ADVERTISEMENT

ದೀಪಾವಳಿಗೆ ಸಿಹಿ ಸಿಹಿ...

ಸುಧಾ ಜಯಪ್ರಕಾಶ ತಲವಾಟ
Published 21 ಅಕ್ಟೋಬರ್ 2011, 19:30 IST
Last Updated 21 ಅಕ್ಟೋಬರ್ 2011, 19:30 IST

ಹಯಗ್ರೀವ
ಬೇಕಾಗುವ ಪದಾರ್ಥ: 2 ಕಪ್ ಕಡ್ಲೆಬೇಳೆ, ಕಾಲು ಕಪ್ ತೊಗರಿಬೇಳೆ, 2 ಕಪ್ ಬೆಲ್ಲ, 1 ಕಪ್ ಕಾಯಿತುರಿ, ದ್ರಾಕ್ಷಿ - ಗೋಡಂಬಿ, ಚಿಟಿಕೆ ಏಲಕ್ಕಿ ಪುಡಿ, ಚಿಟಿಕೆ ಉಪ್ಪು.

ಮಾಡುವ ವಿಧಾನ: ಕುಕ್ಕರಿನಲ್ಲಿ ಕಡ್ಲಬೇಳೆ, ತೊಗರಿಬೇಳೆಯನ್ನು ಒಟ್ಟಿಗೇ ಬೇಯಿಸಿಕೊಳ್ಳಿ. ಒಂದು ಬಾಣಲೆಗೆ ಈ ಬೆಂದ ಬೇಳೆಗಳು ಕಾಯಿತುರಿ, ಬೆಲ್ಲ, ಉಪ್ಪುಹಾಕಿ ಸಣ್ಣ ಉರಿಯಲ್ಲಿ ಬೇಯಿಸಿ, ಇದು ಗಟ್ಟಿಯಾದ ಮೇಲೆ ಏಲಕ್ಕಿ ಪುಡಿ ಮತ್ತು ತುಪ್ಪದಲ್ಲಿ ಕರಿದ ದ್ರಾಕ್ಷಿ - ಗೋಡಂಬಿ ಸೇರಿಸಿ. ಇದನ್ನು ತುಪ್ಪ ಹಾಕಿಕೊಂಡು ತಿನ್ನಬೇಕು.

ರವೆ ಉಂಡೆ
ಬೇಕಾಗುವ ಪದಾರ್ಥ
: 3 ಕಪ್ ಚಿರೋಟಿ ರವೆ, ಒಂದೂವರೆ ಕಪ್ ತುಪ್ಪ, 3 ಕಪ್ ಸಕ್ಕರೆ, ದ್ರಾಕ್ಷಿ - ಗೋಡಂಬಿ, ಚಿಟಿಕೆ ಲವಂಗದ ಪುಡಿ(ಉಪ್ಪು ಬೇಡ).

ವಿಧಾನ: ತುಪ್ಪದಲ್ಲಿ ರವೆ ಹುರಿದು ಬದಿಗಿರಿಸಿ. ಒಂದು ಬಾಣಲೆಗೆ ಸಕ್ಕರೆ, ಸ್ವಲ್ಪ ನೀರು ಹಾಕಿ ಕುದಿಸಿ. ಒಂದೆಳೆ ಪಾಕ (ಸಕ್ಕರೆ ಪಾಕವನ್ನು ಎರಡು ಬೆರಳುಗಳಲ್ಲಿ ತೆಗೆದುಕೊಂಡು ಒಂದು ಎಳೆ ಬರುವಂತೆ) ತಯಾರಿಸಿ. ಬೆಂಕಿ ಆರಿಸಿ ಈ ಸಕ್ಕರೆ ಪಾಕಕ್ಕೆ ತುಪ್ಪದಲ್ಲಿ ಹುರಿದ ರವೆ ಹಾಗೂ ಲವಂಗದ ಪುಡಿ ಸೇರಿಸಿ ಸರಿಯಾಗಿ ಸೌಟಿನಿಂದ ಕದಡಿ. ತಣಿದ ಮೇಲೆ ದ್ರಾಕ್ಷಿ, ಗೋಡಂಬಿ ಸೇರಿಸಿ ಉಂಡೆ ಕಟ್ಟಿರಿ.

ಬಾಳೆ ಹಣ್ಣಿನ ಹಲ್ವಾ
ಬೇಕಾಗುವ ಪದಾರ್ಥ:
3 ಕಪ್ ಗೋಧಿ ಹಿಟ್ಟು, 3 ಕಪ್ ಸಕ್ಕರೆ, 5 ಬಾಳೆ ಹಣ್ಣುಗಳು, ಎರಡೂವರೆ ಕಪ್ ತುಪ್ಪ, 1 ಕಪ್ ಹಾಲು, ದ್ರಾಕ್ಷಿ - ಗೋಡಂಬಿ, ಚಿಟಿಕೆ ಉಪ್ಪು.

ವಿಧಾನ: ಒಂದು ಬಾಣಲೆಗೆ ತುಪ್ಪ ಹಾಕಿ ಗೋಧಿ ಹಿಟ್ಟು ಸೇರಿಸಿ ಪರಿಮಳ ಬರುವಂತೆ ಹುರಿಯಿರಿ. ಸಣ್ಣಗೆ ಕತ್ತರಿಸಿದ ಬಾಳೆಹಣ್ಣಿನ ಹೋಳುಗಳನ್ನು ಸೇರಿಸಿ ಮತ್ತೆ ಹುರಿಯಿರಿ. ನಂತರ ಎರಡು ಕಪ್ ಬಿಸಿ ನೀರು ಹಾಕಿ ಸಣ್ಣ ಉರಿಯಲ್ಲಿ ತಳ ಹಿಡಿಯದಂತೆ ಬೇಯಿಸಿ.

ನಂತರ ಹಾಲು, ಸಕ್ಕರೆ, ಉಪ್ಪು ಹಾಕಿ ಸರಿಯಾಗಿ ಸೌಟಿನಿಂದ ಕೆದಕಿ ಬೇಯಿಸಿ. ಗಟ್ಟಿಯಾದ ನಂತರ ತುಪ್ಪ ಸವರಿದ ಬಟ್ಟಲಿಗೆ ಹಾಕಿ ಚಾಕುವಿನಿಂದ ಬೇಕಾದ ಆಕಾರದಲ್ಲಿ ಕತ್ತರಿಸಿ. ಮೇಲೆ ತುಪ್ಪದಲ್ಲಿ ಕರಿದ ದ್ರಾಕ್ಷಿ, ಗೋಡಂಬಿ ಅಂಟಿಸಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT