ADVERTISEMENT

ಶಾಲೆಯಲ್ಲಿ ನೀರಿನ ಪಾಠ!

ಕೂಡಂಡ ರವಿ
Published 27 ಮಾರ್ಚ್ 2020, 2:35 IST
Last Updated 27 ಮಾರ್ಚ್ 2020, 2:35 IST
ಮಳೆ ನೀರು ಸಂರಕ್ಷಣೆ
ಮಳೆ ನೀರು ಸಂರಕ್ಷಣೆ   

ಇದೊಂದು ನೀತಿಕಥೆ. ರಜೆಯಲ್ಲಿ ಮಕ್ಕಳಿಗೆ ನೀರಿನ ಮಹತ್ವ ತಿಳಿಸುವ ಕಥೆ. ಇದು ಕಾಲ್ಪನಿಕವಾದರೂ, ಬಳಸಿರುವ ಎಲ್ಲ ತಾಂತ್ರಿಕ ಅಂಶಗಳೂ ನೈಜ. ಮಕ್ಕಳು ಶಾಲೆ ಆರಂಭ ಮಾಡಿದ ಮೇಲಾದರೂ, ಇದನ್ನು ಜ್ಞಾಪಿಸಿಕೊಳ್ಳುತ್ತಾರೆ...

ಅಂದು ಸೋಮವಾರ. ಮಕ್ಕಳೆಲ್ಲರೂ ಓಡೋಡಿ ಶಾಲೆಯ ಕಡೆ ಬಂದರು. 8ನೇ ತರಗತಿಯ ವಿದ್ಯಾರ್ಥಿಗಳು ಅತ್ಯಂತ ಉತ್ಸಾಹದಲ್ಲಿದ್ದರು. ಅಂದು ಅವರ ಪ್ರೀತಿಯ ವಿಜ್ಞಾನ ಶಿಕ್ಷಕ ರವಿ ಮಾಸ್ಟರ್ ನೀರಿನ ಬಗ್ಗೆ ನಿಮಗೆ ತಿಳಿದಿರುವ ವಿಚಾರವನ್ನು ಬರೆದು ಕೊಂಡು ಬರುವಂತೆ ಮನೆ ಕೆಲಸ ನೀಡಿದ್ದರು. ನೀರನ್ನು ಉಳಿಸುವ ಬಗ್ಗೆ ವಿಶೇಷ ಮಾಹಿತಿ ನೀಡುವುದಾಗಿ ಹಿಂದಿನ ತರಗತಿಯಲ್ಲಿ ತಿಳಿಸಿದ್ದರು. ಲಗುಬಗೆಯಲ್ಲಿ ವಿದ್ಯಾರ್ಥಿಗಳು ದೈನಿಕ ಪ್ರಾರ್ಥನೆ ಮುಗಿಸಿ ಮೊದಲು ತರಗತಿಗೆ ರವಿ ಮಾಸ್ಟರ್ ಬರುವಿಕೆಯನ್ನು ನಿರೀಕ್ಷಿಸುತ್ತಿದ್ದರು..

ತರಗತಿಗೆ ಬಂದ ರವಿ ಮಾಸ್ಟರ್ ಮಕ್ಕಳ ಹಾಜರಾತಿ ತೆಗೆದುಕೊಂಡರು. ಜಿಮ್ಮಿ, ಚಂಗು, ಚಿಮ್ಮ, ಗಪ್ಪು, ಪಿಂಟೋ, ಆಹ್ಮದ್, ಲೋಬೊ, ಜಮೀರ್ ಸರತಿಯ ಸಾಲಿನಲ್ಲಿ ನಿಂತು ಮನೆಕೆಲಸವನ್ನು ಅಧ್ಯಾಪಕರಿಗೆ ತೋರಿಸಿದರು.

