ಮೆಟ್ರೊ ಪ್ರಯಾಣ ದರವನ್ನು ಶೇ 47ರಷ್ಟು ಹೆಚ್ಚಿಸಿ ಬಿಎಂಆರ್ಸಿಎಲ್ ಆದೇಶ ಹೊರಡಿಸಿದೆ. ಭಾರಿ ಪ್ರಮಾಣದ ಹೆಚ್ಚಳದ ಬಗ್ಗೆ ಅಚ್ಚರಿ ಹಾಗೂ ವಿರೋಧ ವ್ಯಕ್ತವಾಗಿವೆ. ದರ ಏರಿಕೆಯ ಪ್ರಮಾಣದ ಬಗ್ಗೆ ಪ್ರಯಾಣಿಕರಲ್ಲಿ ಗೊಂದಲವೂ ಇದೆ. ಮೆಟ್ರೊ ದರ ಹೆಚ್ಚಳವು ಹೇಗೆ ನಿರ್ಧಾರವಾಗುತ್ತದೆ, ಅದರಲ್ಲಿ ಯಾರು ಯಾರು ಭಾಗಿಯಾಗಿರುತ್ತಾರೆ, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಪಾತ್ರ ಏನು ಎನ್ನುವುದರ ಬಗ್ಗೆ ಇಲ್ಲಿದೆ ಮಾಹಿತಿ
‘ನಮ್ಮ ಮೆಟ್ರೊ’ ಪ್ರಯಾಣ ದರವನ್ನು ಶೇ 47ರಷ್ಟು ಹೆಚ್ಚಿಸಲಾಗಿದೆ ಎಂದು ಬೆಂಗಳೂರು ಮೆಟ್ರೊ ರೈಲು ನಿಗಮ (ಬಿಎಂಆರ್ಸಿಎಲ್) ತಿಳಿಸಿದೆ. ಈ ಮೂಲಕ ದೇಶದಲ್ಲಿಯೇ ಅತಿ ದುಬಾರಿ ಪ್ರಯಾಣ ದರವನ್ನು ಹೊಂದಿರುವ ಮೆಟ್ರೊ ಇದಾಗಿದೆ. ಪ್ರಯಾಣಿಕರಿಂದ ಪ್ರಯಾಣ ದರವನ್ನು ಪಡೆಯುವ ಬದಲು ಬಂಡವಾಳ ಕ್ರೋಡೀಕರಣದ ಉದ್ದೇಶದಿಂದ ದರ ಹೆಚ್ಚಳ ಮಾಡಲಾಗಿದೆ ಎಂಬ ಆರೋಪಕ್ಕೆ ನಿಗಮವು ಗುರಿಯಾಗಿದೆ.
ಪರಿಷ್ಕೃತ ದರದಲ್ಲಿ ಗೊಂದಲ: ಸರಾಸರಿ
ಶೇ 47ರಷ್ಟು ದರ ಹೆಚ್ಚಳ ಮಾಡಲಾಗಿದೆ. ಅದರಲ್ಲಿ ಸ್ಮಾರ್ಟ್ಕಾರ್ಡ್ ಹೊಂದಿರುವವರಿಗೆ ಶೇ 5
ರಿಯಾಯಿತಿ ನೀಡಲಾಗಿದೆ. ಜನದಟ್ಟಣೆ ಕಡಿಮೆ ಇರುವ ಅವಧಿಯಲ್ಲಿ (ನಾನ್ ಪೀಕ್ ಅವರ್) ಸಂಚರಿಸಿದರೆ ಹೆಚ್ಚುವರಿಯಾಗಿ ಶೇ 5
ರಿಯಾಯಿತಿ ದೊರೆಯಲಿದೆ. ರಾಷ್ಟ್ರೀಯ ಹಬ್ಬಗಳು ಮತ್ತು ಎಲ್ಲ ಭಾನುವಾರ ಶೇ 10 ರಿಯಾಯಿತಿ ಇರುತ್ತದೆ. ರಿಯಾಯಿತಿಗಳನ್ನು ಕಳೆದರೆ ಶೇ 40ರಷ್ಟು ಹೆಚ್ಚಳ ಮಾಡಲಾಗಿದೆ ಎಂದು ಬಿಎಂಆರ್ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ. ಸ್ಮಾರ್ಟ್ ಕಾರ್ಡ್ನಲ್ಲಿನ ಕನಿಷ್ಠ ಮೊತ್ತವನ್ನು ₹50ರಿಂದ ₹90ಕ್ಕೆ ಏರಿಸಲಾಗಿದೆ.
