ಹ್ಯಾಟ್ರಿಕ್ ಹೀರೊ ಶಿವರಾಜ್ಕುಮಾರ್ ಅಯ್ಯಪ್ಪಸ್ವಾಮಿ ಮಾಲೆ ಧರಿಸಿ ಶಬರಿಮಲೆ ಯಾತ್ರೆ ಹೊರಡಲು ಸಜ್ಜಾಗಿದ್ದಾರೆ.
ಬೆಂಗಳೂರಿನ ಅಯ್ಯಪ್ಪಸ್ವಾಮಿ ದೇಗುಲದಲ್ಲಿ ಶನಿವಾರ ಬೆಳಿಗ್ಗೆ ಸ್ನೇಹಿತರೊಟ್ಟಿಗೆ ಶಿವಣ್ಣ ವಿಶೇಷ ಪೂಜೆ ಸಲ್ಲಿಸಿ, ಮಾಲೆ ಧರಿಸಿದರು. ಈ ಸಂದರ್ಭದಲ್ಲಿ ಅವರ ಜತೆಗೆ ಪತ್ನಿ ಗೀತಾ ಇದ್ದರು.
ಹಲವು ವರ್ಷಗಳಿಂದ ಶಿವಣ್ಣ ಶಬರಿಮಲೆ ಯಾತ್ರೆ ನಡೆಸಿಕೊಂಡು ಬಂದಿದ್ದು, ತಮ್ಮ ತಾಯಿ ಪಾರ್ವತಮ್ಮ ರಾಜ್ಕುಮಾರ್ ನಿಧನದ ನಂತರ ಯಾತ್ರೆಯನ್ನು ಕೈಗೊಂಡಿರಲಿಲ್ಲ.
ಚಿತ್ರರಂಗದಲ್ಲಿನ ತಮ್ಮ ಸ್ನೇಹಿತರೊಡಗೂಡಿ ಮಾಲೆಧಾರಣೆ ಮಾಡಿರುವ ಶಿವಣ್ಣ ಈಗ ವ್ರತಾಚರಣೆಯಲ್ಲಿದ್ದು, ಮಾರ್ಚ್ 14ರಂದು ಶಬರಿಮಲೆಗೆ ಯಾತ್ರೆ ಕೈಗೊಳ್ಳಲಿದ್ದಾರೆ. ನಿರ್ದೇಶಕ ರಘುರಾಂ ಸಹ ಅಯ್ಯಪ್ಪಸ್ವಾಮಿ ಮಾಲೆ ಧರಿಸಿದ್ದು, ಶಿವಣ್ಣಗೆ ಸಾಥ್ ನೀಡಿದ್ದಾರೆ.
ಡಾ. ರಾಜ್ಕುಮಾರ್ ಕುಟುಂಬದವರು ಅಯ್ಯಪ್ಪ ಸ್ವಾಮಿಯ ಭಕ್ತರಾಗಿದ್ದು,ಡಾ. ರಾಜ್ ಪ್ರತಿ ವರ್ಷವೂ ಮಾಲೆಧರಿಸಿ ಶಬರಿಮಲೆಗೆ ಹೋಗಿಬರುತ್ತಿದ್ದರು. ಈ ಹಿಂದಿನಿಂದಲೂ ಶಿವರಾಜ್ಕುಮಾರ್, ರಾಘವೇಂದ್ರ ರಾಜ್ಕುಮಾರ್, ಪುನೀತ್ ರಾಜ್ಕುಮಾರ್ ಸೇರಿದಂತೆ ಕುಟುಂಬದ ಸದಸ್ಯರು ಶಬರಿಮಲೆ ಯಾತ್ರೆ ನಡೆಸಿಕೊಂಡು ಬಂದಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.