ADVERTISEMENT

ವಿದ್ಯಾರ್ಥಿಗಳು ತಮ್ಮ ಪ್ರೀತಿಯ ಶಿಕ್ಷಕರು ನೀರಿನ ಬಗ್ಗೆ ಅದೇನೂ ಹೇಳುವರೋ ಎಂದು ಕಾತರದಿಂದ ಕಾದಿದ್ದರು. ‘ಇಂದು ನಾವು ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿಯ ಪ್ರಗತಿಪರ ಕೃಷಿಕ ಶಿವನಂಜಯ್ಯ ಬಾಳೇಕಾಯಿ ಅವರು ತಿಳಿಸಿರುವ ಮಳೆನೀರು ಕೊಯ್ಲು ವಿಧಾನವನ್ನು ಶಾಲೆಯಲ್ಲಿ ಅಳವಡಿಸೋಣ ಬನ್ನಿ‘ ಎಂದು ವಿದ್ಯಾರ್ಥಿಗಳನ್ನು ಶಾಲೆಯ ಕೊಳವೆ ಬಾವಿ ಬಳಿ ಕರೆದುಕೊಂಡು ಹೋದರು. ‘

ನಮ್ಮ ಅಧ್ಯಾಪಕರು ಏನು ಮಾಡುತ್ತಾರೆ ? ಎಂಬ ಕುತೂಹಲ ವಿದ್ಯಾರ್ಥಿ ವೃಂದವನ್ನು ಕಾಡತೊಡಗಿತು.

ಅಷ್ಟರಲ್ಲಿ ಮಿನಿ ಲಾರಿಯು ಶಾಲೆಯ ಆವರಣವನ್ನು ಪ್ರವೇಶಿಸಿತು. ಅದರಲ್ಲಿದ್ದ ಚಾಲಕ ‘ಸಾರ್, ಇದನ್ನೆಲ್ಲಾ ಎಲ್ಲಿ ಇಳಿಸಲಿ ?‘ ಎಂದು ರವಿ ಮಾಸ್ಟರ್ ಅವರನ್ನು ಕೇಳಿದ.

ಮಿನಿ ಲಾರಿಯಲ್ಲಿ ಏನಿದೆ ಸಾರ್ ? ಫಾತಿಮಾಳ ಕುತೂಹಲ ಮಿಶ್ರಿತ ಪ್ರಶ್ನೆ. ಸ್ವಲ್ಪ ಹೊತ್ತು ಕಾಯಿರಿ . ನಿಮಗೆ ಎಲ್ಲಾ ವಿಚಾರ ತಿಳಿಸುವೆ. ಲಾರಿಯಲ್ಲಿರುವ ವಸ್ತುಗಳನ್ನು ಇಳಿಸುವವರೆಗೆ ಕಾಯಿರಿ. ಎಂದು ರವಿ ಮಾಸ್ತರ್ ವಿದ್ಯಾರ್ಥಿ ವೃಂದದ ಕುತೂಹಲಕ್ಕೆ ತುಸು ಬ್ರೇಕ್ ಹಾಕಿದರು.

ಶಾಲೆಯ ಕೊಳವೆ ಬಾವಿಯ ಬಳಿ ಲಾರಿಯು ನಿಂತಿತು. ಮಕ್ಕಳೆಲ್ಲರೂ ಓಹೋ ಎಂದು ಕೂಗುತ್ತಾ ಲಾರಿಯ ಹಿಂದೆ ಓಡೋಡುತ್ತಾ ಬಂದರು. ಕೆಲಸ ಮುಗಿಯುವವರೆಗೂ ಯಾರೂ ಮಾತನಾಡದಂತೆ ಶಿಕ್ಷಕರು ತಾಕೀತು ಮಾಡಿದ್ದರು.

ಲಾರಿಯ ಚಾಲಕ ಇಮ್ರಾನ್, ಸಹಾಯಕ ಪಿಂಟೋ ಸೇರಿ ಲಾರಿಯಲ್ಲಿದ್ದ, ವಸ್ತುಗಳನ್ನು ಮೈದಾನದಲ್ಲಿ ರಾಶಿ ಹಾಕಿದರು. ನಿಧಾನ ಇಮ್ರಾನ್ ಸಿಮೆಂಟ್ ಬಳೆಗಳು ಓಡೆದು ಹೋದೀತು ಎಚ್ಚರಿಕೆ ಎಂದರು ಮಾಸ್ಟರ್.

