ಬೆಂಗಳೂರು: ‘ಸಿಗರೇಟು, ಕುಡಿತವನ್ನು ಸಿನಿಮಾದಲ್ಲಿ ತೋರಿಸಿದರೆ ತಪ್ಪು. ಅದೇ ಸರ್ಕಾರ ಇದಕ್ಕೆಲ್ಲ ಅನುಮತಿ ನೀಡಬಹುದು’ ಎಂದು ನಟ ಉಪೇಂದ್ರ ಮಾರ್ಮಿಕವಾಗಿ ಟ್ವೀಟ್ ಮಾಡಿದ್ದಾರೆ.
‘ಒಂದು ಸಿನಿಮಾದಲ್ಲಿ ಸಿಗರೇಟ್ ಸೇದೋದು ತಪ್ಪು ಕುಡಿಯೋದು ತಪ್ಪು, ಜೂಜಿಗೆ ಜಾಹಿರಾತು ನೀಡೋದು ತಪ್ಪು... ಆದರೆ, ಇವುಗಳಿಂದ ಬರೋ ತೆರಿಗೆ ಹಣಕ್ಕಾಗಿ ಇದಕ್ಕೆಲ್ಲಾ ಅನುಮತಿ ಕೊಟ್ಟಿರೋ ಸರ್ಕಾರ ಸರಿ, ಶ್… ಯಾರೂ ಮಾತನಾಡಬಾರದು! ನಾಯಕ ಸಂಸ್ಕೃತಿಯ ರಾಜಕೀಯ ಗುಂಗಿನ ಸಮಾಜದಲ್ಲಿ, ಯಾವತ್ತೂ ಅಪ್ಪ ಸರಿ… ಮಕ್ಕಳು ತಪ್ಪು!’ ಎಂದು ಅವರು ಟ್ವೀಟ್ನಲ್ಲಿ ಉಲ್ಲೇಖಿಸಿದ್ದಾರೆ.
ಪಾನ್ ಮಸಾಲ ಬ್ರಾಂಡ್ನ ರಾಯಭಾರಿಯಾಗಿ ಕಾಣಿಸಿಕೊಂಡಿದ್ದಕ್ಕಾಗಿ ಹಿಂದಿಯ ಸೂಪರ್ ಸ್ಟಾರ್ ಅಕ್ಷಯ್ ಕುಮಾರ್ ಗುರುವಾರ ತಮ್ಮ ಅಭಿಮಾನಿಗಳಲ್ಲಿ ಕ್ಷಮೆಯಾಚಿಸಿದ್ದರು. ಆ ಜಾಹೀರಾತಿನ ಒಪ್ಪಂದ ಕಡಿದುಕೊಳ್ಳುವುದಾಗಿ ಹೇಳಿದ್ದರು. ‘ಎಂದಿಗೂ ನಾನು ತಂಬಾಕನ್ನು ಉತ್ತೇಜಿಸುವುದಿಲ್ಲ’ ಎಂದು ಅಕ್ಷಯ್ ಪ್ರತಿಜ್ಞೆ ಮಾಡಿದ್ದ ಹಳೆಯ ವಿಡಿಯೊವನ್ನು ಪೋಸ್ಟ್ ಮಾಡಿದ್ದ ಸಾಮಾಜಿಕ ಮಾಧ್ಯಮ ಬಳಕೆದಾರರು ಅವರನ್ನು ಪ್ರಶ್ನಿಸಿದ್ದರು.
ಆನ್ಲೈನ್ ಜೂಜಿನ ಜಾಹೀರಾತೊಂದರಲ್ಲಿ ನಟ ಕಿಚ್ಚ ಸುದೀಪ್ ಕಾಣಿಸಿಕೊಂಡಿದ್ದು ಕೆಲ ಸಮಯ ಹಿಂದೆ ಚರ್ಚೆಗೆ ಗ್ರಾಸವಾಗಿತ್ತು. ಸುದೀಪ್ ಅವರನ್ನು ಕನ್ನಡ ಚಿತ್ರರಂಗದಿಂದ ಬ್ಯಾನ್ ಮಾಡಬೇಕು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ಆಗ್ರಹಿಸಿದ್ದರು. ಆದರೆ ಅವರ ಬೆನ್ನಿಗೆ ನಿಂತಿದ್ದ ಅಭಿಮಾನಿಗಳು, ತಾಕತ್ತಿದ್ದರೆ ಆನ್ಲೈನ್ ಜೂಜನ್ನೇ ನಿಷೇಧಿಸಿ ಎಂದು ಸವಾಲು ಹಾಕಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.