ADVERTISEMENT

ಅಲ್ಲೂರಿನ ಅಮೂಲ್ಯ ಶಾಸನ

​ಪ್ರಜಾವಾಣಿ ವಾರ್ತೆ
Published 4 ಜೂನ್ 2012, 19:30 IST
Last Updated 4 ಜೂನ್ 2012, 19:30 IST
ಅಲ್ಲೂರಿನ ಅಮೂಲ್ಯ ಶಾಸನ
ಅಲ್ಲೂರಿನ ಅಮೂಲ್ಯ ಶಾಸನ   

ಗುಲ್ಬರ್ಗ ಜಿಲ್ಲೆ ಚಿತ್ತಾಪೂರ ತಾಲ್ಲೂಕಿನ ಅಲ್ಲೂರ (ಬಿ) ಗ್ರಾಮದ ಪಾಳು ಬಸದಿಯೊಂದರಲ್ಲಿ 11ನೇ ಶತಮಾನದ ಜಿನ ಶಾಸನವನ್ನು ಪತ್ತೆ ಹಚ್ಚಿದ್ದಾರೆ ಇತಿಹಾಸ ಸಂಶೋಧಕ ಗೋಗಿಯ ಡಿ.ಎನ್. ಅಕ್ಕಿ.

ಗರ್ಭಗೃಹದಲ್ಲಿನ 6 ಅಡಿ ಎತ್ತರದ 23ನೆ ತೀರ್ಥಂಕರ ಪಾರ್ಶ್ವನಾಥರ ಪ್ರತಿಮೆಯ ಪಾದ ಪೀಠದಲ್ಲಿದೆ ಈ ಶಾಸನ. ಇದರ ಮೂರು ಸಾಲಿನ ಬರಹದಲ್ಲಿ `ಶ್ರೀ ಮುನಿಗುಣ ಚಂದ್ರದೇವರ ಶ್ರೀ ನಾರೀ ಪಾದಾಂಬುಜ ಷಟ್ಪದಂ ವಣಿಗ್ಜನಮಳ ಪಾರ್ಶ್ವ ಸೆಟ್ಟಿಯ ಕುಲಾಂಗನೆ ಚಾಕಲೆಯ; ಗ್ರ ನಂದನಂ ಮನು ಚರಿತೆಯ ... ಯೆನಿಪ್ಪ ಬೆಣ್ಣೆಯ ಮಾಚಿಸೆಟ್ಟಿ ತಾಂ ದೇವ (ರೊಂ) ದೊಲವಿಂದೆ ಮಾಡಿಸಿದನೀ ಜಿನಗೇ; ಹಂ... ಬಣ್ಣಿಪ...~ ಎಂದು ಬರೆಯಲಾಗಿದೆ. ಲಿಪಿಯ ಆಧಾರದ ಮೇಲೆ ನೋಡಿದರೆ ಇದು ಕ್ರಿಶ 1050ರ ಆಸುಪಾಸಿನ ಶಾಸನ ಇರಬಹುದು ಎನ್ನುವುದು ಶಾಸನ ತಜ್ಞ ಸೀತಾರಾಮ ಜಾಗೀರದಾರ ಮತ್ತು ಪ್ರಾಧ್ಯಾಪಕ ಎಂ.ಜಿ. ಮಂಜುನಾಥ ಅವರ ಅಭಿಪ್ರಾಯ.

ಗೊಂಕನಾಡಿನ ಭಾಗವಾಗಿದ್ದ ಅರಲಿನ ರಾಜಧಾನಿ ಅಲ್ಲೂರು, ಕಲ್ಯಾಣ ಚಾಲುಕ್ಯರ ಸಾಮಂತರಾಗಿದ್ದ ಹೈಹಯರ ಆಳ್ವಿಕೆಗೆ ಒಳಪಟ್ಟಿತ್ತು. ಇಲ್ಲಿದ್ದ ಶ್ರೀಮುನಿ ಗುಣಚಂದ್ರರ ಭಕ್ತ ಪಾರ್ಶ್ವಶೆಟ್ಟಿ, ಪತ್ನಿ ಚಾಕಲೆ ಮತ್ತು ಹಿರಿಮಗ ಬೆಣ್ಣೆಯ ಮಾಚಿಸೆಟ್ಟಿ ಈ ಬಸದಿ ಕಟ್ಟಿಸಿದರು ಎನ್ನುತ್ತದೆ ಶಾಸನ.

ಬಸದಿಯ ನವರಂಗದಲ್ಲಿನ ಪಾರ್ಶ್ವನಾಥರ ಪ್ರತಿಮೆಯೂ ಅಧ್ಯಯನ ಯೋಗ್ಯ. ಈ ಪ್ರದೇಶದಲ್ಲಿ ಅನೇಕ ಜಿನ ಮುನಿಗಳು ಸಲ್ಲೇಖನ ವಿಧಿಯಿಂದ ಸಮಾಧಿ ಹೊಂದಿದ ಸಾಧ್ಯತೆಯಿದೆ. ಅದೂ ಅಧ್ಯಯನದ ವಸ್ತು ಎನ್ನುವುದು ಅಕ್ಕಿಯವರ ಅಭಿಮತ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.