ಇಲ್ಲ ಸಾರ್, ಅವುಗಳನ್ನು ಮರಳಿನ ಮೇಲೆ ಇಳಿಸೋಣ. ನಂತರ ಜಲ್ಲಿ ಕಲ್ಲುಗಳ ಮೇಲೆ ಉರುಳಿಸಿ, ಮಲಗಿಸೋಣ ಎಂದ ಪಿಂಟೋ.

ಈ ಕೆಲಸಕ್ಕೆ ಕೂಲಿಯವರನ್ನು ಕರೆ ತಂದಿಲ್ಲ ಸರ್. ನಾವೇ ಮಾಡಿ ಮುಗಿಸುತ್ತೇವೆೆ ಎಂದ ಚಾಲಕ ಇಮ್ರಾನ್. 'ಸರಿ ಹಾಗೇ ಅಗಲಿ' ಎಂದರು ರವಿ.

ಮಕ್ಕಳು ನೋಡ ನೋಡುತ್ತಿರುವಂತೆ, ಇಮ್ರಾನ್, ಪಿಂಟೋ ಬೋರ್ವೆಲ್ ಸುತ್ತಲೂ 5 ಅಡಿ ಅಗಲದಲ್ಲಿ 4 ಅಡಿ ಆಳವಾದ ಗುಂಡಿ ತೆಗೆದರು.

ರವಿ ಮಾಸ್ಟರ್ ಸೂಚನೆಯಂತೆ ಬೋರ್‌ನ ಕೇಸಿಂಗ್ ಪೈಪ್‌ನ 2 ಇಂಚಿನ ದೂರದಲ್ಲಿ, ಸುತ್ತಲೂ 5 ಅಡಿ ಎತ್ತರಕ್ಕೆ ಕಿರು ಬೆರಳುಗಳ ಗಾತ್ರದ 200 ರಂದ್ರಗಳನ್ನು ಕೊರೆದರು. ಅದರ ಮೇಲೆ ಸೊಳ್ಳೆ ಪರದೆಯನ್ನು ಸುತ್ತಿ ನೈಲಾನ್ ಹಗ್ಗದಿಂದ ಬಿಗಿದರು. ಕೈ ಪಂಪಿನ ಮೇಲ್ಭಾಗವನ್ನು ನಿಧಾನವಾಗಿ ಕಳಚಿಟ್ಟರು. ಬಳಿಕ ಬೋರ್ವೆಲ್ ಸುತ್ತಲೂ 4 ಅಡಿ ಅಗಲದ ಒಂದು ಅಡಿ ಎತ್ತರದ ಸಿಮೆಂಟಿನ ಬಳೆಗಳನ್ನು ಒಂದರ ಮೇಲೊಂದು ಕುಳ್ಳಿರಿಸಿದರು. ಅದರ ಸುತ್ತಲೂ ಜಲ್ಲಿ ಕಲ್ಲುಗಳನ್ನು ತುಂಬಿ ಮುಚ್ಚಿದರು.

