ಬೆಂಗಳೂರು: ನಟ ಶಿವರಾಂ ಅವರ ಆರೋಗ್ಯ ಸ್ಥಿತಿ ಮತ್ತಷ್ಟು ಗಂಭೀರವಾಗಿದೆ ಎಂದು ಪ್ರಶಾಂತ್ ಆಸ್ಪತ್ರೆಯ ವೈದ್ಯ ಮೋಹನ್ ತಿಳಿಸಿದ್ದಾರೆ.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಮಿದುಳಿಗೆ ಮತ್ತಷ್ಟು ಹಾನಿಯಾಗಿದ್ದು, ರಕ್ತದೊತ್ತಡ ಹೆಚ್ಚಾಗಿದೆ. ವೆಂಟಿಲೇಟರ್ನಲ್ಲೇ ಶಿವರಾಂ ಅವರಿಗೆ ಚಿಕಿತ್ಸೆ ಮುಂದುವರಿದಿದ್ದು, ಮೂತ್ರಪಿಂಡ, ಪಿತ್ತಕೋಶ ಎಲ್ಲವೂ ಕಾರ್ಯನಿರ್ವಹಿಸುತ್ತಿವೆ.ಆದರೆ ಹೃದಯ ಸ್ಪಂದಿಸುತ್ತಿಲ್ಲ. ಅವರು ತುಂಬ ಸಮಯ ನಮ್ಮೊಂದಿಗೆ ಇರುತ್ತಾರೆ ಎನ್ನುವುದು ಅನುಮಾನವಾಗಿದೆ. ಚಿಕಿತ್ಸೆ ಮುಂದುವರಿಸಿದ್ದೇವೆ, ಆದರೆ ಅದಕ್ಕೆ ಸ್ಪಂದಿಸುತ್ತಾರೆ ಎನ್ನುವ ಭರವಸೆ ಕಡಿಮೆಯಾಗುತ್ತಿದೆ. ಅವರು ಚೇತರಿಸಿಕೊಳ್ಳುವ ಸಂಭವ ಬಹಳ ಕಡಿಮೆ. ಎಷ್ಟು ಸಮಯ, ಎಷ್ಟು ದಿನ ಎಂದು ಹೇಳಲು ಸಾಧ್ಯವಿಲ್ಲ. ಆರೋಗ್ಯ ತೀರಾ ಹದಗೆಟ್ಟಿದೆ’ ಎಂದಿದ್ದಾರೆ.
‘ಜೀವರಕ್ಷಕದ ನೆರವು ಹೆಚ್ಚಿಸಿದ್ದೇವೆ. ತುಂಬಾ ಹಿಂಸೆ ಮಾಡಬೇಡಿ ಎಂದು ಕುಟುಂಬದವರು ಹೇಳಿದ್ದಾರೆ. ಉಳಿಸಿಕೊಳ್ಳಲು ನೋಡಿ ಎನ್ನುತ್ತಿದ್ದಾರೆ. ಅವರಿಗೂ ಪರಿಸ್ಥಿತಿ ಅರ್ಥವಾಗಿದೆ. ಎಂಆರ್ಐ ಸ್ಕ್ಯಾನ್ ಮಾಡಲು ಸಾಧ್ಯವಿಲ್ಲ. ಏಕೆಂದರೆ ಸ್ಕ್ಯಾನ್ ಮಾಡಲು ಅವರನ್ನು ಬೆಡ್ನಿಂದ ಸ್ಥಳಾಂತರಿಸಬೇಕು. ಹೀಗೆ ಮಾಡಿದಲ್ಲಿ ರಕ್ತದೊತ್ತಡ ಏರುಪೇರಾಗಬಹುದು ಎನ್ನುವ ಭಯವಿದೆ. ಶ್ವಾಸಕೋಶದಲ್ಲಿ ನೀರು ತುಂಬುತ್ತಿದೆ. ಮಿದುಳಿನ ಜೊತೆ ಇತರೆ ಅಂಗಾಂಗಗಳೂ ನಿಷ್ಕ್ರಿಯಗೊಳ್ಳುತ್ತಿವೆ’ ಎಂದು ಮೋಹನ್ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.