ಕಾಲೇಜು ಓದುವ ಮುಗ್ಧ ಹುಡುಗನೊಬ್ಬಭೂಗತ ಲೋಕಕ್ಕೆ ಸೇರಿಕೊಂಡು ಡಾನ್ ಆಗುವ ಕಥೆ ಗಾಂಧಿನಗರಕ್ಕೆ ಹೊಸದೇನಲ್ಲ. ಆದರೆ, ಯಾರಿಗೂ ಅಂಜದೆ, ತಾನು ನಡೆದಿದ್ದೆ ದಾರಿ ಎಂದುಕೊಳ್ಳುವ ಈ ಹುಡುಗ ಏನಾಗುತ್ತಾನೆ ಎನ್ನುವುದನ್ನು ‘ಮದ್ದಾನೆ’ಯಲ್ಲಿ ತೊರಿಸಲು ಹೊರಟಿದ್ದಾರೆ ರವಿ ಶತಬಿಷ.
ಚಿತ್ರರಂಗದ ತಂತ್ರಜ್ಞರು,ಎರಡು ಮೂರು ಜವಾಬ್ದಾರಿಗಳನ್ನು ಚಿತ್ರದಲ್ಲಿ ತೆಗೆದುಕೊಂಡು ಗಮನ ಸೆಳೆಯುತ್ತಿರುವುದನ್ನು ನೋಡುತ್ತಲೇ ಇದ್ದೇವೆ. ಅಂತಹವರ ಸಾಲಿಗೆ ರವಿ ಶತಬಿಷ ಸೇರಿದ್ದಾರೆ. ‘ಮದ್ದಾನೆ’ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ, ಸಂಕಲನ, ನಿರ್ದೇಶನ ಸೇರಿದಂತೆ ಏಳು ವಿಭಾಗಗಳಲ್ಲಿ ತಮ್ಮ ಕೈಚಳಕ ತೋರಿಸಲು ಹೊರಟಿದ್ದಾರೆ.
‘ಹೀರೋ ಈಸ್ ನಾಟ್ ಎ ರೌಡಿ’ ಎಂದು ಉಪ ಶೀರ್ಷಿಕೆ ಇರುವ ‘ಮದ್ದಾನೆ’ ಸೆಟ್ಟೇರಿದ್ದು, ಇತ್ತೀಚೆಗೆ ಮುಹೂರ್ತ ನಡೆದಿದೆ.
ಬೆಂಗಳೂರು, ಮೈಸೂರು,ಪಾಂಡವಪುರ, ಹಾಸನ,ಮಂಗಳೂರು ಕಡೆಗಳಲ್ಲಿ 40 ದಿನ ಚಿತ್ರೀಕರಣ ನಡೆಸಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ.
ಭೂ ವಿಜ್ಞಾನದಲ್ಲಿ ಪಿಎಚ್.ಡಿ ಪಡೆದಿರುವ ಆರ್ಯ ಚಿತ್ರದನಾಯಕನಾಗಿದ್ದು, ಬಿ.ಇ ವ್ಯಾಸಂಗ ಮಾಡುತ್ತಿರುವ ಬೆಂಗಳೂರಿನ ಹೇಮಿಷಾ ನಾಯಕಿಯಾಗಿದ್ದಾರೆ.ಇಬ್ಬರಿಗೂ ನಟನೆ ಹೊಸ ಅನುಭವ.
ಲತಾ ಮೂರ್ತಿ ಚಿತ್ರಕ್ಕೆಹಣ ಹೂಡುವ ಜೊತೆಗೆ ಚಿಕ್ಕ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ನದಿ ಸಹ ನಿರ್ಮಾಪಕಿಯಾಗಿದ್ದಾರೆ.ತಾರಾಗಣದಲ್ಲಿ ಅಲಂಕಾರ್ ಚಂದ್ರು, ರಾಘವೇಂದ್ರ ಮೋಕ್ಷಗುಂಡಂ ಇದ್ದಾರೆ. ಛಾಯಾಗ್ರಹಣ ಮಂಜುನಾಥ ಹೆಗಡೆ ಅವರದ್ದು.ಶಿವಕುಮಾರ್ ಸಾಹಿತ್ಯವಿರುವ ಹಾಡುಗಳಿಗೆ ಕಾರ್ತಿಕ್ ವೆಂಕಟೇಶ್ ಸಂಗೀತ ಸಂಯೋಜಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.