ಅಭಿಷೇಕ್ ಅಂಬರೀಷ್ ನಾಯಕ ನಟನೆಯ ‘ಕಾಳಿ’ ಚಿತ್ರ ಸೆಟ್ಟೇರಿದೆ. ಈ ಚಿತ್ರಕ್ಕೆ ಕಾಂತಾರದ ಲೀಲಾ ಖ್ಯಾತಿಯ ಸಪ್ತಮಿ ಗೌಡ ನಾಯಕಿ.
ಚಿತ್ರದಲ್ಲೇನಿದೆ?
1990ರ ದಶಕದ ಕಾವೇರಿ ಗಲಭೆಯ ಹಿನ್ನೆಲೆಯಲ್ಲಿ ನಡೆಯುವ ಕಥೆಯಿದು. ನಾಯಕಿ ‘ಕಾಳಿ’ ತಮಿಳುನಾಡಿನ ಹುಡುಗಿ. ಗಲಾಟೆ ಮುಖ್ಯ ಕಥೆ ಅಲ್ಲ. ಅದರ ಹಿನ್ನೆಲೆಯಲ್ಲಿ ನಾಯಕ– ನಾಯಕಿ ಮಧ್ಯೆ ಪ್ರೇಮಾಂಕುರವಾಗುವುದೇ ಒಂದು ಸಾಲಿನ ಸಾರಾಂಶ. ಎಸ್. ಕೃಷ್ಣ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಬೆಂಗಳೂರಿನ ಬಂಡೆ ಮಹಾಕಾಳಿ ದೇವಸ್ಥಾನದಲ್ಲಿ ಮುಹೂರ್ತ ನಡೆದಿದೆ. ಕೃಷ್ಣ ಅವರ ಪತ್ನಿ ಸ್ವಪ್ನಾ ಕೃಷ್ಣ ಅವರು ಆರ್ಆರ್ಆರ್ ಮೋಷನ್ ಪಿಕ್ಚರ್ಸ್ ಬ್ಯಾನರ್ ಅಡಿ ನಿರ್ಮಿಸುತ್ತಿದ್ದಾರೆ. ಇದು ಈ ಸಂಸ್ಥೆಯ ಮೂರನೇ ಚಿತ್ರ. ಈ ಸಂಸ್ಥೆ ಝೀ ಕನ್ನಡಕ್ಕಾಗಿ ಹಲವು ಧಾರಾವಾಹಿಗಳನ್ನು ನಿರ್ಮಿಸಿದೆ.
ನಿರ್ದೇಶಕ ಕೃಷ್ಣ 25ಕ್ಕೂ ಹೆಚ್ಚು ಚಿತ್ರಗಳಿಗೆ ಛಾಯಾಗ್ರಾಹಕರಾಗಿ ಕೆಲಸ ಮಾಡಿದ್ದಾರೆ. ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಹಲವು ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ‘ಮುಂಗಾರು ಮಳೆ’ ಚಿತ್ರಕ್ಕಾಗಿ ರಾಜ್ಯ ಸರ್ಕಾರದಿಂದ ಅತ್ಯುತ್ತಮ ಛಾಯಾಗ್ರಾಹಕ ಪ್ರಶಸ್ತಿ ಪುರಸ್ಕೃತರು. 2014ರಲ್ಲಿ ಯಶ್ ಅಭಿನಯದ ಯಶಸ್ವಿ ಚಿತ್ರ ‘ಗಜಕೇಸರಿ’ ಮೂಲಕ ನಿರ್ದೇಶಕರಾದರು. ಆ ನಂತರ ಸುದೀಪ್ ಅಭಿನಯದಲ್ಲಿ ‘ಹೆಬ್ಬುಲಿ’ ಮತ್ತು ‘ಪೈಲ್ವಾನ್’ ಚಿತ್ರಗಳನ್ನು ನಿರ್ದೇಶಿಸಿದವರು. ಕಾಳಿ ಅವರ ನಿರ್ದೇಶನದ ನಾಲ್ಕನೇ ಚಿತ್ರ. ಚಿತ್ರಕ್ಕೆ ಕರುಣಾಕರ್ ಅವರ ಛಾಯಾಗ್ರಹಣವಿದೆ. ಚರಣ್ ರಾಜ್ ಈ ಚಿತ್ರದ ಸಂಗೀತ ನಿರ್ದೇಶಕರು. ಮುಂದಿನ ಜನವರಿಯಿಂದ ಚಿತ್ರೀಕರಣ ಆರಂಭವಾಗಲಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.