ಕಿ.ಮೀ ಆಧಾರದಲ್ಲಿ ಪ್ರಯಾಣ ದರವನ್ನು ಹೆಚ್ಚಿಸಿ, ಅದನ್ನು ಸ್ಟೇಷನ್ಗಳಿಗೆ ಅನ್ವಯ ಮಾಡುತ್ತಿರುವುದರಿಂದ ಪ್ರಯಾಣಿಕರಿಗೆ ಗೊಂದಲ ಉಂಟಾಗಿದೆ. ಶೇ 47ರಷ್ಟು ಹೆಚ್ಚಳ ಎಂದು ಹೇಳಿದ್ದರೂ ಹಲವು ಕಡೆಗಳಲ್ಲಿ ಹಿಂದಿನ ದರದ ದುಪ್ಪಟ್ಟು (ಶೇ 100ರಷ್ಟು ಅಧಿಕ) ನೀಡಬೇಕಾಗಿದೆ.
ದರ ಪರಿಷ್ಕರಣೆ ಪ್ರಕ್ರಿಯೆ ಹೇಗೆ?: 2011ರಲ್ಲಿ ಮೆಟ್ರೊ ಸಂಚಾರ ಆರಂಭವಾಗಿದ್ದು, 2017ರಲ್ಲಿ ದರ ಪರಿಷ್ಕರಣೆ ಮಾಡಲಾಗಿತ್ತು. ಆದರೆ, ಆಗ ದರ ನಿಗದಿಗಾಗಿ ಸಮಿತಿ ರಚಿಸದೇ ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಂದ ಒಪ್ಪಿಗೆ ಪಡೆದು ಪ್ರಯಾಣ ದರವನ್ನು ಶೇ 15ರಷ್ಟು ಹೆಚ್ಚಳ ಮಾಡಲಾಗಿತ್ತು.
ನಿರ್ವಹಣೆ ವೆಚ್ಚ, ವೇತನ ವೆಚ್ಚ, ಇಂಧನ ವೆಚ್ಚ, ಸಾಮಗ್ರಿ ವೆಚ್ಚಗಳು ಪ್ರತಿವರ್ಷ ಏರಿಕೆಯಾಗುತ್ತಿವೆ. ಏಳು ವರ್ಷಗಳಿಂದ ‘ನಮ್ಮ ಮೆಟ್ರೊ’ ದರ ಪರಿಷ್ಕರಣೆ ಮಾಡಿಲ್ಲ ಎಂದು ಬಿಎಂಆರ್ಸಿಎಲ್ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿತ್ತು. ಮೆಟ್ರೊ ರೈಲ್ವೆ (ಕಾರ್ಯಾಚರಣೆ ಮತ್ತು ನಿರ್ವಹಣೆ) ಕಾಯ್ದೆ, 2002ರ ಸೆಕ್ಷನ್ 33 ಮತ್ತು 34ರ ಅಡಿಯಲ್ಲಿ ಕೇಂದ್ರ ಸರ್ಕಾರವು ಮೂವರು ಸದಸ್ಯರನ್ನು ಒಳಗೊಂಡ ದರ ನಿಗದಿ ಸಮಿತಿಯನ್ನು ರಚಿಸಿತ್ತು.
ಬಿಎಂಆರ್ಸಿಎಲ್ನ ಮೊದಲ ದರ ನಿಗದಿ ಸಮಿತಿ ಇದಾಗಿತ್ತು. ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ
ಆರ್. ತರಣಿ, ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಸತೀಂದರ್ ಪಾಲ್ ಸಿಂಗ್, ನಿವೃತ್ತ ಐಎಎಸ್ ಅಧಿಕಾರಿ ಆರ್.ವಿ. ರಮಣ ರೆಡ್ಡಿ ದರ ನಿಗದಿ ಸಮಿತಿಯ ಸದಸ್ಯರಾಗಿದ್ದರು.
