ಹುಬ್ಬಳ್ಳಿ: ಇವರು ಸಂಗಮೇಶ ಚಕ್ರಸಾಲಿ. ತಾಜ್ನಗರದ ನಿವಾಸಿ. ಆದರೆ ಈ ಹೆಸರು ಅವಳಿನಗರದ ಜನರಿಗೆ ಅಪರಿಚಿತ. ಅದೇ ಸ್ನೇಕ್ ಸಂಗು ಅಂದರೆ, ಓ ನಮ್ಮ ಸ್ನೇಕ್ ಸಂಗುನಾ... ಅನ್ನೋವಷ್ಟು ಚಿರಪರಿಚಿತರು.
19 ವರ್ಷಗಳ ಹಿಂದೆ ಇವರು ಉಳವಿಯಲ್ಲಿ ವಾಸಿಸುತ್ತಿದ್ದರು. ಅಲ್ಲಿನ ಮರ, ನದಿ, ಪ್ರಾಣಿ, ಪಕ್ಷಿ, ಸರಿಸೃಪ ಎಲ್ಲವೂ ಸಂಗು ಅವರ ಒಡನಾಡಿಗಳು. 2005ರಲ್ಲಿ ಸಂಗಮೇಶ ಹುಬ್ಬಳ್ಳಿಗೆ ಬಂದರು. ಉರಗ ರಕ್ಷಕನಾಗಿ ಗುರುತಿಸಿ
ಕೊಂಡಿರುವ ಸಂಗಮೇಶ, ಇವರೆಗೆ 19,500 ಹಾವುಗಳನ್ನು ರಕ್ಷಿಸಿದ್ದಾರೆ. ಇವುಗಳಲ್ಲಿ 17 ಜಾತಿಯ ಹಾವುಗಳಿವೆ. ಕೆಲವು ವಿಷಕಾರಿಗಳಾದರೆ, ಕೆಲವು ನಿರುಪದ್ರವಿ.
ಸಂಗಮೇಶ ರಕ್ಷಿಸಿರುವ ವಿಷಕಾರಿ, ಅಪಾಯಕಾರಿ ಹಾವುಗಳೆಂದರೆ ಕಾಳಿಂದ ಸರ್ಪ (ಕಿಂಗ್ ಕೋಬ್ರಾ), ಕಡಂಬಳ (ಕಾಮನ್ ಕ್ರೇಟ್), ಹಪ್ಪಟೆ ಹಾವು (ಪಿಟ್ ವೈಪರ್), ಕೊಳಕುಮಂಡಲ (ರಸ್ಸೇಲ್ ವೈಪರ್), ನಾಗರ ಹಾವು (ಇಂಡಿಯನ್ ಕೋಬ್ರಾ). ತಮ್ಮ ಈವರೆಗಿನ ಹಾವುಗಳ ರಕ್ಷಣೆಯಲ್ಲಿ ಎರಡು ಬಾರಿ ತೀರಾ ಅಪಾಯಕಾರಿ ಸಂದರ್ಭವನ್ನು ಎದುರಿಸಿದ್ದಾರೆ. ಒಮ್ಮೆ ಬಿವಿಬಿ ಕ್ಯಾಂಪಸ್ನಲ್ಲಿ ಕಾಳಿಂಗ ಸರ್ಪ ಹಿಡಿಯುವಾಗ ದಾಳಿ ನಡೆಸಿತ್ತು. ಆ ಸಂದರ್ಭದಲ್ಲಿ ಹಾವಿನ ವಿಷ ಕಣ್ಣಿಗೆ ಸಿಡಿದು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದರು. ಇನ್ನೊಮ್ಮೆ ಹಂಸ್ ಹೋಟೆಲ್ನಲ್ಲಿ ಹಾವುಹಿಡಿಯುವ ಸಂದರ್ಭದಲ್ಲಿ ವಿದ್ಯುತ್ ನಿಲುಗಡೆಯಾಗಿ ಹಾವು ಅವರ ಮೊಣಕಾಲಿಗೆ ಕಚ್ಚಿತ್ತು. ಆಗಲೂ ಗುಣಮುಖರಾದರು. ಅಂದಾಜು 30ಬಾರಿ ಕೇರಿ ಹಾವುಗಳಿಂದ ಕಚ್ಚಿಸಿಕೊಂಡಿದ್ದಾರೆ.
ಹಾವುಗಳು ಮಾತ್ರವಲ್ಲದೇ ಗಾಯಗೊಂಡ ಸಾಕಷ್ಟು ಮಂಗ, ನಾಯಿ, ಉಡ, ಗೂಬೆಗಳನ್ನೂ ರಕ್ಷಿಸಿ, ಅವುಗಳನ್ನು ಉಪಚಿರಿಸಿದ್ದಾರೆ. ಹಾವುಗಳ ಹಾಗೂ ವನ್ಯಜೀವಿಗಳ ರಕ್ಷಣೆಯ ಜಾಗೃತಿಗಾಗಿ ಸಂಗಮೇಶ ಶಾಲಾ, ಕಾಲೇಜುಗಳಲ್ಲಿ ಜಾಗೃತಿ ಶಿಬಿರಗಳನ್ನು ನಡೆಸಿಕೊಡುತ್ತಿದ್ದಾರೆ.
ವನ್ಯಜೀವಿಗಳ ಮೇಲಿನ ಕಾಳಜಿ,ರಕ್ಷಣೆಯ ಕಾಳಜಿಯನ್ನು ಗುರುತಿಸಿಸಂಗಮೇಶ ಅವರಿಗೆ ಅನುಕೂಲವಾಗ
ಲೆಂದು ಹುಬ್ಬಳ್ಳಿಯ ರೌಂಡ್ಟೇಬಲ್ ಲೇಡಿಸ್ ಕ್ಲಬ್ ಒಮ್ನಿಯನ್ನು ನೀಡಿದೆ. ಹಾವು ಹಿಡಿಯಲು ಅಗತ್ಯವಿರುವ ಟೂಲ್ಕಿಟ್ ಹಾಗೂ ಶೂಗಳನ್ನು ಒದಗಿಸಿದೆ. ಸ್ಥಳೀಯ ಸಂಘ–ಸಂಸ್ಥೆಗಳು ಸನ್ಮಾನಿಸಿವೆ.
ಸಾರ್ವಜನಿಕ ಸ್ಥಳ ಇಲ್ಲವೆ ಮನೆಯಲ್ಲಿ ಹಾವು ಕಾಣಿಸಿಕೊಂಡರೆ ಸ್ನೇಕ್ ಸಂಗಮೇಶ ಅವರನ್ನು 72592 62295 ಈ ಸಂಖ್ಯೆಗೆ ಕರೆ ಮಾಡಬಹುದು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.