ಮರಾಠಿ ನಟಿ ‘ಸೈರಾಟ್’ ರಿಂಕು ರಾಜ್ಗುರು ಪ್ಲಸ್ ಟು ಪರೀಕ್ಷೆಯನ್ನೂ ಪೊಲೀಸ್ ಭದ್ರತೆಯಲ್ಲೇ ಬರೆದಿದ್ದಾರೆ! ತಮ್ಮ ಸೆಲೆಬ್ರಿಟಿ ವಿದ್ಯಾರ್ಥಿನಿ ಸುರಕ್ಷಿತವಾಗಿ ಪರೀಕ್ಷೆ ಬರೆಯಲು ಬಂದು ಹೋಗಲಿ ಎಂಬ ದೃಷ್ಟಿಯಿಂದ ಆಕೆಯ ಕಾಲೇಜು ಆಡಳಿತ ಮಂಡಳಿಯೇ ಪೊಲೀಸ್ ಭದ್ರತೆ ಒದಗಿಸಿಕೊಟ್ಟಿದೆಯಂತೆ.
ಪ್ರಾಥಮಿಕ ಶಾಲಾ ಶಿಕ್ಷಕರಾಗಿರುವ ಆಕೆಯ ತಂದೆ ಮಹಾದೇವ್ ಬಾಪು ರಾಜ್ಗುರು ಅವರಿಗೂ ಇದು ಸಮಾಧಾನ ತಂದಿದೆಯಂತೆ. ‘ಪರೀಕ್ಷೆ ಎಂದರೆ ಆತಂಕ ಇದ್ದೇ ಇರುತ್ತದೆ. ಅಂತಹ ಸಂದರ್ಭದಲ್ಲಿ ಅಭಿಮಾನಿಗಳು ಸೆಲ್ಫಿ, ಆಟೊಗ್ರಾಫ್ ಎಂದು ಮಗಳನ್ನು ಪೀಡಿಸುವುದಕ್ಕಿಂತ ಪೊಲೀಸ್ ಭದ್ರತೆಯಲ್ಲಿ ಬಂದು ಹೋಗುವುದೇ ಸರಿ’ ಎಂದು, ಹೇಳಿದ್ದಾರೆ.
ಚಿತ್ರೀಕರಣ ಮತ್ತು ಕಾರ್ಯಕ್ರಮಗಳಲ್ಲಿ ಬ್ಯುಸಿಯಾಗಿರುವ ರಿಂಕು ಬಾಹ್ಯ ವಿದ್ಯಾರ್ಥಿನಿಯಾಗಿ ಪರೀಕ್ಷೆ ಬರೆಯುತ್ತಿದ್ದಾರೆ. ಕೆಲವು ತಿಂಗಳಿಂದೀಚೆ ಆಕೆ ದಿನಾ ಆರು ಗಂಟೆ ಅಭ್ಯಾಸ ಮಾಡುತ್ತಿದ್ದಾರಂತೆ.
ಅಲ್ಲದೆ, ಪರೀಕ್ಷೆಯ ವೇಳೆ ಯಾವುದೇ ಕಾರ್ಯಕ್ರಮಗಳಲ್ಲಿ ಅವರು ಪಾಲ್ಗೊಳ್ಳುತ್ತಿಲ್ಲ.
ರಿಂಕು ಅಭಿನಯಿಸಿರುವ ‘ಕಾಗರ್’ ಚಿತ್ರ ಪೂರ್ಣಗೊಂಡಿದ್ದು, ಪ್ರೇಮಿಗಳ ದಿನದಂದು ಬಿಡುಗಡೆಯಾಗಬೇಕಿತ್ತು. ಆದರೆ ದ್ವಿತೀಯ ಪಿಯುಸಿ ಪರೀಕ್ಷೆ ಮುಗಿದ ಬಳಿಕವೇ ಚಿತ್ರ ಬಿಡುಗಡೆ ಮಾಡಲು ಚಿತ್ರತಂಡ ತೀರ್ಮಾನಿಸಿದೆ.
ರಿಂಕು, 2017ರಲ್ಲಿ ಎಸ್.ನಾರಾಯಣ್ ನಿರ್ದೇಶನದ ‘ಮನಸು ಮಲ್ಲಿಗೆ’ ಕನ್ನಡ ಚಿತ್ರದಲ್ಲೂ ನಟಿಸಿದ್ದರು. ಇದು ‘ಸೈರಾಟ್’ನ ರಿಮೇಕ್ ಚಿತ್ರ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.