ್‌, ‘ನಾನು ಚಿತ್ರರಂಗಕ್ಕೆ ಬಂದು ಹತ್ತು ವರ್ಷವಾಗಿದೆ. ‘ಕಲ್ಲರಳಿ ಹೂವಾಗಿ’ ಚಿತ್ರದ ಮೂಲಕ ಪೋಷಕ ಕಲಾವಿದನಾಗಿ ಚಿತ್ರರಂಗ ಪ್ರವೇಶಿಸಿದ ನಾನು, ‘ನೂರುಜನ್ಮಕು’ ಚಿತ್ರದಿಂದ ನಾಯಕನಾದೆ. ಈ ಚಿತ್ರದ ಕಥೆ ಹಿಡಿದು ಸಾಕಷ್ಟು ಜನರನ್ನು ಸಂಪರ್ಕಿಸಿದೆ. ಯಾರು ಮುಂದೆ ಬರಲಿಲ್ಲ. ಗಣೇಶ್ ಪಾಪಣ್ಣ, ಯತೀಶ್ ವೆಂಕಟೇಶ್ (ರಾಕ್ ಲೈನ್), ಶ್ರೀನಿವಾಸ್ ಶ್ರೀಭಕ್ತ ಹಾಗೂ ಅಜಯ್ ಅಪರೂಪ ಅವರು ಈ ಚಿತ್ರ ನಿರ್ಮಾಣಕ್ಕೆ ಮುಂದಾದರು. ನಾನು ಕೂಡ ಈ ಚಿತ್ರದ ನಿರ್ಮಾಪಕರಲ್ಲಿ ಒಬ್ಬ. ನಿರ್ದೇಶಕ ಶಿವಗಣೇಶ್ ಸೇರಿದಂತೆ ಎಲ್ಲಾ ತಂತ್ರಜ್ಞರ ಶ್ರಮದಿಂದ ಚಿತ್ರ ಉತ್ತಮವಾಗಿ ಮೂಡಿಬಂದಿದೆ’ ಎಂದರು.

ADVERTISEMENT

‘ನಾವು ನಾಲ್ಕು ಜನ ನಿರ್ಮಾಪಕರು ಸೇರಿ ಎರಡು ವರ್ಷಗಳ ಹಿಂದೆ ‘ಭಿನ್ನ’ ಎಂಬ ಸಿನಿಮಾ ನಿರ್ಮಾಣ ಮಾಡಿದ್ದೆವು. ಒಟಿಟಿಯಲ್ಲಿ ಬಿಡುಗಡೆಯಾದ ಪ್ರಥಮ ಕನ್ನಡ ಚಿತ್ರವದು. ಈಗ ಎರಡನೇ ಚಿತ್ರವಾಗಿ ‘ಡಿಯರ್ ಸತ್ಯ’ ನಿರ್ಮಾಣ ಮಾಡಿದ್ದೇವೆ. ಸಪ್ಟೆಂಬರ್‌ನಲ್ಲಿ ಚಿತ್ರಮಂದಿರಗಳಲ್ಲೇ ಚಿತ್ರ ಬಿಡುಗಡೆಗೆನಿರ್ಧರಿಸಿದ್ದೇವೆ’ ಎಂದರು ನಿರ್ಮಾಪಕ ಗಣೇಶ್ ಪಾಪಣ್ಣ.

‘ಜಿಗರ್ ಥಂಡ, ತ್ರಾಟಕ, ಆ ದೃಶ್ಯ ಚಿತ್ರಗಳ ನಂತರ ನಾನು ಕೌಟುಂಬಿಕ ಚಿತ್ರವೊಂದನ್ನು ನಿರ್ದೇಶಿಸಬೇಕೆಂದುಕೊಂಡೆ. ಆ ಸಮಯದಲ್ಲಿ ಸಂತೋಷ್ ಭೇಟಿಯಾದರು.‌ ನಂತರ ಚಿತ್ರ ಆರಂಭವಾಯಿತು. ನಾಯಕಿ ಅರ್ಚನಾ ಕೊಟ್ಟಿಗೆ ಅವರ ಅಭಿನಯವೂ ಚೆನ್ನಾಗಿದೆ. ಸಂಗೀತ ನಿರ್ದೇಶಕ ಶ್ರೀಧರ್ ವಿ ಸಂಭ್ರಮ್ ಉತ್ತಮ ಹಾಡುಗಳನ್ನು ನೀಡಿದ್ದಾರೆ’ ಎನ್ನುತ್ತಾರೆನಿರ್ದೇಶಕ ಶಿವಗಣೇಶ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.