ADVERTISEMENT

ವರನಟ ಡಾ.ರಾಜ್‌ಕುಮಾರ್‌ 15ನೇ ವರ್ಷದ ಪುಣ್ಯಸ್ಮರಣೆ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2021, 18:48 IST
Last Updated 12 ಏಪ್ರಿಲ್ 2021, 18:48 IST
ಪುಣ್ಯಸ್ಮರಣೆ ಅಂಗವಾಗಿ ರಾಜ್‌ಕುಮಾರ್‌ ಪುಣ್ಯಭೂಮಿಯನ್ನು ಹೂವುಗಳಿಂದ ಅಲಂಕರಿಸಿರುವುದು
ಪುಣ್ಯಸ್ಮರಣೆ ಅಂಗವಾಗಿ ರಾಜ್‌ಕುಮಾರ್‌ ಪುಣ್ಯಭೂಮಿಯನ್ನು ಹೂವುಗಳಿಂದ ಅಲಂಕರಿಸಿರುವುದು   

ಬೆಂಗಳೂರು: ಇಂದು ನಟಸಾರ್ವಭೌಮ, ವರನಟ ಡಾ.ರಾಜ್‌ಕುಮಾರ್‌ ಅವರ 15ನೇ ವರ್ಷದ ಪುಣ್ಯತಿಥಿ. ಈ ಸಂದರ್ಭದಲ್ಲಿ ಸಾವಿರಾರು ಜನರು ಸಾಮಾಜಿಕ ಜಾಲತಾಣಗಳಲ್ಲಿ ರಾಜ್‌ಕುಮಾರ್ ಅವರನ್ನು ಸ್ಮರಿಸಿದ್ದಾರೆ.

ಕಂಠೀರವ ಸ್ಟುಡಿಯೋದಲ್ಲಿರುವ ರಾಜ್‌ಕುಮಾರ್‌ ಹಾಗೂ ಪಾರ್ವತಮ್ಮ ರಾಜ್‌ಕುಮಾರ್‌ ಅವರ ಪುಣ್ಯಭೂಮಿಗೆ ಪುಷ್ಪನಮನವನ್ನು ನಟ ರಾಘವೇಂದ್ರ ರಾಜ್‌ಕುಮಾರ್‌ ಸಲ್ಲಿಸಿದರು. ಟ್ವೀಟ್‌ ಮೂಲಕವೂ ಅಪ್ಪನನ್ನು ನೆನೆದಿರುವ ಅವರು,ಹಾಡಿನ ಮೂಲಕ ರಾಜ್‌ಕುಮಾರ್‌ ಅವರನ್ನು ನೆನೆದ ರಾಘವೇಂದ್ರ ರಾಜ್‌ಕುಮಾರ್‌, ‘ನೂರಾರು ನೆನಪಿನ ಸಂತಸ ತುಂಬಿದ ಹಾಡು ಇದು, ಏಳೇಳು ಜನಮಕೂ ಬೆಸುಗೆ ಹಾಕುವ ಹಾಡು ಇದು. ಬಾಳಿನ ಬಾನಿನಲಿ ಪ್ರೇಮದ ಚಂದಿರ ಸಂಚಾರ. ಹುಣ್ಣಿಮೆ ರಾಶಿಯಲಿ ನಮ್ಮದು ಸುಂದರ ಸಂಸಾರ’ ಎಂದು ಸ್ವತಃ ರಾಜ್‌ಕುಮಾರ್‌ ಅವರೇ ಹಾಡಿರುವ ವಿಡಿಯೊ ಅಪ್‌ಲೋಡ್‌ ಮಾಡಿದ್ದಾರೆ. ಇದರಲ್ಲಿ ರಾಜ್‌ಕುಮಾರ್‌ ಅವರ ಜೊತೆಗೆ ಕುಟುಂಬದ ಸದಸ್ಯರು ಇರುವ ಸಂಗ್ರಹ ಚಿತ್ರಗಳಿವೆ.

ಮಗನಾಗಿ ಹುಟ್ಟಿರುವುದಕ್ಕೆ ಹೆಮ್ಮೆ ಇದೆ: ‘ಕಳೆದ 15 ವರ್ಷದಲ್ಲಿ ಅಪ್ಪಾಜಿ ಇಲ್ಲ ಎನ್ನುವ ಭಾವನೆ ಮೂಡೇ ಇಲ್ಲ. ನೆನಪು, ಪ್ರೀತಿ, ವಿಶ್ವಾಸ ಅವರು ನಮ್ಮಲ್ಲಿ ಬಿಟ್ಟುಹೋಗಿದ್ದಾರೆ. ಕುಟುಂಬದ ಜೊತೆ ಹೇಗಿರಬೇಕು ಎನ್ನುವುದನ್ನು ಅವರು ಕಲಿಸಿದ್ದಾರೆ. ಜನರ ಪ್ರೀತಿ ಗಳಿಸಿದ್ದೇವೆ. ಅವರ ಮಗನಾಗಿ ಹುಟ್ಟಿರುವುದಕ್ಕೆ ಹೆಮ್ಮೆ ಪಡುತ್ತೇನೆ’ ಎಂದು ಪುನೀತ್‌ ಹೇಳಿದರು.

