ADVERTISEMENT

ತಮಿಳಿಗೆ ಹೊರಟ ಕಿರಿಕ್‌ ಸುಂದರಿ

ದಳಪತಿ ವಿಜಯ್‌ ಹೊಸ ಚಿತ್ರಕ್ಕೆ ರಶ್ಮಿಕಾ ಹೀರೊಯಿನ್?

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2020, 8:36 IST
Last Updated 3 ಮಾರ್ಚ್ 2020, 8:36 IST
ರಶ್ಮಿಕಾ ಮಂದಣ್ಣ
ರಶ್ಮಿಕಾ ಮಂದಣ್ಣ   

‘ಬಾಲ್ಯದಲ್ಲಿ ನನಗೆ ತಮಿಳಿನ ನಟ ವಿಜಯ್‌ ಮೇಲೆ ಕ್ರಷ್‌ ಆಗಿತ್ತು’

–ಮೂರ್ನಾಲ್ಕು ವಾರಗಳ ಹಿಂದೆ ಹೈದರಾಬಾದ್‌ನಲ್ಲಿ ನಡೆದ ‘ಭೀಷ್ಮ’ ಚಿತ್ರದ ಸುದ್ದಿಗೋಷ್ಠಿಯಲ್ಲಿ ನಟಿ ರಶ್ಮಿಕಾ ಮಂದಣ್ಣ ಹೇಳಿದ್ದ ಮಾತಿದು. ಆಕೆ ತಡವರಿಸಿ ಉತ್ತರಿಸುವಷ್ಟರಲ್ಲೇ, ‘ಭವಿಷ್ಯದಲ್ಲಿ ನಿಮಗೆ ಯಾವ ನಟನೊಟ್ಟಿಗೆ ಕೆಲಸ ಮಾಡುವ ಆಸೆಯಿದೆ’ ಎನ್ನುವ ಪ್ರಶ್ನೆಯೂ ಪತ್ರಕರ್ತರಿಂದ ತೂರಿಬಂದಿತ್ತು.

‘ವಿಜಯ್‌ ಜೊತೆಗೆ ನಟಿಸಲು ನನಗಿಷ್ಟ’ ಎಂದು ಅಷ್ಟೇ ಜಾಣ್ಮೆಯಿಂದ ಉತ್ತರಿಸಿದ್ದರು ರಶ್ಮಿಕಾ. ಅವರ ಮನದಾಸೆ ಈಡೇರುವ ಕಾಲ ಸನ್ನಿಹಿತವಾಗಿದೆ. ಬ್ಯಾಕ್‌ ಟು ಬ್ಯಾಕ್‌ ಸೂಪರ್‌ ಹಿಟ್‌ ಚಿತ್ರಗಳಲ್ಲಿ ನಟಿಸಿರುವ ಆಕೆಗೆ ಕಾಲಿವುಡ್‌ ದಳಪತಿ ಜೊತೆಗೆ ನಟಿಸುವ ವೇದಿಕೆ ಸಜ್ಜಾಗಿದೆ. ಸುಧಾ ಕೊಂಗಾರ ಅವರು ವಿಜಯ್‌ ನಟನೆಯ 65ನೇ ಚಿತ್ರಕ್ಕೆ ಆ್ಯಕ್ಷನ್‌ ಕಟ್‌ ಹೇಳುತ್ತಿದ್ದು, ಅದಕ್ಕೆ ರಶ್ಮಿಕಾ ಅವರೇ ಹೀರೊಯಿನ್‌ ಎಂಬ ಸುದ್ದಿ ಕಾಲಿವುಡ್‌ ಅಂಗಳದಲ್ಲಿ ಹರಿದಾಡುತ್ತಿದೆ.

