ನಟ ದಿಲೀಪ್ ರಾಜ್ ಈಗ ಕಿರುತೆರೆಯಲ್ಲೂ ಜನಪ್ರಿಯ. ‘ಹಿಟ್ಲರ್ ಕಲ್ಯಾಣ’ದ ಎ.ಜೆ. ಪಾತ್ರದ ಮೂಲಕ ಮೆಚ್ಚುಗೆ ಪಡೆಯುತ್ತಿದ್ದಾರೆ. ಪ್ರಸ್ತುತ ಇವರು ‘ಮಹಾನ್ ಕಲಾವಿದ’ ಚಿತ್ರದಲ್ಲಿ ನಾಯಕನಾಗಿ ನಟಿಸುತ್ತಿದ್ದಾರೆ. ಹಿರಿಯ ಪತ್ರಕರ್ತರಾದ ದಿವಂಗತ ಸುರೇಶ್ಚಂದ್ರ ಅವರ ಪುತ್ರ ಅಭಯ್ ಚಂದ್ರ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಇದು ಇವರ ಎರಡನೇ ನಿರ್ದೇಶನದ ಚಿತ್ರ. ಸಂಗೀತ ನಿರ್ದೇಶನ ಕೂಡ ಅಭಯ್ ಚಂದ್ರ ಅವರದ್ದೇ.
‘ಕಲಾವಿದನೊಬ್ಬನ ಬದುಕು ಬವಣೆಗಳನ್ನು ತೋರಿಸುವ ಕಥಾಹಂದರ ಹೊಂದಿರುವ ಚಿತ್ರವಿದು. ನಾನು ಈ ಪಾತ್ರ ಬರೆಯಬೇಕಾದರೆ ದಿಲೀಪ್ ರಾಜ್ ಈ ಪಾತ್ರಕ್ಕೆ ಸೂಕ್ತ ಎಂದುಕೊಂಡಿದ್ದೆ. ಅವರೆ ಈ ಚಿತ್ರದ ನಾಯಕರಾದರು. ಜಾಹ್ನವಿ ರಾಯಲ ಹಾಗೂ ಪಲ್ಲವಿ ರಾಜು ಸಹ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಲಾಕ್ ಡೌನ್ ಸಮಯದಲ್ಲಿ ಆನ್ಲೈನ್ನಲ್ಲಿ ಸಿಕ್ಕ ಗೆಳೆಯ ಭರತ್ ಬಿ. ಗೌಡ ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಕಿರಣ್ ಗಜ ಛಾಯಾಗ್ರಾಹಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈಗಾಗಲೇ ಎರಡು ಹಂತಗಳ ಚಿತ್ರೀಕರಣ ಮುಗಿದಿದೆ. ನಿಮ್ಮೆಲ್ಲರ ಪ್ರೋತ್ಸಾಹವಿರಲಿ’ ಎಂದು ನಿರ್ದೇಶಕ ಅಭಯ್ ಚಂದ್ರ ತಿಳಿಸಿದರು.
‘ಬಹಳ ದಿನಗಳ ನಂತರ ಮತ್ತೆ ಚಿತ್ರವೊಂದರಲ್ಲಿ ನಟಿಸುತ್ತಿದ್ದೇನೆ. ಅಭಯ್ ಚಂದ್ರ ಉತ್ತಮ ಕಥೆ ಆಯ್ಕೆ ಮಾಡಿಕೊಂಡಿದ್ದಾರೆ. ಈಗಾಗಲೇ ಎರಡು ಹಂತಗಳ ಚಿತ್ರೀಕರಣ ಮುಗಿದಿದೆ. ನಾನು ಸಹ ಈ ಚಿತ್ರವನ್ನು ನೋಡಲು ಕಾಯುತ್ತಿರುವುದಾಗಿ’ ದಿಲೀಪ್ ರಾಜ್ ಹೇಳಿದರು.
ಜಾಹ್ನವಿ ರಾಯಲ ಅವರಿಗೆ ದಿಲೀಪ್ರಾಜ್ ಅವರ ಪತ್ನಿಯ ಪಾತ್ರವಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.