ADVERTISEMENT

ಮನಸ್ಸು, ನಗು ಇದು ‘ಮನಸ್ಮಿತ’: ಹೊಸಬರೇ ಸೇರಿಕೊಂಡು ಸಿದ್ದಪಡಿಸಿರುವ ಚಿತ್ರ

​ಪ್ರಜಾವಾಣಿ ವಾರ್ತೆ
Published 18 ಮೇ 2022, 10:13 IST
Last Updated 18 ಮೇ 2022, 10:13 IST
ಪಲ್ಲವಿ ಪುರೋಹಿತ್‌, ಸಂಜನಾದಾಸ್, ಚರಣ್‌ ಗೌಡ
ಪಲ್ಲವಿ ಪುರೋಹಿತ್‌, ಸಂಜನಾದಾಸ್, ಚರಣ್‌ ಗೌಡ   

ಹೊಸಬರೇ ಸೇರಿಕೊಂಡು ಸಿದ್ದಪಡಿಸಿರುವ ಚಿತ್ರ ‘ಮನಸ್ಮಿತ’. ಅಪ್ಪಣ್ಣ ಸಂತೋಷ್ ಅವರು ಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ತಾಯಿ ಸೀತಮ್ಮ ವಿ.ಟಿ. ಹೆಸರಿನೊಂದಿಗೆ ಜಮುನ ಪ್ರೊಡಕ್ಷನ್ಸ್ ಅಡಿಯಲ್ಲಿ ಚಿತ್ರ ನಿರ್ಮಾಣವಾಗಿದೆ. ದೀಪಿಕಾ ವಿ.ಎ. ಸಹ ನಿರ್ಮಾಪಕರು.

‘ಸಂಗೀತಮಯ ರೋಮ್ಯಾಂಟಿಕ್ ಥ್ರಿಲ್ಲರ್ ವಿಭಾಗದಲ್ಲಿ ಸಂಗೀತದ ನಾನಾ ಮಜಲುಗಳು ಹಾಗೂ ಪ್ರೇಮ ಕಥೆಯನ್ನು ತೋರಿಸಲಾಗಿದೆ. ಈ ಕಥೆ ಎರಡು ಕಾಲಘಟ್ಟದಲ್ಲಿ ನಡೆಯುತ್ತದೆ. ಹುಡುಗಿಯ ಪ್ರೀತಿಯನ್ನು ಪಡೆಯಲು ಹುಡುಗ ತನ್ನನ್ನು ಹೇಗೆ ಸಮರ್ಪಿಸಿಕೊಳ್ಳುತ್ತಾನೆ. ಕುಟುಂಬದಲ್ಲಿ ಆದ ನೋವು, ಕೆಟ್ಟದಾಗಿರುವುದನ್ನು ಹೋಗಲಾಡಿಸಲು ಯಾವ ರೀತಿ ಹೋರಾಡುತ್ತಾನೆ ಎಂಬುದನ್ನು ಮನೋರಂಜನಾತ್ಮಕವಾಗಿ ತೋರಿಸಲಾಗಿದೆ’ ಎಂದಿದೆ ಚಿತ್ರತಂಡ.

‘ಕಾಲೇಜು ಹುಡುಗನಾಗಿ ಮಡಿಕೇರಿಯ ಚರಣ್‌ಗೌಡ ನಾಯಕ. ಹಲವು ಶೇಡ್ಸ್‌ಗಳಲ್ಲಿ ಕಾಣಿಸಿಕೊಳ್ಳುವ ಬೆಂಗಳೂರಿನ ಸಂಜನಾದಾಸ್ ನಾಯಕಿ. ಗಾಯಕನಾಗಿ ಬಾಲಿವುಡ್‌ನ ಅತುಲ್‌ ಕುಲಕರ್ಣಿ, ನೃತ್ಯಗಾರ್ತಿಯಾಗಿ ಪಲ್ಲವಿ ಪುರೋಹಿತ್, ಮನೆಹಾಳು ಮಾಡುವ ರಾಜೇಂದ್ರ ಕಾರಂತ್, ನಾಯಕನ ತಾಯಿಯಾಗಿ ಶಿಲ್ಪ, ಉಳಿದಂತೆ ಸುಚೇಂದ್ರ ಪ್ರಸಾದ್, ಮೂಗು ಸುರೇಶ್, ಕರಿಸುಬ್ಬು, ವೀಣಾಪೊನ್ನಪ್ಪ, ಸೌಭಾಗ್ಯ, ಪ್ರದೀಪ್‌ಶಾಸ್ತ್ರೀ, ಪ್ರದೀಪ್‌ ಪೂಜಾರಿ ನಟಿಸಿದ್ದಾರೆ.

ADVERTISEMENT

ಮುದ್ದಾದ ಬಾನುಲಿ ವರದಿ ಹಾಡನ್ನು ಕೆ.ಕಲ್ಯಾಣ್ ಬರೆದಿದ್ದು, ಅದಕ್ಕೆ ಕ್ಲಾಸಿಕಲ್ ಸಂಗೀತವನ್ನು ಒದಗಿಸಿರುವುದು ಹರಿಕಾವ್ಯ. ಇನ್ನುಳಿದಂತೆ, ಮನಮಂದಿರದಿ ಮತ್ತು ಶಂಭೋ ಶಂಕರ ಹಾಡನ್ನು ಸ್ವತಃ ಸಂಗೀತ ನಿರ್ದೇಶಕ ಹರಿಕಾವ್ಯ ಬರೆದಿದ್ದಾರೆ. ನೀಲ ಮೇಘಶ್ಯಾಮ ಕಂಡ ಹಾಡನ್ನು ಮಂಜು ಎಂ. ದೊಡ್ಡಮನಿ ಅವರು ರಚಿಸಿದ್ದಾರೆ.ಈ ಪೈಕಿ ದೇವರ ಹಾಡಿಗೆ ಶಂಕರ್‌ ಮಹದೇವನ್ ಧ್ವನಿಯಾಗಿದ್ದಾರೆ. ಛಾಯಾಗ್ರಹಣ ಕೆ.ಎಸ್.ಚಂದ್ರಶೇಖರ್, ಸಂಕಲನ ಮಧುತುಂಬಕೆರೆ, ನೃತ್ಯ ಕಲೈ, ಸಾಹಸ ಕೌರವವೆಂಕಟೇಶ್ ಚಿತ್ರಕ್ಕಿದೆ. ಬೆಂಗಳೂರು, ಮರಳವಾಡಿ, ಕೊಡಗಿನಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.