ದರ ಪರಿಷ್ಕರಣೆ ಬಗ್ಗೆ ನಾಗರಿಕರು ಸಲಹೆ ನೀಡುವಂತೆ ಸಮಿತಿಯು ಅಕ್ಟೋಬರ್ 4ರಿಂದ 21ರವರೆಗೆ ಅವಕಾಶ ನೀಡಿತ್ತು. ಆನಂತರ ಅ.28ರವರೆಗೆ ಈ ಅವಧಿಯನ್ನು ವಿಸ್ತರಿಸಿತ್ತು. 2000ಕ್ಕೂ ಅಧಿಕ ಸಲಹೆಗಳು ಬಂದಿದ್ದವು. ಸಂಘ ಸಂಸ್ಥೆಗಳ ಪದಾಧಿಕಾರಿಗಳೊಂದಿಗೆ, ತಜ್ಞರೊಂದಿಗೆ ಚರ್ಚೆ ನಡೆಸಿತ್ತು. ಮೂಲ ಸೌಕರ್ಯ ಒದಗಿಸುವ ವೆಚ್ಚ, ಇಂಧನ ವೆಚ್ಚ, ಅಧಿಕಾರಿಗಳು ಮತ್ತು ಸಿಬ್ಬಂದಿಯ
ವೇತನದ ವೆಚ್ಚ, ಮೆಟ್ರೊ ನಿರ್ವಹಣೆ ವೆಚ್ಚಗಳನ್ನೆಲ್ಲ ಪರಿಶೀಲಿಸಿತ್ತು. ಈ ಸಮಿತಿಯ ಅವಧಿ ಮುಕ್ತಾಯದ
ಕೊನೇ ದಿನವಾದ ಡಿ.16ರಂದು ಬಿಎಂಆರ್ಸಿಎಲ್ಗೆ
ವರದಿ ಸಲ್ಲಿಸಿತ್ತು.
ಕೇಂದ್ರ ರೈಲ್ವೆ ಸಚಿವಾಲಯದ ಕಾರ್ಯದರ್ಶಿ ನೇತೃತ್ವದಲ್ಲಿ ಜ.17ರಂದು ಮಂಡಳಿ ಸಭೆ ನಡೆದಿತ್ತು. ಕೇಂದ್ರ ಮತ್ತು ರಾಜ್ಯ ಸರ್ಕಾರದ ಕಾರ್ಯದರ್ಶಿಗಳು, ಬಿಎಂಆರ್ಸಿಎಲ್ ವ್ಯವಸ್ಥಾಪಕ ನಿರ್ದೇಶಕರು, ಅಧಿಕಾರಿಗಳು ಪಾಲ್ಗೊಂಡಿದ್ದ ಸಭೆಯಲ್ಲಿ ದರ ನಿಗದಿ ಸಮಿತಿಯ ಶಿಫಾರಸುಗಳಿಗೆ ಒಪ್ಪಿಗೆ ನೀಡಲಾಗಿತ್ತು.
ಆದರೆ, ದೆಹಲಿಯಲ್ಲಿ ಚುನಾವಣೆ ಮತ್ತು ಇತರ ಹಲವು ಕಾರಣಗಳಿಂದ ಪರಿಷ್ಕೃತ ದರ ಜಾರಿಯಾಗಿರಲಿಲ್ಲ. ಈ ನಡುವೆ ದರ ನಿಗದಿ ಬಗ್ಗೆ ಹೆಚ್ಚಿನ ಮಾಹಿತಿ ನೀಡುವಂತೆ ಕೇಂದ್ರ ಸರ್ಕಾರ ಕೇಳಿತ್ತು. ಬಿಎಂಆರ್ಸಿಎಲ್ ಮಾಹಿತಿಯನ್ನು ನೀಡಿತ್ತು. ದೆಹಲಿ ಚುನಾವಣೆ ಮುಗಿದು ಫಲಿತಾಂಶ ಹೊರಬಿದ್ದ ಮರುದಿನವೇ ಪರಿಷ್ಕೃತ ದರವನ್ನು ಜಾರಿ ಮಾಡುವ ಆದೇಶವು (ಫೆ.8) ಬಿಎಂಆರ್ಸಿಎಲ್ನಿಂದ ಹೊರ ಬಿದ್ದಿದ್ದು, ಫೆ.9ರಿಂದಲೇ ಹೊಸ ದರ ಜಾರಿಯಾಗಿದೆ.