ಬಳೆಗಳ ಒಳಭಾಗಕ್ಕೆ ಗುಂಡಿಯ ತಳದಿಂದ ಎರಡು ಅಡಿ ದೊಡ್ಡ ಕಲ್ಲುಗಳನ್ನು ಹಾಕಿದರು. ನಂತರ ಒಂದು ಅಡಿ ಎತ್ತರದವರೆಗೆ ಮುಷ್ಟಿ ಗಾತ್ರದ ಜಲ್ಲಿ ಕಲ್ಲುಗಳನ್ನು ತುಂಬಿದರು. ಮೇಲಿನ ಅರ್ಧ ಅಡಿಯನ್ನು ಸಣ್ಣ ಜಲ್ಲಿ ಕಲ್ಲುಗಳನ್ನು ತುಂಬಿಸಿದರು. ಅದರ ಮೇಲೆ ಸೊಳ್ಳೆಯ ಪರದೆಯಂತಹ ನೈಲಾನ್ ಪರದೆಯನ್ನು ಹಾಸಿದರು. ಅದರ ಮೇಲೆ ಸಣ್ಣ ಜಲ್ಲಿ ಕಲ್ಲು ತೆಳುವಾಗಿ ಹರಡಿದರು. ಇದನ್ನೆಲ್ಲಾ ಪಕ್ಕದಲ್ಲಿ ವಿದ್ಯಾಥರ್ಿಗಳ ಸಮೂಹ ಮೌನವಾಗಿ ವೀಕ್ಷಿಸುತ್ತಿದ್ದರು.

‘ಈ ಕೆಲಸದಿಂದ ಏನು ಲಾಭ ಸಾರ್ ?‘– ವಿದ್ಯಾರ್ಥಿಗಳ ಜತೆಗೆ, ಇಮ್ರಾನ್ ಮತ್ತು ಪಿಂಟೋ ಸಾಮೂಹಿಕವಾಗಿ ಏಕಕಂಠದಲ್ಲಿ ಪ್ರಶ್ನಿಸಿದರು.

ನಮಗೆ ನೀರು ಕೊರತೆಯಾದಾಗ ಅಥವಾ ಪ್ರವಾಹ ಉಕ್ಕಿ ಹರಿದಾಗ ಮಾತ್ರ, ಅದರ ಬಗ್ಗೆ ನೆನಪು ಮಾಡಿಕೊಳ್ಳುತ್ತೇವೆ. ಆದರೆ, ನೀರು ಅತ್ಯಮೂಲ್ಯ ಸಂಪತ್ತು ಎನ್ನುವುದನ್ನು ನೆನಪಿಟ್ಟುಕೊಳ್ಳಬೇಕು. ವಿಜ್ಞಾನ ಎಷ್ಟೇ ಮುಂದುವರಿದರೂ, ಒಂದು ಹನಿ ನೀರನ್ನು ಕೃತಕವಾಗಿ ಸೃಷ್ಟಿಸಲು ಸಾಧ್ಯವಿಲ್ಲ. ಅದುದರಿಂದ ನಾವೆಲ್ಲ ನಾಳೆಗಾಗಿ ಹನಿ ನೀರನ್ನು ವ್ಯರ್ಥ ಮಾಡದೇ ಸಂಗ್ರಹಿಸಬೇಕು. ಎಂದರು ರವಿ ಮಾಸ್ತರ್.

ಅದು ಹೇಗೆ ಸಾರ್ ? ಇಮ್ರಾನ್ ತಲೆಕೆರೆದುಕೊಂಡ.

ಮೈದಾನದಲ್ಲಿ, ಶಾಲೆಯ ಮೇಲ್ಛಾವಣಿಯ ಮೇಲೆ ಬಿದ್ದ ಮಳೆ ನೀರು ಹರಿದು ಹೋಗಿ ವ್ಯರ್ಥವಾಗುತ್ತದೆ. ಆ ನೀರನ್ನು ಚರಂಡಿಯ ಮೂಲಕ ಈಗ ಕೊಳವೆಬಾವಿ ಸುತ್ತ ಮಾಡಿದ್ದೇವಲ್ಲ, ಆ ಇಂಗು ಗುಂಡಿಗೆ ಹರಿಸಿದ್ದಲ್ಲಿ ಅದು ನಿಧಾನವಾಗಿ ಇಂಗಿ ಕೊಳವೆ ಬಾವಿ ಸೇರುತ್ತದೆ. ಇಡೀ ಮಳೆಗಾಲದ ನೀರು ಇದರ ಮೂಲಕ ಬೋರ್ವೆಲ್‌ಗೆ ಮರುಪೂರಣವಾಗುತ್ತದೆ. ಇದರಿಂದ ಜಲಮಟ್ಟದ ಹೆಚ್ಚಾಗುತ್ತದೆ ಎಂದರು ರವಿ.

