ADVERTISEMENT

ಕೂಗಿ ಕರೆದೆನಲ್ಲೋ ಮಾದೇವ

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2019, 10:23 IST
Last Updated 7 ಏಪ್ರಿಲ್ 2019, 10:23 IST
ರಕ್ಷಿತಾ
ರಕ್ಷಿತಾ   

ಚಿತ್ರದ ಹೆಸರು ‘ಕೂಗಿ ಕರೆದೆನಲ್ಲೋ ಮಾದೇವ’. ಹೆಸರು ಕೇಳಿದ ತಕ್ಷಣವೇ ಮೂಡುವುದು ‘ಇದು ಮಲೆ ಮಹದೇಶ್ವರ ಸ್ವಾಮಿಗೆ ಸಂಬಂಧಿಸಿದ್ದಾ’ ಎಂಬ ‍ಪ್ರಶ್ನೆ. ಚಿತ್ರದ ಶೀರ್ಷಿಕೆಯ ಮೇಲ್ಭಾಗದಲ್ಲಿ ಮಹಾದೇಶ್ವರ ಸ್ವಾಮಿಯ ಚಿತ್ರ ಕೂಡ ಇದೆ.

ಇದನ್ನು ನಿರ್ದೇಶಿಸಿರುವವರು ಎ. ನಟ ಆರಾಧ್ಯಾ. ಚಿತ್ರದ ಬಗ್ಗೆ ಮಾಹಿತಿ ನೀಡಲು, ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡಲು ಅವರು ಚಿಕ್ಕದೊಂದು ಕಾರ್ಯಕ್ರಮ ಆಯೋಜಿಸಿದ್ದರು. ಈ ಚಿತ್ರ ರೂಪುಗೊಂಡ ಕಥೆಗೂ ಮಹದೇಶ್ವರ ಸ್ವಾಮಿ ಬೆಟ್ಟಕ್ಕೂ ನಂಟಿದೆ.

ಒಮ್ಮೆ ನಿರ್ದೇಶಕರು ಬೆಟ್ಟಕ್ಕೆ ಪಾದಯಾತ್ರೆ ಕೈಗೊಂಡಿದ್ದರಂತೆ. ಯಾತ್ರೆಯ ವೇಳೆಯಲ್ಲಿ, ರಸ್ತೆ ಬದಿ ಸುಸ್ತಾಗಿ ಕುಳಿತಿದ್ದ ಮಹದೇಶ್ವರನ ಭಕ್ತರು ಕಂಡರಂತೆ. ಅವರಲ್ಲಿ ‘ಏಕೆ ಕುಳಿತಿದ್ದೀರಿ’ ಎಂದು ಪ್ರಶ್ನಿಸಿದಾಗ, ‘ಸುಸ್ತಾಗಿದೆ’ ಎಂಬ ಉತ್ತರ ಸಿಕ್ಕಿತಂತೆ. ಆಗ ನಿರ್ದೇಶಕರು, ‘ಮಾದೇಶ್ವರನನ್ನು ಕೂಗಿ ಕರೆಯಿರಿ’ ಎಂದು ಅವರಲ್ಲಿ ಹೇಳಿದರು. ಅದೇ ಮಾತು ಈ ಚಿತ್ರದ ಶೀರ್ಷಿಕೆಗೆ ಸ್ಫೂರ್ತಿ ಆಯಿತು.

ADVERTISEMENT

ಮಂಡ್ಯ, ಮಹದೇಶ್ವರ ಬೆಟ್ಟ, ಆನೇಕಲ್‌ನಲ್ಲಿ ಈ ಸಿನಿಮಾ ಚಿತ್ರೀಕರಣ ನಡೆದಿದೆ. ‘ಇದರಲ್ಲಿ ಇರುವುದು ಹಳ್ಳಿಯ ಬಡಕುಟುಂಬದ ಕಥೆ. ಮಂತ್ರವಾದಿಯೊಬ್ಬ ಹೇಗೆ ಕಷ್ಟ ಕೊಡುತ್ತಾನೆ, ಮಹದೇಶ್ವರನು ತನ್ನ ಭಕ್ತರನ್ನು ಹೇಗೆ ಕಾಯುತ್ತಾನೆ ಎಂಬುದು ಚಿತ್ರದಲ್ಲಿ ಇದೆ’ ಎಂದರು ಆರಾಧ್ಯಾ.

ನಿರ್ಮಾಪಕ ಆರ್.ಎಂ. ಗುರಪ್ಪ ಅವರು ಮಂತ್ರವಾದಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಾಯಕ ನಟನಾಗಿ ವಿಷ್ಣುಸಿಂಹ, ನಾಯಕಿಯಾಗಿ ರಕ್ಷಿತಾ ಕಾಣಿಸಿಕೊಂಡಿದ್ದಾರೆ.

ಚಿತ್ರದಲ್ಲಿ ಎರಡು ಫೈಟ್‌ ದೃಶ್ಯಗಳು ಇವೆ. ಇದಕ್ಕಾಗಿ ವಿಷ್ಣುಸಿಂಹ ಅವರು ಪ್ರತ್ಯೇಕ ತರಬೇತಿ ‍ಪಡೆದಿದ್ದಾರೆ. ರಕ್ಷಿತಾ ಹಾಗೂ ವಿಷ್ಣುಸಿಂಹ ಅವರಿಗೆ ಇದು ಮೊದಲ ಸಿನಿಮಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.