ADVERTISEMENT

ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಟ್ವೀಟ್‌ ಮಾಡಿ, ‘ಅಪ್ರತಿಮ ಕಲಾವಿದ, ಕನ್ನಡ ಚಿತ್ರರಂಗದ ಮೇರುನಟ, ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತ, ಪದ್ಮಭೂಷಣ, ಕರ್ನಾಟಕ ರತ್ನ ಡಾ. ರಾಜ್ ಕುಮಾರ್ ಅವರ ಪುಣ್ಯತಿಥಿಯಂದು ಅಭಿಮಾನಪೂರ್ವಕ ನಮನಗಳು. ಕೋಟ್ಯಂತರ ಅಭಿಮಾನಿಗಳ ಪಾಲಿನ ನೆಚ್ಚಿನ ‘ಅಣ್ಣಾವ್ರು’, ಕನ್ನಡಿಗರ ಹೃದಯದಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ’ ಎಂದು ಉಲ್ಲೇಖಿಸಿದ್ದಾರೆ.

‘ಕರುನಾಡಿನ ಕಣ್ಮಣಿ, ಕರ್ನಾಟಕ ರತ್ನ, ನಟಸಾರ್ವಭೌಮ, ವರನಟ ಡಾ.ರಾಜ್‌ಕುಮಾರ್‌ ಅವರು ನಮ್ಮನ್ನಗಲಿ ಇಂದಿಗೆ 15 ವರ್ಷ ಕಳೆದಿದೆ. ತಮ್ಮ ಅದ್ಭುತ ನಟನೆ ಮತ್ತು ಸಿರಿಕಂಠದ ಮೂಲಕ ಕನ್ನಡ ನಾಡಿನ ಜನಮಾನಸದಲ್ಲಿ ಅಜರಾಮರರಾಗಿರುವ ನೆಚ್ಚಿನ ಅಣ್ಣಾವ್ರಿಗೆ ಅವರ ಪುಣ್ಯತಿಥಿಯಂದು ಶ್ರದ್ಧಾಪೂರ್ವಕ ನಮನಗಳು’ ಎಂದು ಸಚಿವ ಡಾ.ಕೆ.ಸುಧಾಕರ್‌ ಟ್ವೀಟ್‌ ಮಾಡಿದ್ದಾರೆ.

ಪುಣ್ಯಸ್ಮರಣೆ ಅಂಗವಾಗಿ ರಾಜ್ಯದ ಹಲವೆಡೆ ರಾಜ್‌ಕುಮಾರ್ ಅಭಿಮಾನಿಗಳು ಸಮಾಜಮುಖಿ ಕಾರ್ಯಕ್ರಮಗಳನ್ನು ಆಯೋಜಿಸಿದ್ದರು.

‘ನಮ್ಮ ಕರುನಾಡಿಗೆ ಅಪಾರ ಸೇವೆ ಸಲ್ಲಿಸಿ ಕನ್ನಡಿಗರ ಮನದಲ್ಲಿ ಸದಾ ರಾಜನಾಗಿ ಉಳಿದಿರುವ ಅಣ್ಣಾವ್ರು ಡಾ.ರಾಜ್‌ ಅವರ ಪುಣ್ಯಸ್ಮರಣೆ. ಮರೆಯಲಾಗದ ಮಾಣಿಕ್ಯ’ ಎಂದು ನಟ ದರ್ಶನ್‌ ಟ್ವೀಟ್‌ ಮೂಲಕ ನಮನ ಸಲ್ಲಿಸಿದರು.

ಭಾವುಕರಾದ ಜಗ್ಗೇಶ್‌: ನಟ ಜಗ್ಗೇಶ್‌ ಅವರು ಟ್ವೀಟ್‌ ಮೂಲಕ ‘ರಾಜಣ್ಣ ನನ್ನ ಹೃದಯದಲ್ಲೇ ಲೀನವಾಗಿದ್ದಾರೆ! ಮತ್ತೆ ಬನ್ನಿ ಅಣ್ಣ’ ಎಂದು
ಬರೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.