ನಟ ರಮೇಶ್ ಅರವಿಂದ್ ನಟನೆಯ ‘ಉಲ್ಟಾ ಪಲ್ಟಾ’ ಎಂಬ ಹಿಟ್ ಸಿನಿಮಾದ ನಿರ್ದೇಶಕ
ಎನ್.ಎಸ್.ಶಂಕರ್ ಅವರ ಹೊಸ ಸಿನಿಮಾ ‘ಈಗ’ ಸೋಮವಾರ(ಜೂನ್ 13) ಸೆಟ್ಟೇರಲಿದೆ.
ಬದಲಾದ ಸಿನಿಮಾ ಮಾರುಕಟ್ಟೆಯ ಅರ್ಥವ್ಯವಸ್ಥೆಯನ್ನರಿತು ತಮ್ಮ ‘ಸಿನಿಮಾ ಕೆಫೆ’ ಮೂಲಕ ಹೊಸ ಯೋಜನೆಯೊಂದನ್ನು ಶಂಕರ್ ಅವರು ಕೈಗೆತ್ತಿಕೊಂಡಿದ್ದಾರೆ. ಜನರೇ ಬಂಡವಾಳ ಹೂಡಿ ‘ಈಗ’ ಸಿನಿಮಾ ನಿರ್ಮಾಣ ಮಾಡುತ್ತಿರುವುದು ವಿಶೇಷ. ಕನಿಷ್ಠ ₹1 ಲಕ್ಷದಿಂದ ಗರಿಷ್ಠ ₹5 ಲಕ್ಷದವರೆಗೆ ಹೂಡಿಕೆ ಮಾಡಿ ಜನರೇ ಈ ಸಿನಿಮಾ ನಿರ್ಮಾಪಕರಾಗುತ್ತಿದ್ದಾರೆ. ಈ ಹಿಂದೆ ಚಂದನವನದಲ್ಲಿ ಮೂಡಿಬಂದಿದ್ದ ‘ಕಥಾಸಂಗಮ’ದಂತೆಯೇ ‘ಈಗ’ ಕೂಡಾ ಮೂರು ಕಥೆಗಳ ಗುಚ್ಛ. ಈ ಸಿನಿಮಾ, ಪಿ.ಲಂಕೇಶ್ ಅವರ ‘ಮುಟ್ಟಿಸಿಕೊಂಡವನು’, ಪ್ರತಿಭಾ ನಂದಕುಮಾರ್ ಅವರ ‘ಅರುಂಧತಿ’ ಹಾಗೂ ಪಿ.ಮಹಮ್ಮದ್ ಅವರ ‘ಡಿಸೆಂಬರ್ 6’ ಕಥೆಗಳ ಸಂಗಮ.
‘ಈ ಕಾಲದ ತಳಮಳಗಳ ಎದೆ ಬಗೆದು ನೋಡುವ ಈ ಮೂರು ಅದ್ವಿತೀಯ ಕತೆಗಳ ಗೊಂಚಲು ‘ಈಗ’ ಸಿನಿಮಾ’ ಎನ್ನುತ್ತಾರೆ ಶಂಕರ್. ‘ಪ್ರಸ್ತುತ ಇರುವ ವಿಷಯಗಳ ಮೂಲಕ ಈ ಮೂರು ಕಥೆಗಳು ಒಂದಕ್ಕೊಂದು ಜೋಡಣೆಯಾಗುತ್ತವೆ. ಸಿನಿಮಾಗಳ ಬಜೆಟ್ ₹75 ಲಕ್ಷ ಎಂದು ಊಹಿಸಿದ್ದೇವೆ. ಈಗಾಗಲೇ ಹಲವರು ಹೂಡಿಕೆ ಮಾಡಿದ್ದು, ಇನ್ನೂ ಹಲವರು ಆಸಕ್ತಿ ತೋರುತ್ತಿದ್ದಾರೆ’ ಎಂದರು.v
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.