ನಿರ್ಮಾಣ: ಎಸ್.ಟಿ. ಪಾಲ್ರಾಜ್
ನಿರ್ದೇಶನ: ರವಿವರ್ಮ ಗುಬ್ಬಿ
ತಾರಾಗಣ: ಕೃಷ್ಣ ಅಜಯ್ ರಾವ್, ಸಿಂಧು ಲೋಕನಾಥ್, ಅನಂತನಾಗ್, ರವಿಶಂಕರ್, ಶೋಭರಾಜ್, ಆದಿ ಲೋಕೇಶ್, ಬುಲೆಟ್ ಪ್ರಕಾಶ್, ಮಿತ್ರ, ಅರುಣ್ಸಾಗರ್, ಶ್ರುತಿ ನಾಯ್ಡು, ಇತರರು.
ಪ್ರೀತಿ–ಪ್ರೇಮ, ಕೌತುಕ, ಭಾವುಕತೆಗೆ ಸಾಹಸದ ಬೋಗಿಯನ್ನು ಕೂಡಿಸಿಕೊಂಡು ಸಾಗುವ ಚಿತ್ರ ‘ಜೈ ಭಜರಂಗ ಬಲಿ’. ಈಗಾಗಲೇ ತೆರೆಗೆ ಬಂದ ಕೆಲವು ಚಿತ್ರಗಳಲ್ಲಿನ ಸನ್ನಿವೇಶಗಳನ್ನು ಎತ್ತಿಕೊಂಡು ಹೊಸ ಸ್ಪರ್ಶಕೊಟ್ಟು ರೂಪಿಸಿದ ಹೊಸ ಕಥೆಯಂತೆ ಸಿನಿಮಾ ಭಾಸವಾಗುತ್ತದೆ. ಚಿತ್ರಕಥೆಯಲ್ಲಿ ಹಲವು ಅಂಶಗಳನ್ನು ಒಂದಕ್ಕೊಂದು ಬೆಸೆಯುವ ಪ್ರಯತ್ನ ಮಾಡಿದ್ದಾರೆ ನಿರ್ದೇಶಕರು.
ಹೀಗೆ ಸ್ವಂತಿಕೆಯಿಲ್ಲದ ಬೋಗಿಗಳನ್ನು ಸಾಮಾನ್ಯರೇಖೆಯಲ್ಲಿ ಸಾಗಿಸಿಕೊಂಡು ಹೋಗಿರುವ ನಿರ್ದೇಶಕ ರವಿವರ್ಮ ಕುಮಾರ್ ಕೆಲವು ಕಡೆಗಳಲ್ಲಿ ಅನವಶ್ಯಕವಾಗಿಯೂ ಜನರನ್ನು ಬೋಗಿಯೊಳಗೆ ತುಂಬಿಸಿಕೊಂಡಿದ್ದಾರೆ. ಒಟ್ಟಾರೆ ನೋಡುವುದಾದರೆ ಸಿದ್ಧಸೂತ್ರದ ಪ್ಯಾಕೇಜ್ನಡಿಯ ಸರಳ ಮನರಂಜನೆ ಸಿನಿಮಾದಲ್ಲಿದೆ. ಅಂಬುಜಾಕ್ಷಿ ವೈದ್ಯರ ಮಗಳು. ತಾಯಿ ಮಲೇಷ್ಯಾದಲ್ಲಿ ದೊಡ್ಡ ಆಸ್ಪತ್ರೆ ನಡೆಸುತ್ತಿದ್ದರೆ, ತಂದೆ ತನ್ನ ಊರಿನಲ್ಲಿಯೇ ಆಯುರ್ವೇದ ವೈದ್ಯ.
