ಕಿರುಚಿತ್ರಗಳನ್ನು ನಿರ್ಮಾಣ ಮಾಡುತ್ತಿದ್ದ ಯತೀಶ್ ಪನ್ನಸಮುದ್ರ ಎಂಬುವವರು ಸಿನಿಮಾವೊಂದರ ನಿರ್ದೇಶನಕ್ಕೆ ಕೈಹಾಕಿದ್ದಾರೆ. ಅದೇ ‘ಒಂಟಿ ಬಂಟಿ ಲವ್ಸ್ಟೋರಿ’. ನಿರ್ದೇಶನದ ಜೊತೆಗೆ ನಾಯಕನಾಗಿಯೂ ಅವರು ನಟಿಸಿದ್ದಾರೆ.
‘ಸಿನಿಮಾದಲ್ಲಿ ನಟನೆಯ ಕನಸನ್ನು ಕಾಲೇಜು ದಿನಗಳಿಂದ ಹೊಂದಿದ್ದೆ. ಚಿತ್ರ ಅಂದುಕೊಂಡಂತೆ ಬಂದಿದೆ. ಪ್ರೇಕ್ಷಕರನ್ನು ಸೆಳೆಯುವ ಎಲ್ಲ ಅಂಶಗಳೂ ಸಿನಿಮಾದಲ್ಲಿದೆ. ಯುವ ಪ್ರೇಕ್ಷಕರನ್ನು ದೃಷ್ಟಿಯಲ್ಲಿಟ್ಟುಕೊಂಡು ಚಿತ್ರ ನಿರ್ಮಿಸಿದ್ದೇನೆ’ ಎನ್ನುತ್ತಾರೆ ಯತೀಶ್.
ಹಾಸನ ಜಿಲ್ಲೆ ಅರಸೀಕೆರೆಯ ಯತೀಶ್, ಎಂಜಿನಿಯರ್ ಪದವೀಧರ. ಸಾಫ್ಟ್ವೇರ್ ಕಂಪನಿಯಲ್ಲಿ ದುಡಿದು ಇದೀಗ ಬೆಳ್ಳಿತೆರೆಗೆ ಬರುತ್ತಿದ್ದಾರೆ. ಜೀವನದಲ್ಲಿ ಯಾವುದು ಮುಖ್ಯ ಎಂದು ತಿಳಿಯದೆ ಪರದಾಡುವ ಯುವಜನರ ಮಾನಸಿಕ ತೊಳಲಾಟವನ್ನೇ ಕಥೆಯಾಗಿಟ್ಟುಕೊಂಡು ಯತೀಶ್ ಈ ಕಥೆ ಹೆಣೆದಿದ್ದಾರೆ. ಓದೋ ಕಾಲದಲ್ಲಿ ಲವ್, ಲವ್ ಮಾಡೋ ಕಾಲದಲ್ಲಿ ಉದ್ಯೋಗ, ಉದ್ಯೋಗ ಮಾಡುವಾಗ ಹಣ ಮುಖ್ಯವೋ, ಹೆಸರು ಮುಖ್ಯವೋ ಎಂಬ ತೊಳಲಾಟ– ಇದೇ ಕಥಾಹಂದರ. ಇದು ರೊಮ್ಯಾಂಟಿಕ್ ಕಾಮಿಡಿ ಜಾನರ್ನ ಸಿನಿಮಾ ಎಂದಿದೆ ಚಿತ್ರತಂಡ. ಚಿತ್ರದಲ್ಲಿ ಶ್ವೇತಾ ಭಟ್ ಮತ್ತು ಶ್ರುತಿ ಚಂದ್ರಶೇಖರ್ ನಾಯಕಿಯಾಗಿದ್ದಾರೆ. ಚಿತ್ರದಲ್ಲಿ ಎರಡು ಹಾಡುಗಳನ್ನು ಪ್ರಮೋದ್ ಮರವಂತೆ ಬರೆದಿದ್ದಾರೆ. ಶೀಘ್ರದಲ್ಲೇ ಸಿನಿಮಾ ಬಿಡುಗಡೆಯಾಗಲಿದೆ ಎನ್ನುವುದು ತಂಡದ ಮಾಹಿತಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.