ಬೆಂಗಳೂರು: ಮನೆಮಂದಿಯೆಲ್ಲ ಎದೆಬಡಿತ ಹೆಚ್ಚಿಸಿಕೊಂಡು ಟಿ.ವಿ. ಮುಂದು ಕೂತು ಸರಿಗಮಪ ಸೀಸನ್–15ರ ಫೈನಲ್ ಕಾರ್ಯಕ್ರಮವನ್ನು ವೀಕ್ಷಿಸಿದರು. ನೇರ ಪ್ರಸಾರವಾದ ಗಾಯನದ ರಿಯಾಲಿಟಿ ಶೋ ಅಂತಿಮ ಸ್ಪರ್ಧೆಯಲ್ಲಿ ಮಂಗಳೂರಿನ ಕೀರ್ತನ್ ಹೊಳ್ಳ ವಿಜೇತರಾದರು.
ಶನಿವಾರ ರಾತ್ರಿ ನಗರದ ಕೋರಮಂಗಲದಲ್ಲಿರುವ ನ್ಯಾಷನಲ್ ಸ್ಟೇಡಿಯಂ(ಒಳಾಂಗಣ)ನಲ್ಲಿ ಫೈನಲ್ ಸ್ಪರ್ಧೆ ನಡೆಯಿತು. ಅಂತಿಮ ಹಂತಕ್ಕೆ ತಲುಪಿದ್ದ ಆರು ಸ್ಪರ್ಧಿಗಳ ಪೈಕಿ ಮೂವರನ್ನು ಸ್ಪರ್ಧೆಯ ವಿಜೇತರ ಆಯ್ಕೆ ಸುತ್ತಿಗೆ ಆಯ್ಕೆ ಮಾಡಲಾಯಿತು. ಗಾಯನದ ಹಣಾಹಣಿಯಲ್ಲಿ ಗ್ರಾಮೀಣ ಪ್ರತಿಭೆ ಹನುಮಂತ ಹಾಗೂ ಶಾಸ್ತ್ರೀಯ ಸಂಗೀತ ಕರಗತ ಮಾಡಿಕೊಂಡಿರುವ ಕೀರ್ತನ್ ಹೊಳ್ಳ ನಡುವೆ ವಿಜೇತ ಸ್ಥಾನಕ್ಕೆ ಪೈಪೋಟಿ ಏರ್ಪಟ್ಟಿತು.
ಫಿನಾಲೆಯಲ್ಲಿ ನೀಡಿದ ಪ್ರದರ್ಶನ,ತೀರ್ಪುಗಾರರ ಸಲಹೆ ಹಾಗೂ ಜನರು ವೋಟ್ ಮಾಡಿ ನೀಡಿದ ಬೆಂಬಲವನ್ನು ಪರಿಗಣಿಸಿ ಹಿರಿಯ ಸಂಗೀತ ನಿರ್ದೇಶಕ ಹಂಸಲೇಖ ಕೀರ್ತನ್ನನ್ನು ವಿಜೇತ ಎಂದು ಘೋಷಿಸಿದರು. ಇದರೊಂದಿಗೆ ಕೀರ್ತನ್ ₹35 ಲಕ್ಷ ಮೌಲ್ಯದ ಅಪಾರ್ಟ್ಮೆಂಟ್ನ್ನು ಬಹುಮಾನವಾಗಿ ಪಡೆದರೆ, ದ್ವಿತೀಯ ಸ್ಥಾನ ಪಡೆದ ಹನುಮಂತಗೆ ₹15 ಲಕ್ಷ ಮೌಲ್ಯದ ಸೈಟ್ ಹಾಗೂ ₹1 ಲಕ್ಷದ ಚೆಕ್ ನೀಡಲಾಯಿತು. ಫೈನಲ್ ಪ್ರವೇಶಿಸಿದ್ದ ಏಕೈಕ ಮಹಿಳಾ ಸ್ಪರ್ಧಿ ಸಾಧ್ಬಿ ತೃತೀಯ ಸ್ಥಾನವನ್ನು ತಮ್ಮದಾಗಿಸಿ ಕೊಂಡರು. ಅವರಿಗೆ ₹2 ಲಕ್ಷದ ಚೆಕ್ ನೀಡಿ ಪ್ರಶಂಸಲಾಯಿತು.
ಗಾಯಕ ವಿಜಯ್ ಪ್ರಕಾಶ್, ರಾಜೇಶ್ ಕೃಷ್ಣನ್, ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಹಾಗೂ ಹಂಸಲೇಖ ತೀರ್ಪುಗಾರರಾಗಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.