
ಜಿ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿ ರುವ ‘ವೀಕೆಂಡ್ ವಿತ್ ರಮೇಶ್’ ಕಾರ್ಯಕ್ರಮ ವಾರದಿಂದ ವಾರಕ್ಕೆ ರಂಗು ಪಡೆಯುತ್ತಿದೆ. ಕಳೆದ ವಾರವಷ್ಟೇ ರೆಬೆಲ್ಸ್ಟಾರ್ ಅಂಬರೀಶ್ ಅವರ ಹೃದಯಂತರಾಳದ ಭಾವನೆಗಳನ್ನು ಕನ್ನಡಿಗರ ಮುಂದೆ ತೆರೆದಿಟ್ಟಿದ್ದ ಈ ಕಾರ್ಯಕ್ರಮ ಅಭಿಮಾನಿಗಳಿಗೆ ಗೊತ್ತಿಲ್ಲದೇ ಇದ್ದ ಸಾಕಷ್ಟು ವಿಷಯಗಳನ್ನು ಬಹಿರಂಗ ಮಾಡಿತ್ತು.
ಕಳೆದ ಸಂಚಿಕೆಗಳಲ್ಲಿ ರಕ್ಷಿತಾ ಪ್ರೇಮ್, ವಿಜಯ ಪ್ರಕಾಶ್, ದೇವರಾಜ್ ಸೇರಿದಂತೆ ಹಲವಾರು ಬೆಳ್ಳಿ ತೆರೆಯ ಸ್ಟಾರ್ಗಳನ್ನು ತನ್ನ ವೀಕ್ಷಕರಿಗೆ ಪರಿಚಯಿಸಿದ ಜಿ ವಾಹಿನಿ ಈ ವಾರ ಛಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಬಣ್ಣದ ಬದುಕಿನ ದಿನಗಳ ಮೆಲುಕಿಗೆ ವೇದಿಕೆಯಾಗಲಿದೆ.
ಛಾಲೆಂಜಿಂಗ್ ಸ್ಟಾರ್ ಆಗುವ ಮೊದಲು ದರ್ಶನ್ ಅನುಭವಿಸಿದ ಕಷ್ಟದ ದಿನಗಳು ತಂದೆ ತೂಗುದೀಪ ಶ್ರೀನಿವಾಸ್ ಅವರ ಮಗನಾದರೂ ತಾನೊಬ್ಬ ನಾಯಕನಾಗಲು ಎಷ್ಟೆಲ್ಲಾ ಕಷ್ಟಗಳನ್ನು ಎದುರಿಸಿದರು ಎಂಬುದನ್ನು ದರ್ಶನ್ ಅವರೇ ಈ ಕಾರ್ಯಕ್ರಮದಲ್ಲಿ ರಮೇಶ್ ಅವರ ಜೊತೆ ಹಂಚಿಕೊಳ್ಳಲಿದ್ದಾರೆ.
ಅಲ್ಲದೇ ಬಾಲ್ಯದ ದಿನಗಳಲ್ಲಿ ದರ್ಶನ್ ಹೇಗಿದ್ದರು. ಅವರ ಸುತ್ತಲಿನ ಪರಿಸರ ಹೇಗಿತ್ತು. ಅವರ ಆತ್ಮೀಯ ಗೆಳೆಯರು ಯಾರ್ಯಾರು ಎಂಬ ಬಗ್ಗೆ ಕೂಡ ದರ್ಶನ್ ಈ ಕಾರ್ಯಕ್ರಮದಲ್ಲಿ ಆತ್ಮೀಯವಾಗಿ ಹೇಳಿಕೊಂಡಿದ್ದಾರೆ. ಈ ಎಲ್ಲಾ ರಸನಿಮಿಷ ಸವಿಯುವಂಥ ಅವಕಾಶವ ಈ ವಾರದ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಪ್ರೇಕ್ಷಕರಿಗೆ ದೊರಕಲಿದೆ.
ಈ ಕಾರ್ಯಕ್ರಮ ಇದೇ 30 ಹಾಗೂ 31ರಂದು (ಶನಿವಾರ ಮತ್ತು ಭಾನುವಾರ) ರಾತ್ರಿ 9 ಗಂಟೆಗೆ ಪ್ರಸಾರಗೊಳ್ಳಲಿದೆ. ದರ್ಶನ್ ಅವರ ಮೊದಲ ಚಿತ್ರ ‘ಮೆಜೆಸ್ಟಿಕ್’ನಿಂದ ಇತ್ತೀಚೆಗಿನ ‘ವಿರಾಟ್’ವರೆಗೆ ತಾವು ಚಿತ್ರರಂಗದಲ್ಲಿ ಸಾಗಿಬಂದ ಹಾದಿಯನ್ನು ಇಲ್ಲಿ ತೆರೆದಿಡಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.