ADVERTISEMENT

ಕಾರ್ನಾಡರ ನಿಧನಕ್ಕೆ ದರ್ಶನ್‌, ಸುದೀಪ್‌, ಪುನೀತ್‌ ಕಂಬನಿ

ಚಿತ್ರರಂಗದ ನುಡಿನಮನ

​ಪ್ರಜಾವಾಣಿ ವಾರ್ತೆ
Published 10 ಜೂನ್ 2019, 11:48 IST
Last Updated 10 ಜೂನ್ 2019, 11:48 IST
   

ಬೆಂಗಳೂರು: ಸಾಹಿತಿ ಗಿರೀಶ ಕಾರ್ನಾಡರ ನಿಧನಕ್ಕೆ ಕನ್ನಡ ಚಿತ್ರತಂಡ ಕಂಬಿನಿ ಮಿಡಿದಿದೆ.

‘ಜ್ಞಾನಪೀಠ ಪ್ರಶಸ್ತಿ ವಿಜೇತ, ಹಿರಿಯ ಸಾಹಿತಿ ಹಾಗೂ ಮೇರು ಕಲಾವಿದರಲ್ಲೊಬ್ಬರಾದ ಗಿರೀಶ ಕಾರ್ನಾಡ ಇಂದು ವಿಧಿವಶರಾಗಿರುವುದು ಕನ್ನಡ ಸಾಹಿತ್ಯ ಹಾಗೂ ಚಿತ್ರರಂಗಕ್ಕೆ ತುಂಬಲಾರದ ನಷ್ಟ. ಈ ದುಃಖವನ್ನು ತಡೆದುಕೊಳ್ಳುವ ಶಕ್ತಿಯನ್ನು ದೇವರು ಅವರ ಕುಟುಂಬಕ್ಕೆ ನೀಡಲಿ’ ಎಂದು ‘ಚಾಲೆಂಜಿಂಗ್‌ ಸ್ಟಾರ್’ ದರ್ಶನ್ ಕಂಬಿನಿ ಮಿಡಿದಿದ್ದಾರೆ.

‘ಪದ್ಮಶ್ರೀ, ಪದ್ಮಭೂಷಣ, ಹಿರಿಯ ಸಾಹಿತಿ ಗಿರೀಶ ಕಾರ್ನಾಡ ನಮನ್ನು ಅಗಲಿದ್ದಾರೆ. ಸಾಹಿತ್ಯ ಲೋಕಕ್ಕೆ ಹಾಗೂ ರಂಗಭೂಮಿಗೆ ಅವರು ನೀಡಿದ ಕೊಡುಗೆ ಅಪಾರ. ಅವರ ಜೊತೆ ಎರಡು ಚಿತ್ರಗಳಲ್ಲಿ ಅಭಿನಯಿಸಿದ ಭಾಗ್ಯ ನನ್ನದು...’ ಎಂದು ‘ಪವರ್‌ ಸ್ಟಾರ್‌’‍ಪುನೀತ್‌ ರಾಜ್‌ಕುಮಾರ್‌ ಕಂಬನಿ ಮಿಡಿದಿದ್ದಾರೆ.

ADVERTISEMENT

‘ಗಿರೀಶ ಕಾರ್ನಾಡರು ಶ್ರೇಷ್ಠ ಬರಹಗಾರರು. ನಾನು ಅವರ ಸಾಹಿತ್ಯದ ಅಭಿಮಾನಿ. ಅವರೊಟ್ಟಿಗೆ ನಟಿಸಿದ್ದು ನನ್ನ ಪುಣ್ಯ’ ಎಂದು ನಟ ಸುದೀಪ್‌ ಕಂಬನಿ ಮಿಡಿದಿದ್ದಾರೆ.

‘ಕನ್ನಡ ಸಾಹಿತ್ಯ ಲೋಕಕ್ಕೆ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟವರು, ಚಿಂತಕರು, ನಿರ್ದೇಶಕರು, ಹಿರಿಯ ಸಾಹಿತಿ ಹಾಗೂ ನಟರಾದ ಗಿರೀಶ ಕಾರ್ನಾಡರವರ ಕೊಡುಗೆ ಅಪಾರ. ಭಗವಂತ ಅವರ ಆತ್ಮಕ್ಕೆ ಚಿರಶಾಂತಿಯನ್ನು ಕರುಣಿಸಲಿ. ಭಾವಪೂರ್ಣ ಶ್ರದ್ಧಾಂಜಲಿಗಳು’ ಎಂದು ‘ರಿಯಲ್‌ ಸ್ಟಾರ್’ ಉಪೇಂದ್ರ ಶ್ರದ್ಧಾಂಜಲಿ ಅರ್ಪಿಸಿದ್ದಾರೆ.

ನಟರಾದ ಗಣೇಶ್‌, ಶ್ರೀಮುರುಳಿ, ಸೃಜನ್‌ ಲೋಕೇಶ್‌, ನೀನಾಸಂ ಸತೀಶ್‌, ನಿರ್ದೇಶಕ ಶಶಾಂಕ್, ನಟಿ ಸುಮಲತಾ ಅಂಬರೀಷ್‌ ಸಂತಾಪ ಸೂಚಿಸಿದ್ದಾರೆ.

ನಿರ್ದೇಶಕ ಯೋಗರಾಜ್‌ ಭಟ್‌ ಪದ್ಯದ ಮೂಲಕ ಕಾರ್ನಾಡರಿಗೆ ನುಡಿನಮನ ಸಲ್ಲಿಸಿದ್ದಾರೆ.

‘ಅವರು ಪುಟಗಳಲ್ಲಿ ಜೀವಂತ,

ರಂಗದಲ್ಲಿ ಜೀವಂತ,

ಪರದೆಯಲ್ಲಿ ಜೀವಂತ,

ತುಂಬು ಸ್ಮೃತಿಗಳಲ್ಲಿ ಜೀವಂತ,

ಬದುಕಿದ್ದಾಗ ಬಾಳಿದ್ದಕ್ಕಿಂತ

ಹೊರಟ ನಂತರ ಶಾಶ್ವತವಾಗಿ

ಬದುಕುವುದು ಎಂದರೆ

ಸಾಮಾನ್ಯವೇ?!

ತಮಗೆ ಹೃತ್ಪೂರ್ವಕ

ನಮನ’

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.