ಕನಿಷ್ಠ ದರ ₹10 ಇದ್ದಿದ್ದನ್ನು ಹಾಗೇ ಉಳಿಸಿಕೊಂಡಿರುವ ಬಿಎಂಆರ್ಸಿಎಲ್ ಗರಿಷ್ಠ ದರ ₹60 ಇದ್ದಿದ್ದನ್ನು ₹90ಕ್ಕೆ ಏರಿಕೆ ಮಾಡಿದೆ. ಚೆನ್ನೈ, ಮುಂಬೈ, ದೆಹಲಿ, ಹೈದರಾಬಾದ್, ಕೋಲ್ಕತಾ ಮುಂತಾದ ಮಹಾನಗರಗಳಿಗಿಂತ ಶೇ 40ರಿಂದ ಶೇ 60ರಷ್ಟು ಅಧಿಕ ದರವನ್ನು ಬೆಂಗಳೂರಿನ ಮೆಟ್ರೊ ಪ್ರಯಾಣಿಕರು ಪಾವತಿಸಬೇಕಿದೆ.
ಕೋಲ್ಕತ್ತ ಅತಿ ಕಡಿಮೆ
ಅರ್ಧ ಶತಮಾನದ ಇತಿಹಾಸ ಹೊಂದಿರುವ, ಕೋಲ್ಕತ್ತ ಮೆಟ್ರೊ ದರವು ದೇಶದಲ್ಲಿಯೇ ಅತಿ ಕಡಿಮೆ ಇದೆ. ನೀಲಿ, ಹಸಿರು, ನೇರಳೆ, ಕಿತ್ತಳೆ, ಹಳದಿ, ಗುಲಾಬಿ ಮಾರ್ಗಗಳನ್ನು ಹೊಂದಿರುವ ಇಲ್ಲಿ ಕನಿಷ್ಠ ದರವು 2 ಕಿ.ಮೀ. ವರೆಗೆ ₹5 ಮಾತ್ರ ಇದೆ. ಅಲ್ಲಿ 25 ಕಿ.ಮೀ.ಗೆ ₹25 ಇದ್ದರೆ, ಮುಂಬೈಯಲ್ಲಿ ₹50 ಇದೆ. ಬೆಂಗಳೂರಿನ ‘ನಮ್ಮ ಮೆಟ್ರೊ’ದಲ್ಲಿ ₹90 ನೀಡಬೇಕಾಗುತ್ತದೆ. ವಾಣಿಜ್ಯ ನಗರಿ ಮುಂಬೈಯಲ್ಲಿ ಗರಿಷ್ಠ ₹80, ಚೆನ್ನೈಯಲ್ಲಿ ಗರಿಷ್ಠ ₹50, ಹೈದರಾಬಾದ್ ಮತ್ತು ದೆಹಲಿಯಲ್ಲಿ ಗರಿಷ್ಠ ದರ ₹60 ಇದೆ.
ದರ ಏರಿಕೆಯ ಸುತ್ತಲಿನ ರಾಜಕಾರಣ
ಮೆಟ್ರೊ ಪ್ರಯಾಣ ದರ ಏರಿಕೆಯು ಹಲವು ಗೊಂದಲ ಹಾಗೂ ಪ್ರಶ್ನೆಗಳಿಗೂ ಕಾರಣವಾಗಿದೆ. ಪ್ರಯಾಣ ದರ ಏರಿಕೆಗೆ ಹೊಣೆ ರಾಜ್ಯ ಸರ್ಕಾರವೋ, ಕೇಂದ್ರ ಸರ್ಕಾರವೋ ಎನ್ನುವುದರ ಬಗ್ಗೆಯೂ ಹಲವು ರೀತಿಯ ಚರ್ಚೆಗಳು ನಡೆಯುತ್ತಿವೆ.
