ಬೆಂಗಳೂರು: ನಟ ಸುದೀಪ್ ಅವರ ವಿರುದ್ಧ ಸಾಮಾಜಿಕ ಮಾಧ್ಯಮಗಳಲ್ಲಿ ಅವಹೇಳನಕಾರಿಯಾದ ಮಾತುಗಳನ್ನಾಡುತ್ತಿರುವ ಚರಣ್ ಹಾಗೂ ಅಹೋರಾತ್ರ ಎಂಬುವವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ.ಮ.ಹರೀಶ್ ಸೋಮವಾರ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ.
‘ಭಾರತೀಯ ಚಲನಚಿತ್ರರಂಗದ ಹೆಸರಾಂತ ಕಲಾವಿದ ಕಿಚ್ಚ ಸುದೀಪ್ ಅವರ ವಿರುದ್ಧ ಅಹೋರಾತ್ರ ಮತ್ತು ಚರಣ್ ಎಂಬುವವರು ಸಾಮಾಜಿಕ ಜಾಲತಾಣಗಳಲ್ಲಿ ಅವಾಚ್ಯ, ಅವಹೇಳನಕಾರಿಯಾಗಿ ಪದಬಳಕೆ ಮಾಡುವ ಮೂಲಕ ಕನ್ನಡ ಚಿತ್ರರಂಗ ಹಾಗೂ ಸುದೀಪ್ ಅವರ ಘನತೆ, ಗೌರವಕ್ಕೆ ಚ್ಯುತಿ ತರುವಂತಹ ಹೇಳಿಕೆ ನೀಡಿರುವುದು ಬೇಸರದ ಸಂಗತಿಯಾಗಿದೆ. ಇಂತಹ ಹೇಳಿಕೆಗಳಿಂದ ಕನ್ನಡ ಚಿತ್ರರಂಗ ಹಾಗೂ ಕಲಾವಿದರ ಬಗ್ಗೆ ಸಾರ್ವಜನಿಕರಲ್ಲಿ ಇಲ್ಲಸಲ್ಲದ ಗೊಂದಲಗಳಿಗೆ ಎಡೆಮಾಡಿಕೊಟ್ಟಂತಾಗುತ್ತದೆ. ಆದ್ದರಿಂದ ತಾವು ಅಹೋರಾತ್ರ ಮತ್ತು ಚರಣ್ ಇವರ ವಿರುದ್ಧ ಕಾನೂನು ಕ್ರಮ ಜರುಗಿಸಿ ಚಿತ್ರರಂಗದ ಹಾಗೂ ಕಲಾವಿದರ ಬೆಳವಣಿಗೆಗೆ ಯಾವುದೇ ರೀತಿಯ ಚ್ಯುತಿ ಬರದಂತೆ ಸಹಕರಿಸಬೇಕು’ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಆನ್ಲೈನ್ ಗೇಮ್ಗಳ ವಿಚಾರದಲ್ಲಿ ಸುದೀಪ್ ಅವರ ವಿರುದ್ಧ ಚರಣ್ ಹಾಗೂ ಅಹೋರಾತ್ರ ಎಂಬುವವರು ಸಾಮಾಜಿಕ ಮಾಧ್ಯಮಗಳಲ್ಲಿ ಇತ್ತೀಚೆಗೆ ಹಲವು ಪೋಸ್ಟ್ ಹಾಕಿದ್ದರು. ಇವು ಸುದೀಪ್ ಅಭಿಮಾನಗಳ ಆಕ್ರೋಶಕ್ಕೂ ಕಾರಣವಾಗಿದೆ. ಸುದೀಪ್ ಅವರ ವಿರುದ್ಧ ಈ ರೀತಿ ನಿಂದನೆಯನ್ನು ನಿರ್ದೇಶಕ ನಂದಕಿಶೋರ್ ಕೂಡಾ ಇತ್ತೀಚೆಗೆ ತೀವ್ರವಾಗಿ ಖಂಡಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.