ಶಿಕ್ಷಕರ ಮಾತಿಗೆ ಮಕ್ಕಳು ಮೌನವಾಗಿ ತಲೆದೂಗಿದರು. ಎಲ್ಲರೂ ಸೇರಿ ಮೈದಾನದ ಸುತ್ತಲೂ ನೀರಿನ ಹರಿವನ್ನು ಬಾವಿಯ ಕಡೆ ತಿರುಗಿಸಲು ಚರಂಡಿ ತೆಗೆದರು. ನಮ್ಮ ಮನೆಗಳಲ್ಲೂ ನೀರಿನ ಸಮಸ್ಯೆ ಇದೆ ಸಾರ್. ನಮ್ಮಲ್ಲಿರುವ ಸ್ವಸಹಾಯ ಸಂಘಗಳು ಸೇರಿ ತೆರೆದ ಬಾವಿಗೂ ಇದೇ ರೀತಿ ನೀರಿನ ಮರುಪೂರಣ ಮಾಡಬಹುದೇ ? ಸಾರ್ ಕೇಳಿದ ಪಿಂಟೋ. 'ಖಂಡಿತ. ಪ್ರತೀ ಮನೆಯಲ್ಲಿಯೂ, ಕಚೇರಿ, ಶಾಲಾ-ಕಾಲೇಜುಗಳಲ್ಲಿ ಇಂತಹ ಪ್ರಯತ್ನಗಳು ನಿರಂತರವಾಗಿ ನಡೆದ್ದಲ್ಲಿ ಕುಡಿಯುವ ನೀರಿನ ಸಮಸ್ಯೆ ಪರಿಹಾರವಾಗುತ್ತದೆ ಎಂದರು ರವಿ.

***

ಕೆಲ ದಿನಗಳ ಬಳಿಕ ಮಳೆಗಾಲ ಆರಂಭವಾಯಿತು. ಚರಂಡಿಯಲ್ಲಿ ಹರಿದ ನೀರು ಬೋರ್ವೆಲ್‌ ಸುತ್ತ ನೀರು ಶೇಖರಣೆಯಾಗಿ ನಿಧಾನವಾಗಿ ಇಂಗಲು ಆರಂಭವಾಯಿತು. ಹಿಂದಿನ ವರ್ಷ ಬಿಸಿಯೂ ಊಟಕ್ಕೆ ನೀರನ್ನು ತರುವುದಕ್ಕಾಗಿ ಬೋರ್‌ವೆಲ್‌ ಕಂಬಿ ಒತ್ತಿ ಒತ್ತಿ ಕೈ ಸೋತು ಹೋಗಿತ್ತು. ಆದರೆ, ಈಗ ಒಂದೆರಡು ಬಾರಿ ಕೈ ಪಂಪ್‌ ಅಲುಗಾಡಿಸಿದರೆ, ಧಾರಾಳ ನೀರು ಬರುತ್ತಿದೆ.

ಈ ಯಶೋಗಾಥೆಯ ತಾತ್ಪರ್ಯ ಏನು ಗೊತ್ತಾ ?ಹನಿ ನೀರು ಬಂಗಾರ. ಅದನ್ನು ವ್ಯರ್ಥ ಮಾಡದೆ ಸಂರಕ್ಷಿಸಿ. ಎಲ್ಲಾ ಕಡೆ ನೀರುಕೊಯ್ಲು ಅಳವಡಿಸಿ. ಕೊರೊನಾ ಬಂದಿದೆ ಎಂದು ನೀರನ್ನು ಮರೆಯಬೇಡಿ. ಮಕ್ಕಳು ಈ ರಜೆಯಲ್ಲೇ ಮನೆಯಲ್ಲಿ ಕುಳಿತೇ, ಮಳೆ ನೀರು ಹಿಡಿಯುವ, ಇಂಗಿಸುವ ಯೋಚನೆ ಮಾಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.