‘ರಾಬರ್ಟ್’ ಸಿನಿಮಾ ಬಳಿಕ ನಟ ವಿನೋದ್ ಪ್ರಭಾಕರ್ ಹಾಗೂ ನಟಿ ಸೋನಲ್ ಮೊಂತೆರೋ ಜೋಡಿಯಾಗಿ ನಟಿಸುತ್ತಿರುವ ‘ಮಾದೇವ’ ಸಿನಿಮಾ ಜೂನ್ 6ಕ್ಕೆ ತೆರೆಕಾಣಲಿದೆ. ಇತ್ತೀಚೆಗೆ ಚಿತ್ರದ ‘ಎದೇಲಿ ತಂಗಾಳಿ..’ ಎಂಬ ಹಾಡೊಂದು ಬಿಡುಗಡೆ ಆಗಿದೆ.
ರಾಧಾಕೃಷ್ಣ ಪಿಕ್ಚರ್ಸ್ ಲಾಂಛನದಲ್ಲಿ ಆರ್. ಕೇಶವ(ದೇವಸಂದ್ರ) ನಿರ್ಮಿಸಿರುವ ಈ ಚಿತ್ರವನ್ನು ನವೀನ್ ರೆಡ್ಡಿ ಬಿ. ನಿರ್ದೇಶಿಸಿದ್ದಾರೆ. ಈ ಹಾಡನ್ನು ಪ್ರಸನ್ನ ಕುಮಾರ್ ಬರೆದಿದ್ದು, ಪ್ರದ್ಯೋತನ್ ಸಂಗೀತ ನೀಡಿದ್ದಾರೆ.
‘ಈ ಸಿನಿಮಾ ನನ್ನ ವೃತ್ತಿಜೀವನದಲ್ಲಿ ಒಂದು ವಿಭಿನ್ನ ಸಿನಿಮಾ. ಈ ಚಿತ್ರ ಏನಾದರೂ ಬೇರೆ ಭಾಷೆಗಳಿಗೆ ಡಬ್ ಆದರೆ ಅದರ ಶ್ರೇಯ ಮೊದಲು ಹೋಗುವುದು ಸಂಗೀತ ನಿರ್ದೇಶಕ ಪ್ರದ್ಯೋತನ್ ಅವರಿಗೆ. ಅವರ ಸಂಗೀತ ಇಡೀ ಚಿತ್ರಕ್ಕೆ ಜೀವ ತಂದಿದೆ. ಮಾಲಾಶ್ರೀ ಅವರು ಸಿನಿಮಾದಲ್ಲಿ ನಟಿಸಿದ್ದು, ಆದರೆ ಜೊತೆಗೆ ನನ್ನ ದೃಶ್ಯಗಳಿಲ್ಲ. ಸೋನಾಲ್, ಶ್ರೀನಗರ ಕಿಟ್ಟಿ, ಶ್ರುತಿ ಸೇರಿದಂತೆ ದೊಡ್ಡ ತಾರಾಬಳಗವೇ ಚಿತ್ರದಲ್ಲಿದೆ’ ಎಂದರು ವಿನೋದ್ ಪ್ರಭಾಕರ್.
‘ಈ ಚಿತ್ರವನ್ನು ನೋಡಿ ಬಂದ ಬಳಿಕ ವಿನೋದ್ ಪ್ರಭಾಕರ್ ಮತ್ತು ಶ್ರುತಿ ಅವರ ಪಾತ್ರಗಳು ಮನಸ್ಸಿನಲ್ಲಿ ಉಳಿಯಲಿದೆ. ವಿನೋದ್ ಅವರ ಪಾತ್ರ ಭಯ ಹುಟ್ಟಿಸುತ್ತದೆ. ಎಲ್ಲರಿಗೂ ಅವರ ನಟನೆ ಇಷ್ಟವಾಗುತ್ತದೆ ಎಂಬ ನಂಬಿಕೆ ಇದೆ’ ಎನ್ನುತ್ತಾರೆ ನವೀನ್.
‘ಸಿನಿಪಯಣದಲ್ಲಿ 35 ವರ್ಷಗಳಾಗಿವೆ. 130 ಚಿತ್ರಗಳಲ್ಲಿ ನಟಿಸಿದ್ದೇನೆ. ಆದರೂ ಈ ಸಿನಿಮಾದಲ್ಲಿ ನಟಿಸಿದ ತೃಪ್ತಿ ಬಹಳ ಹೆಚ್ಚು ಇದೆ. ಈ ರೀತಿಯ ಪಾತ್ರಗಳಿಗೆ ನನ್ನನ್ನು ಕಲ್ಪಿಸಿಕೊಳ್ಳುತ್ತಾರೆ ಎಂಬುವುದೇ ಸಂತೋಷ. ಕಲಾವಿದೆಯಾಗಿ ನಾನು ಗೆದ್ದೆ ಎಂದು ನನಗೆ ಅನಿಸುವುದೇ ಆ ಸಂದರ್ಭದಲ್ಲಿ. ಏಕತಾನತೆಯ ಪಾತ್ರಗಳಿದ್ದರೆ ಕಲಿಕೆ ಸಾಧ್ಯವಿಲ್ಲ. ಸವಾಲಿನ ರೀತಿಯಲ್ಲಿ ಚಿತ್ರದೊಳಗಿನ ನನ್ನ ಪಾತ್ರವನ್ನು ಸ್ವೀಕರಿಸಿದ್ದೆ. ಅವರ ನಿರೀಕ್ಷೆಗೆ ತಕ್ಕಂತೆ ನಟಿಸಿದ್ದೇನೆ ಎನ್ನುವ ವಿಶ್ವಾಸವಿದೆ’ ಎಂದರು ಶ್ರುತಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.