‘ಡೇರ್ಡೆವಿಲ್ ಮುಸ್ತಫಾ’ ಚಿತ್ರತಂಡ ದಸರಾ ಹಬ್ಬದ ಅಂಗವಾಗಿ 'ನಿನ್ನಂಥೋರ್ ಯಾರೂ ಇಲ್ವಲ್ಲೋ ಲೋಕದಾ ಮ್ಯಾಲೆ' ಎಂಬ ಹಾಡನ್ನು ಬಿಡುಗಡೆ ಮಾಡಿದ್ದು ಈ ಹಾಡಿಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಹಾಡುಗಳು ಹಾಗೂ ಪೋಸ್ಟರ್ಗಳ ಮೂಲಕ ಈ ಸಿನಿಮಾ ಗಮನ ಸೆಳೆಯುತ್ತಿದೆ.'ನಿನ್ನಂಥೋರ್ ಯಾರೂ ಇಲ್ವಲ್ಲೋ ಲೋಕದಾ ಮ್ಯಾಲೆ' ಹಾಡನ್ನು ಅನಿಮೇಶನ್ ಮೂಲಕ ಚಿತ್ರಿಸಲಾಗಿದೆ. ’ಮೈಸೂರು ದೊರೆಯೆ ರಣಧೀರ ನಾಯ್ಕನೆ' ಎಂದು ಆರಂಭವಾಗುವ ಈ ಹಾಡು ರಂಗಗೀತೆಶೈಲಿಯಲ್ಲಿದೆ. ಡಾ.ರಾಜ್ಕುಮಾರ್ ಅವರನ್ನು ರಣಧೀರ ನಾಯ್ಕನಂತೆ ಚಿತ್ರಿಸಲಾಗಿದೆ.
ಸುಮಾರು 40 ವರ್ಷಗಳ ಹಿಂದೆ ಬೆಂಗಳೂರು ಸಮುದಾಯ ರಂಗತಂಡವು'ಹುತ್ತವ ಬಡಿದರೆ' ನಾಟಕದಲ್ಲಿಈ ಹಾಡನ್ನು ಅಳವಡಿಸಿಕೊಳ್ಳಲಾಗಿತ್ತು. ಡಾ.ಸಿ ವೀರಣ್ಣ ರಚಿಸಿದ ಈ ಹಾಡಿಗೆ ಬಿ.ವಿ.ಕಾರಂತರು ಸಂಗೀತ ನೀಡಿದ್ದರು. ಪ್ರಸ್ತುತಈ ಹಾಡನ್ನು ವಾಸುಕಿ ವೈಭವ್ ಹಾಡಿದ್ದು,ನವನೀತ್ ಶ್ಯಾಮ್ ರಾಗಸಂಯೋಜನೆ ಮಾಡಿದ್ದಾರೆ.
ಪೂರ್ಣಚಂದ್ರ ತೇಜಸ್ವಿ ರಚಿತ 'ಡೇರ್ಡೆವಿಲ್ ಮುಸ್ತಫಾ' ಕತೆಯನ್ನು ಓದುಗರೇ ಸಿನಿಮಾ ಮಾಡುತ್ತಿರುವುದು ವಿಶೇಷ.ಶಶಾಂಕ್ ಸೋಗಲ್ ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ಆದಿತ್ಯ ಅಶ್ರೀ, ಅಭಯ್, ಸುಪ್ರೀತ್ ಭಾರದ್ವಾಜ್, ಪ್ರೇರಣಾ, ಉಮೇಶ್, ಮಂಡ್ಯ ರಮೇಶ್, ಮೈಸೂರು ಆನಂದ್ ಸೇರಿದಂತೆ ಹಲವರು ನಟಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.