ಬಿಎಂಆರ್ಸಿಎಲ್ ದರ ಏರಿಕೆಗಾಗಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದ ನಂತರ ಮೂವರು ಸದಸ್ಯರಿದ್ದ ದರ ನಿಗದಿ ಸಮಿತಿ ರಚಿಸಲಾಗಿತ್ತು. ನಂತರ ನಮ್ಮ ಮೆಟ್ರೊ ಪರಿಷ್ಕೃತ ಪ್ರಯಾಣ ದರ ನಿಗದಿಯ ಮಾನದಂಡಗಳ ಬಗ್ಗೆ ಅಧ್ಯಯನ ಮಾಡಲು ಹೆಚ್ಚಿನ ಮಾಹಿತಿ ನೀಡುವಂತೆ ಕೇಂದ್ರ ಸರ್ಕಾರವು ಬಿಎಂಆರ್ಸಿಎಲ್ಗೆ ಸೂಚಿಸಿತ್ತು.
ಈ ನಡುವೆ, ‘ಈಗಾಗಲೇ ಬಸ್ ದರ ಏರಿಕೆ ಮಾಡಲಾಗಿದ್ದು, ಮೆಟ್ರೊ ದರವನ್ನೂ ಏರಿಕೆ ಮಾಡಬಾರದು’ ಎಂದು ಸಂಸದ ಪಿ.ಸಿ.ಮೋಹನ್ ಆಗ್ರಹಿಸಿದ್ದರು. ‘ಈಗಿರುವ ದರವನ್ನೇ ಮುಂದುವರಿಸಬೇಕು ಎಂದು ಕೇಂದ್ರ ರೈಲ್ವೆ ಸಚಿವಾಲಯದ ಮೇಲೆ ಒತ್ತಡ ಹಾಕಿದ್ದೇನೆ’ ಎಂದು ಅವರು ತಿಳಿಸಿದ್ದರು. ಮೆಟ್ರೊ ದರ ಏರಿಕೆಯು ಫೆ.1ರಿಂದಲೇ ಜಾರಿಗೆ ಬರಬೇಕಿತ್ತು. ಆದರೆ, ಕೇಂದ್ರ ಸರ್ಕಾರ ಅದನ್ನು ತಡೆಹಿಡಿದಿದೆ ಎಂದೂ ಹೇಳಿಕೊಂಡಿದ್ದರು.
ಇನ್ನೊಂದೆಡೆ, ದರ ಏರಿಕೆಯ ಮಾತುಗಳು ಕೇಳಿಬರುತ್ತಿರುವಾಗಲೇ ಈ ಬಗ್ಗೆ ಮಾತನಾಡಿದ್ದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ‘ಕೇಂದ್ರ ಸರ್ಕಾರವು ಅದಕ್ಕಾಗಿ ನಿವೃತ್ತ ನ್ಯಾಯಮೂರ್ತಿ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಿದೆ; ಅದರಲ್ಲಿ ರಾಜ್ಯ ಸರ್ಕಾರವು ಹಸ್ತಕ್ಷೇಪ ಮಾಡುವುದಿಲ್ಲ’ ಎಂದಿದ್ದರು.
‘ನಮ್ಮ ಮೆಟ್ರೊ ಪ್ರಯಾಣ ದರವನ್ನು ಹೆಚ್ಚಿಸುವ ಬದಲು ಬಿಎಂಆರ್ಸಿಎಲ್ನಲ್ಲಿ ಅನಗತ್ಯ ವೆಚ್ಚಗಳನ್ನು ಕಡಿಮೆ ಮಾಡುವ ಮೂಲಕ ಆದಾಯ ಹೆಚ್ಚಿಸಲು ಕ್ರಮ ಕೈಗೊಳ್ಳಬೇಕು’ ಎಂದು ಆಡಳಿತ ಮಂಡಳಿಗೆ ಬಿಎಂಆರ್ಸಿಎಲ್ ನೌಕರರ ಯೂನಿಯನ್ ಪತ್ರ ಬರೆದಿತ್ತು. ಪ್ರಯಾಣ ದರ ಹೆಚ್ಚಿಸದೇ ಆದಾಯ ಹೆಚ್ಚಿಸುವುದು ಹೇಗೆ ಎಂಬ ಬಗ್ಗೆ ಸಲಹೆಗಳನ್ನೂ ನೀಡಿತ್ತು. ಈ ಎಲ್ಲದರ ನಡುವೆಯೇ ದರ ಹೆಚ್ಚಳ ಜಾರಿಯಾಗಿ ಪ್ರಯಾಣಿಕರ ಮೇಲೆ ಭಾರಿ ಹೊರೆ ಬಿದ್ದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.