ಚಾಮರಾಜನಗರ: ಮೈಸೂರಿನಪಾತಿ ಫಿಲ್ಮನ ಎಂ.ಡಿ.ಪಾರ್ಥಸಾರಥಿ ಅವರು ನಿರ್ಮಿಸಿರುವ, ಎಂ.ಪಿ.ಭಾರತೀಶಂಕರ್ ನಿರ್ದೇಶನದ ‘ನನ್ ಹೆಸ್ರು ಕಿಶೋರ ಏಳ್ ಪಾಸ್ ಎಂಟು’ ಚಲನಚಿತ್ರ ಇದೇ 16ರಂದು ತೆರೆ ಕಾಣಲಿದೆ.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಿರ್ಮಾಪಕ ಎಂ.ಡಿ.ಪಾರ್ಥಸಾರಥಿ ಅವರು, ‘ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಚಿತ್ರ ಇದಾಗಿದ್ದು, ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಕನ್ನಡ ಅತ್ಯುತ್ತಮ ಮಕ್ಕಳ ಚಿತ್ರ ಎಂಬ ಗೌರವಕ್ಕೆ ಪಾತ್ರವಾಗಿದೆ. ಚಿತ್ರದಲ್ಲಿ ಡ್ರಗ್ಸ್ ಮಾಫಿಯಾ, ಅಜ್ಜ ಮೊಮ್ಮಗನ ಸಂಬಂಧ, ಕನ್ನಡ ಭಾಷೆಯ ಬಗ್ಗೆ ಉತ್ತಮ ಸಂದೇಶವಿದೆ’ ಎಂದರು.
ಚಿತ್ರದ ನಿರ್ದೇಶಕ ಭಾರತೀ ಶಂಕರ್ ಅವರು ಮಾತನಾಡಿ, ‘ಕಲ್ಬುರ್ಗಿಯಲ್ಲಿ ನಡೆದ ಮನಕಲುಕುವ ಘಟನೆಯನ್ನು ಆಧರಿಸಿ ಈ ಚಿತ್ರ ಮಾಡಲಾಗಿದೆ. ಚಿತ್ರವನ್ನು ಕಳೆದ ವರ್ಷವೇ ಬಿಡುಗಡೆ ಮಾಡಬೇಕಿತ್ತು. ಕೋವಿಡ್ ಲಾಕ್ಡೌನ್ನಿಂದಾಗಿ ಸಾಧ್ಯವಾಗಿರಲಿಲ್ಲ. ಚಿತ್ರ ಉತ್ತಮವಾಗಿ ಮೂಡಿಬಂದಿದೆ. ಎಲ್ಲರೂ ಚಿತ್ರವನ್ನು ನೋಡಿ ಆಶೀರ್ವದಿಸಬೇಕು ಎಂದು ಮನವಿ ಮಾಡಿದರು.
ದತ್ತಣ್ಣ, ಡ್ರಾಮಾ ಜ್ಯೂನಿಯರ್ಸ್ ಖ್ಯಾತಿಯ ಬಾಲ ನಟ ಮಹೇಂದ್ರ, ಬಾಲ ನಟಿ ಮಿಥಾಲಿ ಚಿತ್ರದ ಪ್ರಮುಖ ತಾರಾಗಣದಲ್ಲಿದ್ದಾರೆ. ಆರ್.ಕೆ.ಶಿವಕುಮಾರ್ ಅವರ ಛಾಯಾಗ್ರಹಣ, ಮಂಜು ಕವಿ ಅವರ ಸಾಹಿತ್ಯ ಸಂಗೀತ ಚಿತ್ರಕ್ಕಿದೆ. ಲೋಕೇಶ್ ಗೌಡ ಮಂಡ್ಯ ಅವರು ಸಂಭಾಷಣೆ ಬರೆದಿದ್ದಾರೆ.
ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಉಮ್ಮತ್ತೂರು ಇಂದುಶೇಖರ್ ಅವರು ಸುದ್ದಿಗೋಷ್ಠಿಯಲ್ಲಿ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿದರು.
ಪರಿಸರ ಪ್ರೇಮಿ ಸಿ.ಎಂ.ವೆಂಕಟೇಶ್, ಚಿತ್ರದ ನಾಯಕ ಮಹೇಂದ್ರ, ನಾಯಕಿ ಮಿಥಾಲಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.