ಬೆಂಗಳೂರು: ಮನೆಯಲ್ಲಿ ಉತ್ತಮ ಗಾಳಿ–ಬೆಳಕಿನ ವ್ಯವಸ್ಥೆ, ಪ್ರತ್ಯೇಕ ಕೊಠಡಿ, ಶೌಚಾಲಯ ಸೇರಿದಂತೆ ವಿವಿಧ ಸೌಕರ್ಯಗಳಿದ್ದಲ್ಲಿ ಮಾತ್ರ ಸರ್ಕಾರದ ಮಾರ್ಗಸೂಚಿಯ ಅನುಸಾರ ಕೋವಿಡ್ ಪೀಡಿತರು ಮನೆ ಆರೈಕೆಗೆ ಒಳಪಡಬೇಕು. ಇಲ್ಲವಾದಲ್ಲಿ ಆಸ್ಪತ್ರೆ ಅಥವಾ ಕೋವಿಡ್ ಆರೈಕೆ ಕೇಂದ್ರಗಳಿಗೆ ದಾಖಲಾಗಬೇಕು ಎಂದು ಆರೋಗ್ಯ ಇಲಾಖೆ ಸೂಚಿಸಿದೆ.
ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ಏರಿಕೆ ಕಂಡ ಕಾರಣ ಜುಲೈ ತಿಂಗಳಲ್ಲಿ 50 ವರ್ಷದೊಳಗಿನ ಲಕ್ಷಣರಹಿತರಿಗೆ ಮನೆ ಆರೈಕೆಗೆ ಅವಕಾಶ ನೀಡಲಾಗಿತ್ತು. ಆಗಸ್ಟ್ ತಿಂಗಳಲ್ಲಿ ಪರಿಷ್ಕೃತ ಮಾರ್ಗಸೂಚಿ ಹೊರಡಿಸಿದ ಇಲಾಖೆ, ವೈದ್ಯಕೀಯ ವಿಶ್ಲೇಷಣೆಯಿಂದ ಜೀವಕ್ಕೆ ಅಪಾಯವಿಲ್ಲ ಎನ್ನುವುದು ದೃಢಪಟ್ಟಲ್ಲಿ ಮಧುಮೇಹ, ಅಧಿಕ ರಕ್ತದೊತ್ತಡ ಸೇರಿದಂತೆ ವಿವಿಧ ಕಾಯಿಲೆಗಳನ್ನು ಎದುರಿಸುತ್ತಿರುವವರು ಹಾಗೂ 60 ವರ್ಷದವರೆಗಿನ ಕೋವಿಡ್ ಪೀಡಿತರು ಕೂಡ ಮನೆ ಆರೈಕೆಗೆ ಒಳಪಡಬಹುದು ಎಂದು ತಿಳಿಸಿತ್ತು.
ಮನೆ ಆರೈಕೆಗೆ ಒಳಗಾದ ವ್ಯಕ್ತಿ ಹೆಚ್ಚು ಅಸ್ವಸ್ಥನಾಗಿದ್ದಲ್ಲಿ ಅಥವಾ ಜೀವಕ್ಕೆ ಅಪಾಯ ಇರುವ ಲಕ್ಷಣಗಳು ಗೋಚರಿಸಿದಲ್ಲಿ ತ್ವರಿತವಾಗಿ ಹತ್ತಿರದ ಆಸ್ಪತ್ರೆಗೆ ತೆರಳಿ, ದಾಖಲಾಗಬೇಕು. ಮನೆ ಆರೈಕೆಗೆ ಒಳಗಾದ ವ್ಯಕ್ತಿಗೆ ಕುಟುಂಬದ ಸದಸ್ಯರು ಧೈರ್ಯ ತುಂಬಿ, ಸಕಾರಾತ್ಮಕ ಚಿಂತನೆಗಳು ಮೂಡುವಂತೆ ನೋಡಿಕೊಳ್ಳಬೇಕು. ಅನಗತ್ಯವಾಗಿ ಕುಟುಂಬದ ಸದಸ್ಯರು ಭಯ, ಆತಂಕಕ್ಕೆ ಒಳಗಾಗಬಾರದು. ಕನಿಷ್ಠ ಆರು ಅಡಿಗಳಷ್ಟು ಅಂತರವನ್ನು ಸೋಂಕಿತ ವ್ಯಕ್ತಿಯಿಂದ ಕಾಯ್ದುಕೊಳ್ಳಬೇಕು. ಹೊರಗಿನವರಿಗೆ ಪ್ರವೇಶಕ್ಕೆ ಅವಕಾಶ ನೀಡಬಾರದು. ನೆರೆಹೊರೆಯವರ ಸಹಕಾರದಿಂದ ಅಗತ್ಯ ವಸ್ತುಗಳನ್ನು ತರಿಸಿಕೊಳ್ಳಬೇಕು. ಗೊಂದಲ ಉಂಟಾದಲ್ಲಿ ಅಥವಾ ಮಾಹಿತಿಗೆ ಸಹಾಯವಾಣಿ ಸಂಖ್ಯೆ 14410ಕ್ಕೆ ಕರೆಮಾಡಿ ಎಂದು ಇಲಾಖೆ ತಿಳಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.