ADVERTISEMENT

ಪ್ರಸ್ತುತ ಸುಧಾ ಅವರು ಸೂರ್ಯ ನಟನೆಯ ‘ಸೂರರೈ ಪೊಟ್ರು’ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಇದು ಮುಗಿದ ಬಳಿಕ ಸೆಟ್ಟೇರಲಿರುವ ವಿಜಯ್‌ ಅವರ ಹೊಸ ಚಿತ್ರಕ್ಕೆ ರಶ್ಮಿಕಾ ಅವರನ್ನು ನಾಯಕಿಯಾಗಿ ಆಯ್ಕೆ ಮಾಡಲು ನಿರ್ಧರಿಸಿದ್ದಾರಂತೆ. ಅಂದಹಾಗೆ ಇದರಲ್ಲಿ ಮತ್ತೊಬ್ಬ ಕನ್ನಡತಿ ಪೂಜಾ ಹೆಗ್ಡೆ ನಟಿಸಲಿದ್ದಾರೆ ಎಂಬ ಸುದ್ದಿಯೂ ಈ ಹಿಂದೆ ಹರಿದಾಡಿತ್ತು. ಆದರೆ, ಈ ರೇಸ್‌ನಲ್ಲಿ ‘ಕಿರಿಕ್‌ ಪಾರ್ಟಿ’ಯ ಸುಂದರಿಗೆ ಅದೃಷ್ಟ ಒಲಿದು ಬಂದಿದೆ.

ರಶ್ಮಿಕಾ ‘ಸರಿಲೇರು ನೀಕೆವ್ವರು’ ಮತ್ತು ‘ಭೀಷ್ಮ’ ಚಿತ್ರದ ಗೆಲುವಿನಲ್ಲಿ ಮೀಯುತ್ತಿದ್ದಾರೆ. ಈ ನಡುವೆಯೇ ಕನ್ನಡದಲ್ಲಿ ನಂದಕಿಶೋರ್‌ ನಿರ್ದೇಶನದ ‘ಪೊಗರು’ ಚಿತ್ರಕ್ಕೂ ಅವರೇ ನಾಯಕಿ. ಬಕ್ಕಿಯರಾಜ್‌ ಕಣ್ಣನ್‌ ನಿರ್ದೇಶನದ ತಮಿಳಿನ ‘ಸುಲ್ತಾನ್‌’ ಚಿತ್ರದಲ್ಲೂ ಅವರು ನಟಿಸುತ್ತಿದ್ದಾರೆ.

ಅಲ್ಲದೇ, ಸುಕುಮಾರ್‌ ನಿರ್ದೇಶನದ ಅಲ್ಲು ಅರ್ಜುನ್‌ ನಾಯಕರಾಗಿರುವ ತೆಲುಗಿನ ಹೊಸ ಚಿತ್ರಕ್ಕೂ ರಶ್ಮಿಕಾ ಅವರೇ ಹೀರೊಯಿನ್. ‘ರಂಗಸ್ಥಳಂ’ ಬಳಿಕ ಅವರು ಯಾವುದೇ ಚಿತ್ರ ನಿರ್ದೇಶಿಸಿಲ್ಲ. ಹಾಗಾಗಿ, ಈ ಸಿನಿಮಾದ ಮೇಲೆ ನಿರೀಕ್ಷೆಗಳು ಗರಿಗೆದರಿವೆ. ಇತ್ತೀಚೆಗೆ ಸುಕುಮಾರ್‌ ಅವರು ರಶ್ಮಿಕಾ ಅವರ ಟೆಸ್ಟ್ ಶೂಟ್‌ ನಡೆಸಿದ್ದಾರಂತೆ. ಆಂಧ್ರಪ್ರದೇಶದ ಚಿತ್ತೂರು ಅರಣ್ಯದಲ್ಲಿ ರಕ್ತಚಂದನದ ಕಳ್ಳಸಾಗಾಣಿಕೆ ಅವ್ಯಾಹತವಾಗಿದೆ. ಇದರ ಸುತ್ತವೇ ಈ ಚಿತ್ರದ ಕಥೆ ಹೆಣೆಯಲಾಗಿದೆಯಂತೆ. ಇದರಲ್ಲಿ ಚಿತ್ತೂರು ಹುಡುಗಿಯಾಗಿ ರಶ್ಮಿಕಾ ಕಾಣಿಸಿಕೊಳ್ಳಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.