ನವದೆಹಲಿ: ಹೆದ್ದಾರಿಗಳಲ್ಲಿ ಹಸಿರು ಹೊದಿಕೆ ನಿರ್ವಹಣೆಯ ಮಾಹಿತಿ ಸಲ್ಲಿಸದ ಮತ್ತು ವಿವಿಧ ಯೋಜನೆಗಳಿಗೆ ಅಪಾರ ಸಂಖ್ಯೆಯ ಮರಗಳ ತೆರವಿಗೆ ಪ್ರಸ್ತಾವ ಸಲ್ಲಿಸಿರುವ ಕಾರಣಕ್ಕೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್ಜಿಟಿ) ಕರ್ನಾಟಕ, ಮಣಿಪುರ ರಾಜ್ಯಗಳನ್ನು ತೀವ್ರ ತರಾಟೆ ತೆಗೆದುಕೊಂಡಿದೆ. ಎರಡೂ ರಾಜ್ಯಗಳಿಗೂ ತಲಾ ₹50,000 ದಂಡ ವಿಧಿಸಿದೆ.
ಎನ್ಜಿಟಿ ಹಂಗಾಮಿ ಮುಖ್ಯಸ್ಥರಾದ ನ್ಯಾಯಮೂರ್ತಿ ಜವಾದ್ ರಹೀಂ ಅವರ ನೇತೃತ್ವದ ನ್ಯಾಯಪೀಠವು, ಹೆದ್ದಾರಿಗಳಲ್ಲಿ ಎಲ್ಲೆಲ್ಲಿ ಮರಗಳನ್ನು ಕಡಿಯಲಾಗಿದೆ ಮತ್ತು ಯಾವ ರೀತಿ ಪರಿಹಾರ ಕಾರ್ಯ ಕೈಗೊಳ್ಳಲಾಗಿದೆ ಎನ್ನುವ ಬಗ್ಗೆ ಕರ್ನಾಟಕ, ಮಣಿಪುರ ರಾಜ್ಯಗಳ ಬಳಿ ಸೂಕ್ತ ಮಾಹಿತಿಗಳಿಲ್ಲ ಎಂದು ಬೊಟ್ಟು ಮಾಡಿತು.
ಮಾಹಿತಿ ಸಲ್ಲಿಸಲು ಎರಡೂ ರಾಜ್ಯಗಳಿಗೆ ನ್ಯಾಯಪೀಠ ಒಂದು ವಾರ ಗಡುವು ನೀಡಿತು. ಅಷ್ಟರಲ್ಲಿ ಮಾಹಿತಿ ಸಲ್ಲಿಸಲು ವಿಫಲವಾದರೆ ತಪ್ಪಿಗೆ ತಕ್ಕ ಬೆಲೆ ತೆರಬೇಕಾಗುತ್ತದೆ ಎನ್ನುವ ಎಚ್ಚರಿಕೆಯನ್ನೂ ಕೊಟ್ಟಿತು.
ಹೆದ್ದಾರಿಗಳ ಉದ್ದಕ್ಕೂ ಹಸಿರು ಹೊದಿಕೆ ನಿರ್ವಹಿಸುವ ಸಂಬಂಧ ವಕೀಲ ಸುಶೀಲ್ ರಾಜ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಎನ್ಜಿಟಿ ವಿಚಾರಣೆ ನಡೆಸುತ್ತಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.