ADVERTISEMENT

ಹಿಮಾಲಯದಲ್ಲಿ ರ‌್ಯಾಲಿಯ ಸವಾಲು!

ನಾಗೇಶ್ ಶೆಣೈ ಪಿ.
Published 9 ಅಕ್ಟೋಬರ್ 2011, 19:30 IST
Last Updated 9 ಅಕ್ಟೋಬರ್ 2011, 19:30 IST

ಪಶ್ಚಿಮ ಹಿಮಾಲಯದ ಕಡಿದಾದ ಪರ್ವತ ಪ್ರದೇಶಗಳಲ್ಲಿ ಸಾಗುವ ಮೋಟಾರ್ ರ‌್ಯಾಲಿ ವಾಹನ ಚಾಲಕರಿಗೊಂದು ಸವಾಲು.

ಈ ತಿಂಗಳ 11 ರಿಂದ 16ರ ವರೆಗೆ ನಡೆಯಲಿರುವ ಈ ಬಾರಿಯ- 13ನೇ ಮಾರುತಿ ಸುಝುಕಿ ರೇಡ್ ದಿ ಹಿಮಾಲಯ ದ್ವಿಚಕ್ರ ಮತ್ತು ಚತುಶ್ಚಕ್ರ ವಾಹನಗಳ ರ‌್ಯಾಲಿ ಕೆಲವು ವೈಶಿಷ್ಟಗಳನ್ನು ಹೊಂದಿದೆ.

ಹಿಮಾಲಯನ್ ಮೋಟರ್ ಸ್ಪೋರ್ಟ್ಸ್ ನಡೆಸುವ ಈ ರ‌್ಯಾಲಿಯ ಚತುಶ್ಚಕ್ರ ಎಕ್ಸ್‌ಟ್ರೀಮ್ ವಿಭಾಗದಲ್ಲಿ ಕಳೆದ ವರ್ಷ ಗೆದ್ದವರು ಸುರೇಶ್ ರಾಣಾ ಮತ್ತು ಅಶ್ವಿನ್ ನಾಯಕ್. ಹಿಮಾಚಲ ಪ್ರದೇಶದವರೇ ಆದ ರಾಣಾ ಅಲ್ಲಿನ ಪರ್ವತ ಶ್ರೇಣಿಯ ಆಳ-ಅಗಲಗಳನ್ನೆಲ್ಲ ಬಲ್ಲವರು. ಆರು ಸಲ ಚಾಂಪಿಯನ್ ಆದವರು.

`ಕಳೆದ ಸಲ ಅವರು ಇದು ಬಹುಶಃ ನನ್ನ ಕೊನೆಯ ಹಿಮಾಲಯನ್ ರ‌್ಯಾಲಿ~ ಎಂದಿದ್ದರು. ಆದರೆ ಸಾಕು ಎನಿಸಿದರೂ, ಈ ರ‌್ಯಾಲಿ ಅವರನ್ನು ಸೆಳೆಯುವುದನ್ನು ಬಿಟ್ಟಿಲ್ಲ.

`ಈ ಬಾರಿ ದೀರ್ಘ ಮಾರ್ಗವಿದೆ. ನಸುಕಿನ 3 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಚಲಾಯಿಸುವ ಸವಾಲೂ ಇದೆ.
 

ಇವುಗಳಲ್ಲಿ ರಂಗ್ದೂಮ್ ಮಾರ್ಗ ಅತಿ ಪ್ರಯಾಸದ್ದು~ ಎನ್ನುತ್ತಾರೆ ಮಂಗಳೂರಿನ ಅಶ್ವಿನ್ ನಾಯಕ್. ಅವರ ವಾಹನ ಮಾರುತಿ ಜಿಪ್ಸಿ. ರ‌್ಯಾಲಿಯಲ್ಲಿ ಶೇ. 70ರಷ್ಟು ಜಿಪ್ಸಿ ವಾಹನಗಳಿರುತ್ತವೆ. ಮಹಿಂದ್ರ ವಾಹನಗಳದ್ದು ನಂತರದ ಪಾಲು.

ಈ ರ‌್ಯಾಲಿಯಲ್ಲಿ ರಾಣಾ- ಅಶ್ವಿನ್ ಜತೆಯಾಗಿರುವುದು ಇದು ಮೂರನೇ ಬಾರಿ. ಇದೇ ವರ್ಷದ  ಮಾರ್ಚ್‌ನಲ್ಲಿ ನಡೆದ ಪಂಜಾಬ್‌ನಲ್ಲಿ ನಡೆದ ಸಜೋಬಾ ರ‌್ಯಾಲಿಯಲ್ಲೂ ಈ ಜೋಡಿ ಜಯಶಾಲಿಯಾಗಿದ್ದರು.

ಈ ಬಾರಿ ವಿವಿಧ ವಿಭಾಗಗಳಲ್ಲಿ ಒಟ್ಟು 291 ಮಂದಿ ಸ್ಪರ್ಧಿಸುತ್ತಿದ್ದಾರೆ. ಚತುಶ್ಚಕ್ರ ಎಕ್ಸ್‌ಟ್ರೀಮ್ ವಿಭಾಗದಲ್ಲಿ 92 ಸ್ಪರ್ಧಿಗಳು ಕಣದಲ್ಲಿದ್ದಾರೆ.         
 
ದ್ವಿಚಕ್ರ (ಎಕ್ಸ್‌ಟ್ರೀಮ್ ಮಾತ್ರ) 35 ಬೈಕ್‌ಗಳು ರೇಸ್‌ಗಿಳಿಯಲಿವೆ. ಇವರಲ್ಲಿ ಐವರು ವಿದೇಶಿ ಸ್ಪರ್ಧಿಗಳು ಇದ್ದು, ಕಡಿದಾದ ತಿರುವುಗಳಲ್ಲಿ ಸಾಮರ್ಥ್ಯ ಪಣಕ್ಕಿಡಲಿದ್ದಾರೆ. ಅಡ್ವೆಂಚರ್ (ಚತುಶ್ಚಕ್ರ) ಕ್ಲಾಸ್‌ನಲ್ಲಿ 164 ವಾಹನಗಳಿವೆ.

