ನಿರ್ದೇಶಕ ತರುಣ್ ಸುಧೀರ್ ಮತ್ತು ನಟ ದರ್ಶನ್ ಕಾಂಬಿನೇಷನ್ನಡಿ ನಿರ್ಮಾಣಗೊಂಡಿರುವ ‘ರಾಬರ್ಟ್’ ಚಿತ್ರ ಚಂದನವನದಲ್ಲಿ ಕುತೂಹಲ ಹೆಚ್ಚಿಸಿರುವುದು ದಿಟ. ಆ್ಯಕ್ಷನ್, ಥ್ರಿಲ್ಲರ್ ಚಿತ್ರ ಇದು. ಇದಕ್ಕೆ ಉಮಾಪತಿ ಶ್ರೀನಿವಾಸ್ ಗೌಡ ಬಂಡವಾಳ ಹೂಡಿದ್ದಾರೆ. ಅಂದಹಾಗೆ ದಚ್ಚುಗೆ ಕನ್ನಡತಿ ಆಶಾ ಭಟ್ ಹೀರೊಯಿನ್ ಆಗಿ ನಟಿಸಿದ್ದಾರೆ.
ಕಳೆದ ಏಪ್ರಿಲ್ 9ರಂದೇ ಈ ಸಿನಿಮಾದ ಬಿಡುಗಡೆಗೆ ದಿನಾಂಕ ನಿಗದಿಯಾಗಿತ್ತು. ಚಿತ್ರತಂಡ ಕೂಡ ಬಾಕಿ ಉಳಿಸಿಕೊಂಡಿದ್ದ ಒಂದು ಹಾಡನ್ನು ಕಛ್ನಲ್ಲಿ ಚಿತ್ರೀಕರಿಸಿ ಬಿಡುಗಡೆಗೆ ಸಿದ್ಧತೆ ನಡೆಸಿತ್ತು. ಕೊರೊನಾ ಸೋಂಕಿನ ಪರಿಣಾಮ ಬಿಡುಗಡೆಯ ದಿನಾಂಕ ಮುಂದಕ್ಕೆ ಹೋಗಿದೆ. ದರ್ಶನ್ ಇಲ್ಲಿಯವರೆಗೂ ಇಂತಹ ಜಾನರ್ನಲ್ಲಿ ಕಾಣಿಸಿಕೊಂಡಿಲ್ಲವಂತೆ. ಅವರ ಇಮೇಜ್ನಲ್ಲಿಯೇ ಚಿತ್ರಕಥೆ ಹೆಣೆಯಲಾಗಿದೆ ಎಂಬುದು ನಿರ್ದೇಶಕರ ಅಂಬೋಣ.
ಈಗಾಗಲೇ, ಆನಂದ್ ಆಡಿಯೊದಲ್ಲಿ ಎರಡು ಹಾಡುಗಳು ಬಿಡುಗಡೆಯಾಗಿದ್ದು, ಜನರಿಂದಲೂ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಚಿತ್ರತಂಡವು ಹಂತ ಹಂತವಾಗಿ ಟೀಸರ್, ಹಾಡುಗಳು ಮತ್ತು ಪೋಸ್ಟರ್ಗಳನ್ನು ಬಿಡುಗಡೆಗೊಳಿಸಿದೆ. ಜುಲೈ 27ರಂದು ಚಿತ್ರದ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಅವರ ಹುಟ್ಟುಹಬ್ಬ. ಅಂದು ಬೆಳಿಗ್ಗೆ 10ಗಂಟೆಗೆ ಹೊಸ ಪೋಸ್ಟರ್ ಅನ್ನು ಬಿಡುಗಡೆ ಮಾಡಲಾಗುವುದು ಎಂದು ಚಿತ್ರತಂಡ ತಿಳಿಸಿದೆ.
ಚಿತ್ರಕ್ಕೆ ಸುಧಾಕರ್ ಎಸ್. ರಾಜು ಅವರ ಛಾಯಾಗ್ರಹಣವಿದೆ. ಅರ್ಜುನ್ ಜನ್ಯ ಸಂಗೀತ ಸಂಯೋಜಿಸಿದ್ದಾರೆ. ಕೆ.ಎಂ. ಪ್ರಕಾಶ್ ಸಂಕಲನ ನಿರ್ವಹಿಸಿದ್ದಾರೆ. ಟಾಲಿವುಡ್ನ ಖಳನಟ ಜಗಪತಿ ಬಾಬು ಖಳನಟನಾಗಿ ನಟಿಸಿರುವುದು ಈ ಚಿತ್ರದ ವಿಶೇಷ. ವಿನೋದ್ ಪ್ರಭಾಕರ್, ಸೋನಾಲ್ ಮಾಂತೆರೊ, ಶಿವರಾಜ್ ಕೆ.ಆರ್. ಪೇಟೆ, ರವಿಕಿಶನ್, ಚಿಕ್ಕಣ್ಣ, ರವಿಶಂಕರ್ ತಾರಾಗಣದಲ್ಲಿದ್ದಾರೆ.
https://twitter.com/UmapathyFilms
https://twitter.com/TharunSudhir
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.