ನಾನೊಂದು ತೀರ ನೀನೊಂದು ತೀರ ಎನ್ನುವ ಧೋರಣೆಯ ಜೋಡಿ ಇದು. ಮಲೇಷ್ಯಾದಲ್ಲಿ ಬೆಳೆದ ಅಂಬುಜಾಕ್ಷಿ ತಂದೆಯ ಮನೆಗೆ ಬರುತ್ತಾಳೆ. ಅಜೇಯ್ ಮಧ್ಯಮ ವರ್ಗದ ಕುಟುಂಬದ ಹುಡುಗ. ಬದುಕಿಗಾಗಿ ನಾನಾ ಮುಖವಾಡಗಳನ್ನು ತೊಡುವ ತರುಣ. ಅವನಿಗೊಂದು ಗೆಳೆಯರ ಗುಂಪು. ಈ ಮುಖ-ವಾಡಗಳೇ ಆತನನ್ನು ಸಂಕಷ್ಟಕ್ಕೆ ದೂಡುವುದು.
ಅಜೇಯ್ಗೆ ಅಂಬುಜಾಕ್ಷಿ ಕುರಿತು ಹೃದಯ ಮಿಡಿಯುತ್ತದೆ. ಅದೇ ಸಮಯಕ್ಕೆ ಅಜೇಯ್ ಸ್ನೇಹಿತರು ಆಂಜನೇಯನ ವಿಗ್ರಹ ಕಳವು ಮಾಡಿ, ಆ ಆರೋಪ ಪ್ರೇಮಿಗಳ ಮೇಲೆ ಬರುತ್ತದೆ. ಅಲ್ಲೊಂದಿಷ್ಟು ಪ್ರೇಮಿಗಳ ಸಂಕಷ್ಟ–ಹೋರಾಟ–ಹಾರಾಟ. ಕ್ಲೈಮ್ಯಾಕ್ಸ್ನಲ್ಲಿಯೇ ಕಳ್ಳರು ಯಾರು ಎನ್ನುವುದು ಗೊತ್ತಾಗುವುದು! ಮಾರುತಿ ಸನ್ನಿಧಾನದಲ್ಲಿ ಪ್ರೇಮ ಅರಳುವುದು ಮತ್ತು ಮೂರ್ತಿಯ ಕಳವು ಸಿನಿಮಾವನ್ನು ಬೆಳೆಸುವ ಕಾರಣಕ್ಕೆ ಚಿತ್ರಕ್ಕೆ ‘ಜೈ ಭಜರಂಗ ಬಲಿ’ ಶೀರ್ಷಿಕೆ ಹೊಂದಿಸಿರುವುದು ಸ್ಪಷ್ಟವಾಗುತ್ತದೆ.
ನಾಯಕ ಅಜಯ್ ರಾವ್, ನಾಯಕಿ ಸಿಂಧು ಲೋಕನಾಥ್ ತಮ್ಮ ಹಿಂದಿನ ಚಿತ್ರಗಳಿಗಿಂತ ಬೇರೆಯದ್ದೇ ರೀತಿಯಾಗಿ ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಲವ್ವರ್ ಬಾಯ್, ರೊಮ್ಯಾಂಟಿಕ್ ಇಮೇಜಿಂದ ಹೊರಬಂದು ಅಜೇಯ್ ಚಳಿಬಿಟ್ಟು ಸಾಹಸ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ. ದೇಸಿ ಚೆಲ್ವಿ ಸಿಂಧು ಬೋಲ್ಡ್ ಮತ್ತು ಗ್ಲಾಮರ್ ಆಗಿ ಮಿಂಚಿದ್ದಾರೆ. ಅನಂತ್ನಾಗ್, ರವಿಶಂಕರ್, ಶ್ರುತಿ ನಾಯ್ದು ಜವಾಬ್ದಾರಿಯುತ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡರೆ, ಮಿತ್ರ, ಅರುಣ್ ಸಾಗರ್, ಬುಲೆಟ್ ಪ್ರಕಾಶ್ ಕಾಮಿಡಿ ಪೀಸುಗಳು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.