ಅಡ್ವೆಂಚರ್ ವಿಭಾಗದಲ್ಲಿ ಬೆಂಗಳೂರಿನ 13 ಮಂದಿ ಸ್ಪರ್ಧಿಗಳು, ಚಿಕ್ಕಮಗಳೂರು, ಮೈಸೂರಿನ ತಲಾ ಒಬ್ಬರು ಸ್ಪರ್ಧಿಸುತ್ತಿದ್ದಾರೆ. ದ್ವಿಚಕ್ರ ವಾಹನ ವಿಭಾಗದಲ್ಲಿ ಬೆಂಗಳೂರಿನ ಮೂವರು ಭಾಗವಹಿಸುತ್ತಿರ‌್ದುವುದು ಒಂದು ವಿಶೇಷ.

ಮೊದಲ ಬಾರಿ `ಡಬಲ್ ರೂಟ್ ಫಾರ್ಮ್ಯಾಟ್~ ಅಳವಡಿಸಲಾಗುತ್ತಿದೆ. ಎಕ್ಸ್‌ಟ್ರೀಮ್ (ಇದು ಕಠಿಣ ನಿಯಮಗಳನ್ನು ಒಳಗೊಂಡಿದೆ) ಮತ್ತು ಅಡ್ವೆಂಚರ್ ಕ್ಲಾಸ್ ವಿಭಾಗದ ರ‌್ಯಾಲಿ ಸ್ಪರ್ಧಿಗಳು ಮೊದಲ ಮತ್ತು ಕೊನೆಯ ಎರಡು ದಿನ ಒಂದೇ ದಾರಿ ಕ್ರಮಿಸುತ್ತಾರೆ, ಮಧ್ಯದ ಎರಡು ದಿನ ಪ್ರತ್ಯೇಕ ರ‌್ಯಾಲಿ ಮಾರ್ಗದಲ್ಲಿ ಸ್ಪರ್ಧಿಗಳು ಕ್ರಮಿಸಬೇಕಾಗುತ್ತದೆ.

ಎಕ್ಸ್‌ಟ್ರೀಮ್ ವಿಭಾಗದ ಸ್ಪರ್ಧಿಗಳು ಶಿಮ್ಲಾ- ಮಂಡಿ- ಕುಲ್ಲು- ಕ್ರಮಿಸಿ ಮನಾಲಿಯಲ್ಲಿ ತಂಗುವರು. ಎರಡನೇ ಲೆಗ್‌ನಲ್ಲಿ ರಮ್ಯತಾಣ ರೊಹ್ತಾಂಗ್ ಪಾಸ್‌ನಿಂದ ಲೇಹ್‌ವರೆಗೆ ಸುದೀರ್ಘ ದಾರಿ ಕ್ರಮಿಸಬೇಕಾಗುತ್ತದೆ.

ಲೇಹ್‌ನಲ್ಲಿ ವಿಶ್ವದ ಅತ್ಯಂತ ಎತ್ತರದ ಚಾಲನಾ ಪ್ರದೇಶವಿರುವ 18,300 ಅಡಿ ಎತ್ತರದ ಕಾರ್ಡುಂಗ್-ಲಾ ಮೊದಲಾದ ದುರ್ಗಮ ಪ್ರದೇಶಗಳನ್ನು ಕ್ರಮಿಸಬೇಕಾಗುತ್ತದೆ.
 
ನಂತರ ಕಾರ್ಗಿಲ್, ರಂಗ್ದೂಮ್, ಪೆಂಝಿ-ಲಾ ಮೂಲಕ ಶ್ರೀನಗರದಲ್ಲಿ, 16ರಂದು ರ‌್ಯಾಲಿ ಕೊನೆಗೊಳ್ಳಲಿದೆ. `ಈ ಬಾರಿಯೂ ಸಾಕಷ್ಟು ಪರಿಶ್ರಮ ಪಡುತ್ತಿದ್ದೇನೆ. ರಾಣಾ ಜತೆಗಾರರಾಗಿರುವುದು ನನಗೆ ಅನುಕೂಲವೇ ಆಗಿದೆ~ ಎನ್ನುತ್ತಾರೆ ಅನುಭವಿ ಸ್ಪರ್ಧಿ ಅಶ್ವಿನ್.

ಆದರೆ ಕಳೆದ ವರ್ಷ ಒಟ್ಟಾರೆ ಸ್ಪರ್ಧೆಯನ್ನು ಮೊದಲ ಬಾರಿ ಮುಗಿಸಿದವರು ನುರಿತ ಬೈಕ್ ಸವಾರ, ಬೆಂಗಳೂರಿನ ಆಶಿಷ್ ಎಸ್.ಮೌದ್ಗಿಲ್. ಒಟ್ಟಾರೆ ಸಮಯದಲ್ಲಿ ಹಾಗೂ ಚತುಶ್ಚಕ್ರ ವಿಭಾಗದಲ್ಲಿ ರಾಣಾ- ಅಶ್ವಿನ್ ಜೋಡಿ ನಿರೀಕ್ಷೆಯಂತೆ ಜಯಗಳಿಸಿತ್ತು. ಈ ಬಾರಿಯೂ ಮೊದಲ ಸ್ಥಾನದ ಪುನರಾವರ್ತನೆ ವಿಶ್ವಾಸ ಅವರದ್ದು.

 

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.