ಚಿತ್ರರಂಗದಲ್ಲಿ ಹಲವು ವಿಭಾಗಗಳಲ್ಲಿ ದುಡಿದ ಒಂದಷ್ಟು ಮನಸ್ಸುಗಳು ಒಟ್ಟಾಗಿ ನಿರ್ಮಿಸುತ್ತಿರುವ ‘ಮ್ಯಾಡಿ’ ಚಿತ್ರ ಸೆಟ್ಟೇರಲು ಸಿದ್ಧವಾಗಿದೆ. ಇತ್ತೀಚೆಗಷ್ಟೇ ಚಿತ್ರದ ಪ್ರಚಾರಕ್ಕಾಗಿ ಸಿದ್ಧಪಡಿಸಿದ ಹಾಡೊಂದು ಬಿಡುಗಡೆಗೊಂಡಿದೆ.
ಮಹೇಶ್ಮತಿ ಬ್ಯಾನರ್ ಅಡಿಯಲ್ಲಿ ಸರಸ್ವತಿ.ಆರ್.ನಾಗೇಶ್ ನಿರ್ಮಿಸುತ್ತಿರುವ ಚಿತ್ರಕ್ಕೆ ನಾಗಭೂಷಣ್ ಆ್ಯಕ್ಷನ್ ಕಟ್ ಹೇಳಿದ್ದಾರೆ. ಬಹಳಷ್ಟು ವರ್ಷಗಳಿಂದ ಸಹ ನಿರ್ದೇಶಕನಾಗಿ ಕೆಲಸ ಮಾಡಿರುವ ಧನುಷ್ ಕುಮಾರ್ ನಾಯಕ. ಮಾಜಿ ಸಚಿವರಾದ ಹೆಚ್.ಎಂ.ರೇವಣ್ಣ, ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ ಸೇರಿದಂತೆ ಚಿತ್ರರಂಗದ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಹಾಜರಿದ್ದು ತಂಡಕ್ಕೆ ಶುಭ ಕೋರಿದರು.
‘ನನಗೆ ಬಾಲ್ಯದಿಂದಲೂ ಸಿನಿಮಾ ಬಗ್ಗೆ ಆಸಕ್ತಿ. ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ಅಭಿಮಾನಿ. ನಾನು ಹೀರೋ ಆಗಬೇಕೆಂಬ ನನ್ನ ಕನಸಿಗೆ ಮಾರ್ಗದರ್ಶನ ನೀಡಿದ್ದೆ ನನ್ನ ಗುರು ‘ಭರ್ಜರಿ’ ಚೇತನ್ ಕುಮಾರ್. ಡ್ಯಾನ್ಸ್, ಫೈಟ್, ನಟನೆ ಕಲಿತು ಈಗ ಜನರ ಮುಂದೆ ಬರುತ್ತಿದ್ದೇನೆ. ಇದರಲ್ಲಿ ನನ್ನ ಪಾತ್ರ ಕೂಡ ಒಂದು ರೀತಿ ಮ್ಯಾಡ್ ಆಗಿ ಇರುತ್ತದೆ. ಇದೊಂದು ವಿಭಿನ್ನ ಗ್ಯಾಂಗ್ಸ್ಟಾರ್ ಚಿತ್ರ’ ಎಂದು ಮಾಹಿತಿ ನೀಡಿದರು ನಾಯಕ ಧನುಷ್.
ಬೆಂಗಳೂರು, ಉತ್ತರ ಕರ್ನಾಟಕ , ಕೋಲಾರ ಸೇರಿದಂತೆ ಹಲವು ಭಾಗಗಳಲ್ಲಿ ಚಿತ್ರೀಕರಣ ಮಾಡಲು ತಂಡ ಸಿದ್ಧತೆ ಮಾಡಿಕೊಂಡಿದೆ. ಚಿತ್ರದಲ್ಲಿ ಐದು ಹಾಡುಗಳಿದ್ದು ಧರ್ಮ ವಿಶ್ವ ಸಂಗೀತ ನೀಡಲಿದ್ದಾರೆ. ಲವಿತ್ ಛಾಯಾಚಿತ್ರಗ್ರಹಣವಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.