ವಿಜಯ ಕುಮಾರ್(ದುನಿಯಾ ವಿಜಯ್) ‘ಭೀಮ’ ಸಿನಿಮಾ ರಿಲೀಸ್ಗೆ ಎದುರು ನೋಡುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಅವರ ಹೊಸ ಸಿನಿಮಾದ ಪೋಸ್ಟರ್ ಬಿಡುಗಡೆಯಾಗಿದೆ. ‘ಕಾಟೇರ’ ಕಥೆಗಾರ ಜಡೇಶ್ ಕೆ.ಹಂಪಿ ಸ್ಯಾಂಡಲ್ವುಡ್ ‘ಸಲಗ’ನಿಗೆ ಆ್ಯಕ್ಷನ್, ಕಟ್ ಹೇಳಲಿದ್ದಾರೆ.
ಪ್ರಜ್ವಲ್ ದೇವರಾಜ್ ನಟನೆಯ ‘ಜಂಟಲ್ಮ್ಯಾನ್’ ಸಿನಿಮಾದಿಂದ ಚಂದನವನದಲ್ಲಿ ಜಡೇಶ್ ಖ್ಯಾತಿ ಪಡೆದಿದ್ದರು. ಇದಾದ ಬಳಿಕ ಶರಣ್ ನಟನೆಯ ‘ಗುರು ಶಿಷ್ಯರು’ ಸಿನಿಮಾ ಮೂಲಕ ತಮ್ಮ ನಿರ್ದೇಶನದ ಸಾಮರ್ಥ್ಯವನ್ನು ಅವರು ಸಾಬೀತುಪಡಿಸಿದ್ದರು. ಇತ್ತೀಚೆಗೆ ತೆರೆಕಂಡ ‘ಕಾಟೇರ’ ಸಿನಿಮಾದ ಕಥೆಗಾರ ಜಡೇಶ್, ನೈಜ ಘಟನೆಗಳನ್ನು ಆಧರಿಸಿದ ಮತ್ತೊಂದು ಕಥೆ ಹೆಣೆದಿದ್ದಾರೆ. ವಿಜಯ್ ಅವರ 29ನೇ ಸಿನಿಮಾ ಇದಾಗಿರುವ ಕಾರಣ, ಸದ್ಯಕ್ಕೆ ಚಿತ್ರಕ್ಕೆ ‘VK29’ ಎಂಬ ಶೀರ್ಷಿಕೆ ಇಡಾಗಿದ್ದು, ‘ಇದು ಆಳಿದವರ ಕಥೆಯಲ್ಲ, ಅಳಿದು ಉಳಿದವರ ಕಥೆ..!’ ಎನ್ನುವ ಅಡಿಬರಹ ನೀಡಲಾಗಿದೆ. ‘ಕಾಟೇರ’ ಸಿನಿಮಾಗೂ ಇದೇ ರೀತಿ ‘ಹಿಂದಿರೋವ್ರಿಗೆ ದಾರಿ, ಮುಂದಿರೋವ್ನದ್ದು ಜವಾಬ್ದಾರಿ’ ಎಂಬ ಪಂಚಿಂಗ್ ಅಡಿಬರಹವನ್ನು ನೀಡಲಾಗಿತ್ತು.
‘VK29’ನಲ್ಲಿ ವಿಜಯ್ ಅವರ ಹಿರಿಯ ಮಗಳು ಮೋನಿಕಾ ತಂದೆಯ ಜೊತೆಗೆ ಮಗಳ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದಿದೆ ಚಿತ್ರತಂಡ. ‘ಭೀಮ’ ಸಿನಿಮಾಗೆ ಬಂಡವಾಳ ಹೂಡಿರುವ ಜಗದೀಶ್ ಗೌಡ ‘VK29’ ಸಿನಿಮಾ ನಿರ್ಮಾಣ ಮಾಡಲಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.